ಕಾರು ಅಪಘಾತದಲ್ಲಿ ಗಾಯಗೊಂಡಿರುವ ಕ್ರಿಕೆಟಿಗ ರಿಷಬ್ ಪಂತ್ರನ್ನು ಭೇಟಿ ಮಾಡಿದ ಅನಿಲ್ ಕಪೂರ್, ಅನುಪಮ್ ಖೇರ್
ಡೆಹ್ರಾಡೂನ್, ಡಿಸೆಂಬರ್ 31: ಕಾರು ಅಪಘಾತದಲ್ಲಿ ಗಾಯಗೊಂಡು ಇಲ್ಲಿನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಕ್ರಿಕೆಟಿಗ ರಿಷಬ್ ಪಂತ್ ಅವರನ್ನು ಬಾಲಿವುಡ್ ನಟರಾದ ಅನಿಲ್ ಕಪೂರ್ ಮತ್ತು ಅನುಪಮ್ ಖೇರ್ ಶನಿವಾರ ಭೇಟಿಯಾದರು.
ಶುಕ್ರವಾರ ಮುಂಜಾನೆ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ತಮ್ಮ ಐಷಾರಾಮಿ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಾಗ ಭಾರತದ ಸ್ಟಾರ್ ಕ್ರಿಕೆಟಿಗ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
'ಅವರು (ಪಂತ್) ಆರೋಗ್ಯವಾಗಿದ್ದಾರೆ. ನಾವು ಅವರನ್ನು ಅಭಿಮಾನಿಗಳಾಗಿ ಭೇಟಿಯಾಗಿದ್ದೇವೆ. ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳಲು ಪ್ರಾರ್ಥಿಸೋಣ ಮತ್ತು ಅವರು ಮತ್ತೆ ಆಡುವುದನ್ನು ನಾವು ನೋಡುತ್ತೇವೆ' ಎಂದು ಕಪೂರ್ ಆಸ್ಪತ್ರೆಯಿಂದ ಹೊರಬಂದ ನಂತರ ಸುದ್ದಿಗಾರರಿಗೆ ತಿಳಿಸಿದರು.
ಕಪೂರ್ ಜೊತೆಗಿದ್ದ ಖೇರ್, ಕ್ರಿಕೆಟಿಗ ರಿಷಬ್ ಪಂತ್ರನ್ನು ನಾನು ತುಂಬಾ ನಗಿಸಿದೆ ಎಂದು ಹೇಳಿದರು.
'ಎಲ್ಲವೂ ಚೆನ್ನಾಗಿದೆ. ನಾವು ಪಂತ್, ಅವರ ತಾಯಿ ಮತ್ತು ಸಂಬಂಧಿಕರನ್ನು ಭೇಟಿ ಮಾಡಿದ್ದೇವೆ, ಅವರೆಲ್ಲರೂ ಚೆನ್ನಾಗಿದ್ದಾರೆ. ನಾವು ಅವನನ್ನು ತುಂಬಾ ನಗಿಸಿದೆವು' ಎಂದು ಖೇರ್ ತಿಳಿಸಿದರು.
ರಿಷಬ್ ಪಂತ್ ಅವರ ಕಾರು ನಿನ್ನೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಕ್ಕೆ ಈಡಾಗಿತ್ತು. ರಿಷಬ್ ಪಂತ್ ಅವರನ್ನು ಅಪರಿಚಿತ ವ್ಯಕ್ತಿಗಳು ಆಸ್ಪತ್ರೆಗೆ ದಾಖಲಿಸಿದ್ದರು. ಈಗ ಅವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ರಿಷಬ್ ಪಂತ್ ಅವರು ಚೇತರಿಸಿಕೊಳ್ಳಬೇಕೆಂದು ದೇಶದಾದ್ಯಂತ ಅಭಿಮಾನಿಗಳು ಪ್ರಾರ್ಥನೆ ಮಾಡಿದ್ದರು. ಪ್ರಧಾನಿ ಮೋದಿ ಸೇರಿದಂತೆ ದೇಶದ ಗಣ್ಯರು ರಿಷಬ್ ಪಂತ್ ಚೇತರಿಕೆಯಾಗಲಿ ಎಂದು ಟ್ವೀಟಿಸಿದ್ದರು.
ರಿಷ್ ಪಂತ್ ಅವರು ಶುಕ್ರವಾರ ಬೆಳಿಗ್ಗೆ ತಮ್ಮ ತವರೂರಾದ ಹಿಮಾಚಲ ಪ್ರದೇಶದ ರೂರ್ಕಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಿಷಬ್ ಪಂತ ಅವರ ಹಣೆಯಿಂದ ರಕ್ತಸ್ರಾವವಾಗಿತ್ತು. ಬಲಗಡೆಯ ಮೊಣಕಾಲಿಗೆ ಗಾಯಗಳಾಗಿವೆ.