Champions Trophy Schedule: ಫೆಬ್ರವರಿ 23ರಂದು ಭಾರತ-ಪಾಕಿಸ್ತಾನ ಮುಖಾಮುಖಿ?
ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿ ಆಯೋಜನೆಯ ಬಗ್ಗೆ ಇದ್ದ ಗೊಂದಲ ಬಗೆ ಹರಿದಿದ್ದು ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ಆಯೋಜನೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಒಪ್ಪಿಕೊಂಡಿದ್ದು, ಭಾರತದ ಪಂದ್ಯಗಳು ಪಾಕಿಸ್ತಾನದಿಂದ ಹೊರಗಡೆ ನಡೆಯಲಿದೆ. ಪಂದ್ಯಾವಳಿ ವೇಳಾಪಟ್ಟಿ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ಈಗ ತಾತ್ಕಾಲಿಕ ವೇಳಾಪಟ್ಟಿಯೊಂದು ಲಭ್ಯವಾಗಿದೆ.
ರೇವ್ಸ್ಪೋರ್ಟ್ಸ್ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ತಾತ್ಕಾಲಿಕ ವೇಳಾಪಟ್ಟಿ ಹಂಚಿಕೊಂಡಿದ್ದು, ಈ ವೇಳಾಪಟ್ಟಿಯ ಪ್ರಕಾರ 2025ರ ಫೆಬ್ರವರಿ 19ರಂದು ಕರಾಚಿಯಲ್ಲಿ ಪಂದ್ಯಾವಳಿ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಪಾಕಿಸ್ತಾನ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ.

ವೇಳಾಪಟ್ಟಿ ಬಿಡುಗಡೆ ಯಾವಾಗ?
ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಭಾರತ ತಂಡ ಫೆಬ್ರವರಿ 20 ರಂದು ಬಾಂಗ್ಲಾದೇಶವನ್ನು ಎದುರಿಸಲಿದೆ. ಫೆಬ್ರವರಿ 23ರಂದು ಬಹು ನಿರೀಕ್ಷಿತ ಭಾರತ ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಈ ಪಂದ್ಯದ ಬಳಿಕ ಭಾರತ ತಂಡಕ್ಕೆ ಸುಧೀರ್ಘ ವಿಶ್ರಾಂತಿ ಸಿಗಲಿದ್ದು ತನ್ನ ಮೂರನೇ ಪಂದ್ಯವನ್ನು ಮಾರ್ಚ್ 3ರಂದು ಆಡಲಿದ್ದು ನ್ಯೂಜಿಲೆಂಡ್ ವಿರುದ್ಧ ಸೆಣೆಸಲಿದೆ. ಇದು ಭಾರತದ ಲೀಗ್ ಹಂತದ ಕೊನೆಯ ಪಂದ್ಯವಾಗಿರಲಿದೆ.
ಭಾರತ ಪಾಕಿಸ್ತಾನದ ಹೊರಗಡೆ ಪಂದ್ಯಗಳನ್ನು ಆಡುವುದು ದೃಢಪಟ್ಟಿದ್ದರೂ, ಸ್ಥಳ ಎಲ್ಲಿ ಎನ್ನುವುದು ಇನ್ನೂ ಖಚಿತವಾಗಿಲ್ಲ. ಶ್ರೀಲಂಕಾ ಅಥವಾ ದುಬೈನಲ್ಲಿ ಭಾರತದ ಪಂದ್ಯಗಳು ನಡೆಯಲಿವೆ ಎಂದು ಹೇಳಲಾಗಿದ್ದರು ಅಧಿಕೃತ ವೇಳಾಪಟ್ಟಿ ಬಿಡುಗಡೆಯಾದ ಬಳಿಕವೇ ಈ ಪ್ರಶ್ನೆಗೆ ಉತ್ತರ ಸಿಗಲಿದೆ.
ಭಾರತ ಸೆಮಿಫೈನಲ್ಗೆ ಅರ್ಹತೆ ಪಡೆದರೆ, ಸೆಮಿಫೈನಲ್ ಫೈನಲ್ ಪಂದ್ಯಗಳು ಕೂಡ ಪಾಕಿಸ್ತಾನದ ಹೊರಗಡೆ ನಡೆಯಲಿವೆ. ಒಂದು ವೇಳೆ ಭಾರತ ಸೆಮಿಫೈನಲ್ ಪ್ರವೇಶಿಸದಿದ್ದರೆ ಈ ಪಂದ್ಯಗಳು ಪಾಕಿಸ್ತಾನದಲ್ಲೇ ನಡೆಯಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬೇಡಿಕೆಯಿಟ್ಟಿದೆ.
ಹಠ ಮಾಡಿ ಗೆದ್ದ ಭಾರತ
ನವೆಂಬರ್ ತಿಂಗಳಿನಲ್ಲೇ ಪಂದ್ಯಾವಳಿ ವೇಳಾಪಟ್ಟಿ ಪ್ರಕಟಿಸಬೇಕಾಗಿದ್ದರೂ, ಪಾಕಿಸ್ತಾನಕ್ಕೆ ತಂಡವನ್ನು ಕಳಿಸಲ್ಲ ಎಂದು ಬಿಸಿಸಿಐ ಸ್ಪಷ್ಟವಾಗಿ ಹೇಳಿದ್ದರಿಂದ ಪಂದ್ಯಾವಳಿ ಆಯೋಜನೆ ಕಗ್ಗಂಟಾಗಿತ್ತು. ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ಆಯೋಜನೆಗೆ ಯಾವುದೇ ಕಾರಣಕ್ಕೂ ಒಪ್ಪಲ್ಲ ಭಾರತ ತಂಡ ಪಾಕಿಸ್ತಾನಕ್ಕೆ ಬಂದು ಆಡಲಿ ಸೂಕ್ತ ಭದ್ರತೆ ಒದಗಿಸುತ್ತೇವೆ ಎಂದು ಪಿಸಿಬಿ ಹೇಳಿದರೂ, ಭಾರತ ಸರ್ಕಾರ ಮಾತ್ರ ತಮ್ಮ ತಂಡವನ್ನು ಪಾಕಿಸ್ತಾನಕ್ಕೆ ಕಳಿಸಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು.
ತಟಸ್ಥ ಸ್ಥಳಗಳಲ್ಲಿ ಪಂದ್ಯಾವಳಿ ಆಯೋಜನೆ ಮಾಡಲು ಐಸಿಸಿ ಪಿಸಿಬಿ ಮನವೊಲಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದು ಪಿಸಿಬಿ ಇಟ್ಟಿದ್ದ ಬೇಡಿಕೆಗಳಿಗೂ ಒಪ್ಪಿಕೊಂಡಿದೆ. ಸದ್ಯ ಭಾರತದ ಪಂದ್ಯಗಳು ಎಲ್ಲಿ ನಡೆಯುತ್ತವೇ ಎನ್ನುವ ಪ್ರಶ್ನೆಯಿದ್ದು ಅಧಿಕೃತ ವೇಳಾಪಟ್ಟಿ ಬಿಡುಗಡೆಯಾದರೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.
ಸದ್ಯ ಭಾರತ ಆಸ್ಟ್ರೇಲಿಯಾದಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ಆಡುತ್ತಿದ್ದು, ಬಳಿಕ ಏಕದಿನ ಮಾದರಿಯತ್ತ ಗಮನ ಹರಿಸಲಿದೆ. ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ ಹಲವು ಆಟಗಾರರು ಆಡುತ್ತಿದ್ದು, ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಬಿಸಿಸಿಐ ಆಯ್ಕೆದಾರರ ಗಮನ ಸೆಳೆಯುವ ಲೆಕ್ಕಚಾರದಲ್ಲಿದ್ದಾರೆ ಆಟಗಾರರು.












Click it and Unblock the Notifications