ಶಿರಸಿ ಕೋಮು ಗಲಭೆ: ಯಾರ್ಯಾರು ಏನೇನು ಹೇಳಿದರು
ಉತ್ತರ ಕನ್ನಡ, ಡಿಸೆಂಬರ್ 12: ಪರೇಶ್ ಮೆಸ್ತಾ ಸಾವು ಉತ್ತರ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚಿದೆ, ಲಕ್ಷಾಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿ ಹಾನಿಯಾಗಿದೆ, ಜಿಲ್ಲೆಯ ಸಾಮಾನ್ಯ ಜನ ಭಯಭೀತಗೊಂಡಿದ್ದಾರೆ, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.
ಶಿರಸಿ ಧಗಧಗ, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸ
ಈದ್ ಹಬ್ಬದ ಸಮಯದಿಂದಲೂ ಬೂದಿ ಮುಚ್ಚಿದ ಕೆಂಡದಂತಿದ್ದ ಹೊನ್ನಾವರ ಪರೇಶ್ ಸಾವಿನ ನಂತರ ಬೆಂಕಿ ಉಂಡೆಗಳನ್ನೇ ಉಗುಳುತ್ತಿದೆ. ಮೊದಲಿಗೆ ಹೊನ್ನಾವರ, ಆನಂತರ ಭಟ್ಕಳ ಆನಂತರ ಕುಮಟ ಈಗ ಶಿರಸಿ ಹೀಗೆ ಕ್ರಮವಾಗಿ ಬೆಂಕಿ ಒಂದು ತಾಲ್ಲೂಕಿನಿಂದ ಮತ್ತೊಂದಕ್ಕೆ ವ್ಯಾಪಿಸುತ್ತಿದೆ.
ಕೋಮುಸೌಹಾರ್ದಕ್ಕೆ ಧಕ್ಕೆ ತರುವ ಪೋಸ್ಟ್ ಹಾಕಿದರೆ ಅರೆಸ್ಟ್
ರಾಜ್ಯದ ಎರಡು ಬಹುದೊಡ್ಡ ರಾಜಕೀಯ ಪಕ್ಷಗಳು ಪರೇಶ್ ಸಾವನ್ನು ಎರಡು ಭಿನ್ನ ಕೋನಗಳಿಂದ ನೋಡುತ್ತಿರುವುದು ಗಲಭೆಗೆ ಹೆಚ್ಚಿನ ಇಂಧನ ಒದಗಿಸಿದೆ. ಹಿಂದೂ ಪರ ಸಂಘಟನೆಗಳು ಮತ್ತು ಬಿಜೆಪಿ ಪಕ್ಷ ಪರೇಶ್ ಸಾವು ಅಲ್ಪಸಂಖ್ಯಾತರ ಧರ್ಮ ದಾಹಕ್ಕೆ ಆದ ಬಲಿ ಎಂದು ರಚ್ಚೆ ಹಿಡಿದಿದೆ. ಕಾಂಗ್ರೆಸ್ ಪಕ್ಷ ಗಲಭೆಯನ್ನು ಬಿಜೆಪಿ ಪ್ರೇರೇಪಿತ ಎನ್ನುತ್ತಿದೆ. ಏನೇ ಆಗಲಿ ಕರ್ನಾಟಕದ ಸಾಗರ ತೀರಕ್ಕೆ ಬೆಂಕಿ ಬಿದ್ದಿರುವುದಂತೂ ಸತ್ಯ.
ಪರೇಶ್ ಸಾವು, ಶಿರಸಿ ಪಟ್ಟಣದೆಲ್ಲೆಡೆ ಬೆಂಕಿಯ ಜ್ವಾಲೆ
ಪರೇಶ್ ಮೆಸ್ತಾ ಹತ್ಯೆ, ಕೋಮು ಗಲಭೆ ಬಗ್ಗೆ ಯಾವ ನಾಯಕರು ಏನೆಂದದು ತಿಳಿಯಲು ಮುಂದೆ ಓದಿ...
ಸ್ವ ಹಿತಾಸಕ್ತಿಗಾಗಿ ಗಲಭೆ
ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ಹೀಗೆ ಎರಡು ಧರ್ಮಗಳ ನಡುವೆ ಬೆಂಕಿ ಹತ್ತಿಸುತ್ತಿದೆ, ಇದನ್ನು ನಾನು ತೀರ್ವವಾಗಿ ಖಂಡಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಶುಭಾಷಯ ಕೋರಲು ದೆಹಲಿ ತೆರಳಿರುವ ಅವರು ಶಿರಸಿ ಗಲಭೆಗೆ ಬಿಜೆಪಿಯನ್ನು ಗುರಿ ಮಾಡಿದ್ದಾರೆ.
ಹಿಂದೂಗಳ ಹತ್ಯೆ ಹಿಂದೆ ಸರ್ಕಾರದ ಕೈವಾಡ
ರಾಜ್ಯದಲ್ಲಿ ನಡೆಯುತ್ತಿರುವ ಹಿಂದೂಗಳ ಹತ್ಯೆ ಹಿಂದೆ ಸರ್ಕಾರದ ಕೈವಾಡ ಇದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗಂಭೀರ ಅರೋಪ ಮಾಡಿದ್ದಾರೆ.
ಯಾದಗಿರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ರಾಜ್ಯದಲ್ಲಿ ಇದುವರೆಗೂ 20ಕ್ಕೂ ಹೆಚ್ಚು ಹಿಂದೂಗಳ ಹತ್ಯೆ ನಡೆದಿದೆ. ಈಗ ಪರೇಶ್ ಮೇಸ್ತ ಅವರ ಹತ್ಯೆ ನಡೆದಿದೆ. ಆದರೆ, ಹತ್ಯೆ ಕುರಿತು ವೈದ್ಯಕೀಯ ವರದಿ ಸಹಜ ಸಾವು ಎಂಬುದಾಗಿ ಬಂದಿದೆ. ಈ ವೈದ್ಯಕೀಯ ವರದಿ ಮೇಲೆ ಸರ್ಕಾರ ಪ್ರಭಾವ ಬೀರಿದೆ' ಎಂದು ದೂರಿದರು.
ಬಿಜೆಪಿ ದ್ವೇಷ ಬಿತ್ತುತ್ತಿದೆ
'ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ನಾಯಕರು ಮತ್ತು ಸಂಘ ಪರಿವಾರ ಸದಸ್ಯರು ಕರ್ನಾಟಕದಲ್ಲಿ ಹಿಂಸೆ ಹುಟ್ಟುಹಾಕುತ್ತಿದ್ದಾರೆ, ಕೋಮು ಸೌಹಾರ್ದ ಹಾಳುಗೆಡವುದು ಅವರ ಮುಖ್ಯ ಉದ್ದೇಶ, ಪ್ರಸ್ತುತ ಉತ್ತರ ಕನ್ನಡದಲ್ಲಿ ಎದ್ದಿರುವ ಕೋಮು ಗಲಭೆಯ ಹಿಂದೆ ಯಾವುದೇ ವ್ಯಕ್ತಿ ಇದ್ದರು ಅವರನ್ನು ಬಂಧಿಸಬೇಕು' ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆ ವರದಿ ತಿದ್ದಲಾಗಿದೆ
ಪರೇಶ್ ಮೆಸ್ತಾ ಸಾವು ಆಕಸ್ಮಿಕವಲ್ಲ, ಸರ್ಕಾರ ಬೇಕೆಂದು ಆತನ ಮರಣೋತ್ತರ ಪರೀಕ್ಷೆ ವರದಿಯನ್ನು ತಿದ್ದಿದೆ. ಸರ್ಕಾರ ಫಿಎಫ್ಐ ಗೂಂಡಾಗಳ ಜೊತೆ ಸೇರಿ ಹಿಂದೂ ಕಾರ್ಯಕರ್ತರ ಹತ್ಯೆಯಲ್ಲಿ ತೊಡಗಿದೆ. ಶಾಂತವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದ ಹಿಂದೂ ಸಂಘಟನೆಗಳ ಮೇಲೆ ಲಾಠಿ ಚಾರ್ಜ್ ನಡೆಸಿದೆ, ಸರ್ಕಾರ ಪರೇಶ್ ಮೆಸ್ತಾ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಮಾಜಿ ಸಚಿವೆ ಬಿಜೆಪಿ ಮುಖಂಡರಾದ ಶೋಭಾ ಕರಂದ್ಲಾಜೆ ಬೆಂಗಳೂರಿನಲ್ಲಿ ಹೇಳಿದ್ದಾರೆ.
ಕಾನೂನು ಕೈಗೆ ತೆಗೆದುಕೊಳ್ಳುವವರ ವಿರುದ್ಧ ಕ್ರಮ
ಅಮಾಯಕರ ರಕ್ಷಣೆ ಸರ್ಕಾರದ ಜವಾಬ್ದಾರಿ. ಶಾಂತಿಗೆ ಭಂಗ ತರುವ ಯಾರೇ ಆಗಲಿ, ಎಷ್ಟೇ ದೊಡ್ಡ ವ್ಯಕ್ತಿಯಾದರೂ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿದ್ದಾರೆ. ಸಾರ್ವಜನಿಕರು ಧೈರ್ಯಗೆಡಬಾರದು. ನಾಗರೀಕರ ರಕ್ಷಣೆ ಸರ್ಕಾರದ ಹೊಣೆ, ತನ್ನ ಹೊಣೆಯನ್ನು ಸರ್ಕಾರ ಪರಿಣಾಮಕಾರಿಯಾಗಿ ನಿಭಾಯಿಸಲಿದೆ ಎಂದು ಉತ್ತರ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಅಮಿತ್ ಷಾ ಅವರ ಪ್ರೇರಣೆಯಿಂದ ಗಲಭೆ ಸೃಷ್ಠಿಸುತ್ತಿರುವ ಬಿಜೆಪಿ
ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಅಮಿತ್ ಷಾ ಅವರ ಆಜ್ಞೆಯಂತೆ ರಾಜ್ಯ ಬಿಜೆಪಿ ಗಲಭೆ ಸೃಷ್ಠಿಸುವಲ್ಲಿ ನಿರತವಾಗಿದೆ, ಇಡೀ ರಾಜ್ಯದಲ್ಲಿ ಹನುಮಜಯಂತಿ ಶಾಂತಿಯುತವಾಗಿ ಆಗಿದೆ, ಹೊನ್ನಾವರದಲ್ಲಿ ಮಾತ್ರ ಗಲಭೆ ಏಕಾಯಿತು. ಇದೀಗ ಉತ್ತರ ಕನ್ನಡ ಗಲಭೆಗೂ ಇದೇ ಕಾರಣ ಎಂದು ಸೂಚ್ಯವಾಗಿ ಬಿಜೆಪಿ ಬೇಕೆಂದೇ ಗಲಭೆ ಸೃಷ್ಠಿಸುತ್ತಿದೆ ಎಂದರು.
ಪರೇಶ್ ಮೆಸ್ತಾ ಸಾವಿನ ಬಗ್ಗೆ ನಮಗೂ ಕನಿಕರ ಇದೆ, ಆತನ ಮರಣೋತ್ತರ ಪರೀಕ್ಷೆಯ ವಿಡಿಯೋ ಇದೆ ಬಿಜೆಪಿ ಬೇಕಿದ್ದರೆ ಪರಿಶೀಲಿಸಲಿ, ಸುಮ್ಮನೆ ಅವರ ಲಾಭಕ್ಕೆ ಸುಳ್ಳು ಆರೋಪ ಮಾಡುವುದನ್ನು ಅದು ಬಿಡಬೇಕು. ಪರೇಶ್ ಮೆಸ್ತಾ ಸಾವಿನ ಬಗ್ಗೆ ಇನ್ನಷ್ಟು ತನಿಖೆ ಮಾಡಲಾಗುವುದು ಎಂದು ಅವರು ಹೇಳಿದರು.
ಕೇರಳ ಮಾದರಿಯಲ್ಲಿ ಹಿಂದೂಗಳ ಕೊಲೆ
ಐಜಿಪಿ ಹೇಮಂತ ನಿಂಬಳ್ಕರ್ ಅನ್ನು ಬಳಸಿಕೊಂಡು ಕೇರಳ ಮಾದರಿಯಲ್ಲಿ ಹಿಂದೂಗಳ ಸರಣಿ ಹತ್ಯೆ ನಡೆಸಲು ಕಾಂಗ್ರೆಸ್ ಹೊಂಚು ಹಾಕಿದೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಹೇಳಿದರು. ಸಿದ್ದರಾಮಯ್ಯ ಅವರು ಮುಸಲ್ಮಾನರ ಮುಖ್ಯಮಂತ್ರಿಯಾಗಿ ವರ್ತಿಸುತ್ತಿದ್ದಾರೆ. ಹಿಂದೂಗಳ ಹತ್ಯೆಯಲ್ಲಿ ತೊಡಗಿಕೊಂಡಿರುವ ಕಾಂಗ್ರೆಸ್ ಪಕ್ಷ ಶಾಪಕ್ಕೆ ಗುರಿ ಆಗಲಿದೆ, ಗಣಪತಿ ಆತ್ಮಹತ್ಯೆ ಪ್ರಕರಣದ ರೀತಿಯಲ್ಲಿ ಇಲ್ಲಿಯೂ ಮರಣೋತ್ತರ ಪರೀಕ್ಷೆ ವರದಿ ತಿದ್ದಲಾಗಿದೆ, ಹಿಂದೂಗಳ ಹೆಣಗಳ ಮೇಲೆ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಕಠಿಣ ಶಬ್ದಗಳಲ್ಲಿ ಟೀಕಿಸಿದರು.
ಬಿಜೆಪಿಯ ಈ ವರ್ತನೆ ಬಗ್ಗೆ ಶಂಕೆ ಇತ್ತು
ಚುನಾವಣೆ ಹತ್ತಿರ ಬಂದಹಾಗೆ ಬಿಜೆಪಿಯವರು ಕೋಮುಗಲಭೆಗಳನ್ನು ಮಾಡುತ್ತಾರೆ ಎಂಬ ಶಂಕೆ ಇತ್ತು ಈಗ ಅದು ನಿಜವಾಗಿದೆ, ಕರಾವಳಿ ಪ್ರದೇಶದಿಂದಲೇ ಇದನ್ನು ಪ್ರಾರಂಭ ಮಾಡುತ್ತಾರೆ ಎಂಬುದರ ಬಗ್ಗೆಯೂ ನಮಗೆ ಅನುಮಾನವಿತ್ತು ಅದು ಕೂಡ ಸತ್ಯವಾಗಿದೆ, ಬಿಜೆಪಿ ತನ್ನ ರಾಜಕೀಯ ಲಾಭಕ್ಕೆ ಕರಾವಳಿಗೆ ಬೆಂಕಿ ಇಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದ್ದಾರೆ.
ರಾಷ್ಟ್ರೀಯ ಪಕ್ಷಗಳ ಆಟ
ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಅಮಾಯಕ ಜನರ ಜೀವನದ ಜೊತೆ ಆಟ ಆಡುತ್ತಿವೆ. ದಯವಿಟ್ಟು ಅಲ್ಲಿನ ಜನಗಳು, ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳು ರಾಷ್ಟ್ರೀಯ ಪಕ್ಷಗಳ ಹುನ್ನಾರಕ್ಕೆ ಬಲಿಯಾಗದೆ ಎಚ್ಚರದಿಂದಿರಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ರಾಜಕೀಯ ಪಕ್ಷವೊಂದರ ಹುನ್ನಾರ
ಹೊನ್ನಾವರದ ಯುವಕ ಪರೇಶ ಮೇಸ್ತ ಸಾವಿನ ಪ್ರಕರಣದ ಬಗ್ಗೆ ರಾಜಕೀಯ ಪಕ್ಷವೊಂದು ಡಿಸೆಂಬರ್ 9ರಂದು ನೀಡಿದ್ದ ಪತ್ರಿಕಾ ಪ್ರಕಟಣೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಅಪ್ಪಟ ಸುಳ್ಳು ಎಂದು ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಹೇಳಿದ್ದಾರೆ.
ಯಾರು ಗಲಭೆಗೆ ಶ್ರೀಕಾರ ಹಾಡಿದರು, ಯಾರು ಅದಕ್ಕೆ ಬೆಂಬಲ ನೀಡಿದರು, ಯಾರು ಪೊಲೀಸ್ ಡ್ರೈವರ್ ನನ್ನು ಕೊಲ್ಲಲು ಪ್ರಯತ್ನಿಸಿದರು, ಯಾವ ಕಾರಣಕ್ಕಾಗಿ ಗಲಭೆಗೆ ಪ್ರೇರಣೆ ನೀಡಲಾಯಿತು ಎಲ್ಲ ಪ್ರಶ್ನೆಗಳಿಗೂ ನಡೆಸಿದ ಮೇಲೆ ಉತ್ತರ ಸಿಗಲಿದೆ ಎಂದು ಅವರು ಹೇಳಿದ್ದಾರೆ.