ಶಿರಸಿ- ಕುಮಟಾ ಮಾರ್ಗದ ಗೊಂದಲ: ರಸ್ತೆ ಬಂದ್ ಮಾಡದೇ ನಡೆಯಲಿದೆ ಕಾಮಗಾರಿ
ಕಾರವಾರ, ಅಕ್ಟೋಬರ್ 14: ಶಿರಸಿ- ಕುಮಟಾ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಆರಂಭಿಸುವ ಕಾರಣ ರಸ್ತೆಯನ್ನು ಒಂದೂವರೆ ವರ್ಷ ಬಂದ್ ಮಾಡಲು ಜಿಲ್ಲಾಧಿಕಾರಿ ಆದೇಶಿಸಿರುವುದು ಗೊಂದಲಕ್ಕೆ ಕಾರಣವಾಗಿತ್ತು. ಆದರೆ, ರಸ್ತೆ ಬಂದ್ ಮಾಡದೇ, ಲಘು ವಾಹನಗಳಿಗೆ ಸಂಚರಿಸಲು ಅವಕಾಶ ನೀಡಿ ಕಾಮಗಾರಿ ನಡೆಸುವುದಾಗಿ ಈಗ ಸ್ಪಷ್ಟತೆ ಸಿಕ್ಕಿದೆ.
ಕುಮಟಾ- ಶಿರಸಿ ರಸ್ತೆ ಮೇಲ್ದರ್ಜೆಗೇರಿಸುವ ಕಾಮಗಾರಿ ಸಂಬಂಧ ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಗುತ್ತಿಗೆದಾರರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಹಾಗೂ ಎಂಜಿನಿಯರ್ ಗಳ ಸಭೆ ನಡೆಸಿರುವ ಕುಮಟಾ ಉಪವಿಭಾಗಧಿಕಾರಿ ಅಜಿತ್ ರೈ, ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಯಾವುದೇ ಕಾರಣಕ್ಕೂ ಶಿರಸಿ- ಕುಮಟಾ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡುವುದಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ತಿಳಿಸಿದ್ದಾಗಿ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

ಲಘು ವಾಹನ ಸಂಚಾರಕ್ಕಿದೆ ಅನುಮತಿ
ಕಾಮಗಾರಿ ಪ್ರಗತಿಯಲ್ಲಿದ್ದರೂ ಲಘು ವಾಹನಗಳು ಇಲ್ಲಿ ಸಂಚರಿಸಬಹುದು. ಒಂದು ವಾರಗಳ ಬಳಿಕ ರಸ್ತೆ ಕಾಮಗಾರಿ ಆರಂಭವಾಗಬಹುದು. ಕಾಮಗಾರಿ ಆರಂಭದ ನಂತರ ಕೂಡ ಲಘು ವಾಹನಗಳು ಸಂಚರಿಸಲು ಪಕ್ಕದಲ್ಲೇ ವ್ಯವಸ್ಥೆ ಮಾಡಿಕೊಡುವುದಾಗಿ ಗುತ್ತಿಗೆದಾರರು ಹಾಗೂ ಎನ್ಎಚ್ಎ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಸದ್ಯ ರಸ್ತೆಯನ್ನು ಸಂಪೂರ್ಣ ಮುಚ್ಚುವುದಿಲ್ಲ. ಭಾರೀ ಪ್ರಮಾಣದ ಸರಕುಗಳನ್ನು ಸಾಗಾಟ ಮಾಡುವ ವಾಹನಗಳಿಗೆ ಪರ್ಯಾಯ ಮಾರ್ಗಗಳಲ್ಲೇ ಸಂಚರಿಸಲು ಸೂಚಿಸಲಾಗುತ್ತದೆ ಎಂದು ತಿಳಿಸಿದರು.

ಭಾಗಶಃ ರಸ್ತೆ ಬಂದ್ ಮಾಡಿ ಕಾಮಗಾರಿ
ಸಮತಟ್ಟಾದ ಜಾಗದಲ್ಲಿ ಕಾಮಗಾರಿ ನಡೆಸುವ ವೇಳೆ ಲಘು ವಾಹನಗಳು ಓಡಾಡಬಹುದು. ಆದರೆ, ಘಟ್ಟ ಪ್ರದೇಶ ಹಾಗೂ ಸೇತುವೆಗಳಿರುವ ಕಡೆಗಳಲ್ಲಿ ಕಾಮಗಾರಿ ಮಾಡುವ ವೇಳೆ ವಾಹನಗಳು ಸಂಚರಿಸಲು ಆಗಷ್ಟು ಜಾಗದ ಕೊರತೆ ಉಂಟಾಗುವುದಿದ್ದರೆ ಮೊದಲೇ ಗುತ್ತಿಗೆದಾರರು ಹಾಗೂ ಎನ್ಎಚ್ಎನವರು ನಮಗೆ ಪತ್ರ ಬರೆಯಲಿದ್ದಾರೆ. ಆ ಪ್ರಕಾರ ಅರಣ್ಯ ಇಲಾಖೆ, ಪೊಲೀಸ್ ಹಾಗೂ ಇತರ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ನಡೆಸಿ, ಲಘು ವಾಹನಗಳು ಓಡಾಡಲೂ ಸಾಧ್ಯವೇ ಇಲ್ಲವೆಂದ ಪಕ್ಷದಲ್ಲಿ ಮಾತ್ರ ಕಾಮಗಾರಿ ನಡೆಯುವಷ್ಟು ಭಾಗದ ರಸ್ತೆ ಬಂದ್ ಮಾಡಿ ಪ್ರಕಟಣೆ ನೀಡುತ್ತೇವೆ. ಅಲ್ಲಿಗೆ ಸಮೀಪದ ಒಳ ರಸ್ತೆಗಳಿಂದ ಪರ್ಯಾಯ ಮಾರ್ಗ ಕಲ್ಪಿಸಲು ಯೋಜಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ವಿಚಾರ ಮಾಡಿಯೇ ತೀರ್ಮಾನ; ಶಿವರಾಮ್ ಹೆಬ್ಬಾರ್
ಶಿರಸಿ- ಕುಮಟಾ ರಸ್ತೆಯ ನಡುವೆ, ಶಿರಸಿಯಿಂದ ಅನತಿ ದೂರದಲ್ಲಿ ಟೋಲ್ ಗೇಟ್ ಕೂಡ ಆರಂಭಿಸಲಾಗುತ್ತದೆ ಎಂಬ ಮಾಹಿತಿ ಕೂಡ ಸಭೆಯಲ್ಲಿ ನೀಡಲಾಗಿದೆ. ಇತ್ತ ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಕೂಡ, ಶಿರಸಿ- ಕುಮಟಾ ರಸ್ತೆ ಉನ್ನತೀಕರಣ ಕಾಮಗಾರಿಗಾಗಿ ರಸ್ತೆ ಬಂದ್ ಮಾಡುವುದರಿಂದ ಮುಂದೊದಗಬಹುದಾದ ಪರಿಣಾಮಗಳ ಬಗ್ಗೆ ವಿಚಾರ ಮಾಡಿಯೇ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ರಸ್ತೆ ಸಂಚಾರಕ್ಕೆ ಮುಕ್ತವಾಗಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

"ಜಿಲ್ಲೆಯ ಔದ್ಯೋಗಿಕ ಬೆಳವಣಿಗೆಗೆ ತೊಂದರೆ"
ಎರಡು ವರ್ಷ ಹೆದ್ದಾರಿ ಬಂದ್ ಮಾಡುವುದು ಯೋಚಿಸುವ ವಿಷಯ. ಜಿಲ್ಲೆಯ ಅಭಿವೃದ್ಧಿಗೆ ಈ ರಸ್ತೆ ಸಂಚಾರ ಬಂದ್ ಮಾಡುವುದು ಜನರ ಹಿತದೃಷ್ಟಿಯಿಂದ ಸೂಕ್ತವಲ್ಲ. ಶಿರಸಿ- ಕುಮಟಾ ರಸ್ತೆ ಉನ್ನತೀಕರಿಸುವ ಸಂದರ್ಭದಲ್ಲಿ ಮಾರ್ಗ ಸಂಪೂರ್ಣ ಬಂದ್ ಮಾಡಿದರೆ ಔದ್ಯೋಗಿಕ ಬೆಳವಣಿಗೆಗೆ ತೊಂದರೆಯಾಗುತ್ತದೆ. ಹೀಗಾಗಿ ರಸ್ತೆಯ ಒಂದು ಭಾಗದಲ್ಲಿ ಸಂಚಾರ ಕಲ್ಪಿಸಬಹುದೇ ಎಂಬುದರ ಬಗ್ಗೆ ಸಮಾಲೋಚನೆ ನಡೆಸಲಾಗುತ್ತದೆ ಎಂದಿದ್ದರು.












Click it and Unblock the Notifications