ಶಿರಸಿ-ಕುಮಟಾ ರಸ್ತೆ: ಹೈಕೋರ್ಟ್ ಅನುಮತಿ ಪಡೆಯದೇ ಮರ ತೆರವು
ಶಿರಸಿ, ಫೆಬ್ರವರಿ 21; ಕುಮಟಾ- ಶಿರಸಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸುವ ಕಾಮಗಾರಿಗಾಗಿ ಮರಗಳನ್ನು ಕಡಿಯುತ್ತಿರುವುದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಾಜ್ಯ ಅರಣ್ಯ ಇಲಾಖೆಯ ವಿರುದ್ಧ 'ಯುನೈಟೆಡ್ ಕನ್ಸರ್ವೇಶನ್ ಮೂಮೆಂಟ್' ಸಂಘಟನೆ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಹೆದ್ದಾರಿ ವಿಸ್ತರಣೆಗಾಗಿ ಮರಗಳನ್ನು ತೆರವು ಮಾಡದಂತೆ 2020ರ ಡಿ.22ರಂದು ಕರ್ನಾಟಕ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಸಂಘಟನೆಯು, ಕೇವಲ ಅರಣ್ಯ ಸಚಿವಾಲಯವು ಕಾಮಗಾರಿಗೆ 2020ರ ಸೆ.23ರಂದು ನೀಡಿದ ಮೊದಲ ಹಂತದ ಅನುಮತಿಯನ್ನೇ ಮುಂದಿಟ್ಟುಕೊಂಡು ಕಾಮಗಾರಿ ಆರಂಭಿಸಲಾಗಿದೆ ಎಂದು ಆರೋಪಿಸಿತ್ತು.
ಇದರ ಅನ್ವಯ ಹೈಕೋರ್ಟ್ ಈ ವರ್ಷದ ಜನವರಿ 5ರಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ರಾಜ್ಯ ಅರಣ್ಯ ಇಲಾಖೆಗೆ ನೋಟಿಸ್ ಜಾರಿಗೊಳಿಸಿ, ಈ ಯೋಜನೆಯ ಅನುಷ್ಠಾನದ ಸಮಯದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ನೀವೇ ಜವಾಬ್ದಾರರಾಗಿರುತ್ತೀರಿ ಎಂದು ಸ್ಪಷ್ಟಪಡಿಸಿತ್ತು.

ಕಾನೂನಿನ ಪ್ರಕಾರ ಮರಗಳನ್ನು ಕತ್ತರಿಸುವ ಮೊದಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆಯು ಹೈಕೋರ್ಟ್ನಿಂದ ಅನುಮತಿ ಪಡೆದಿರಬೇಕು. ಆದರೆ, ತರಾತುರಿಯಲ್ಲಿ ಮರಗಳನ್ನು ಕಡಿದಿರುವುದು ಹೈಕೋರ್ಟ್ನ ಆದೇಶಗಳಿಗೆ ಅಗೌರವ ತೋರಿದಂತೆ.
ಹೈಕೋರ್ಟ್ ನೀಡಿರುವ ಆದೇಶ ಎರಡೂ ಇಲಾಖೆಯ ಅಧಿಕಾರಿಗಳ ಗಮನದಲ್ಲೂ ಇದೆ. ಆದರೂ ಕಾಮಗಾರಿ ಮುಂದುವರಿಸಿರುವುದು ಸರಿಯಲ್ಲ. ಮರಗಳನ್ನು ತೆರವು ಮಾಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಭಾರತ್ ಮಾಲಾ ಫೇಸ್- 1 ಅಡಿಯಲ್ಲಿ ಅಂಕೋಲಾ ತಾಲೂಕಿನ ಬೇಲೇಕೇರಿ ಬಂದರನ್ನು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ಮಹತ್ವಾಕಾಂಕ್ಷಿ ಯೋಜನೆಯಲ್ಲಿ, ಬೇಲೇಕೇರಿ ಬಂದರು ಲಿಂಕ್ ರೋಡ್ ನಿಂದ 4.25 ಕಿ.ಮೀ. ಹಾಗೂ ಶಿರಸಿಯಿಂದ ಕುಮಟಾವರೆಗೆ 60 ಕಿ.ಮೀ. ರಸ್ತೆಯು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೊಳ್ಳಲಿದ್ದು, ಅಂದಾಜು 440 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯಬೇಕಿದೆ.












Click it and Unblock the Notifications