ಸಿದ್ದರಾಮಯ್ಯ ರಾಜೀನಾಮೆ ಕೊಡಿಸುವೆ : ಯಡಿಯೂರಪ್ಪ
ಬೆಂಗಳೂರು, ಅ,22 : "ಯಡಿಯೂರಪ್ಪ ಮತ್ತು ಈಶ್ವರಪ್ಪ ಸಾವಿರ ಕೋಟಿ ಲೂಟಿ ಹೊಡೆದಿದ್ದಾರೆ" ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಯಡಿಯೂರಪ್ಪ, ರಾಜಕೀಯ ಸಭ್ಯತೆ ಮತ್ತು ಶಿಷ್ಟಾಚಾರ ಮರೆತು ಸಿದ್ದರಾಮಯ್ಯ ಅವರ ವಿರುದ್ಧ ಏಕವಚನ ಬಳಸಿ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದ ಎನ್ಡಿವಿ ಹಾಸ್ಟೆಲ್ ಆವರಣದಲ್ಲಿ ಸೋಮವಾರ ಕೆಜೆಪಿ ಸಮಾವೇಶ ಆಯೋಜಿಸಲಾಗಿತ್ತು. ಸಮಾವೇಶದಲ್ಲಿ ಮಾತನಾಡಿದ ಯಡಿಯೂರಪ್ಪ, ತಮ್ಮ ಭಾಷಣದ ಉದ್ದಕ್ಕೂ ಏಕವಚನ ಬಳಸಿದ್ದಲ್ಲದೆ ಹಲವು ಬಹಿರಂಗ ಸವಾಲುಗಳನ್ನೂ ಸಿದ್ದರಾಮಯ್ಯ ಅವರಿಗೆ ಹಾಕುವ ಮೂಲಕ, ಸಿದ್ದರಾಮಯ್ಯ ಅವರ ಹೇಳಿಕೆಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.
"ನಮ್ಮ ತಪ್ಪಿನಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನೀವು ಸಿಎಂ ಆಗಿದ್ದೀರಿ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳೆಲ್ಲ ಸೇರಿ ಕಾಂಗ್ರೆಸ್ ಪಕ್ಷಕ್ಕೆ ಮೂರು ಸ್ಥಾನವೂ ಸಿಗದಂತೆ ಮಾಡಿ ನಿಮ್ಮನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸದೆ ಹೋದರೆ ನಾನು ಯಡಿಯೂರಪ್ಪನೇ ಅಲ್ಲ,'' ಎಂದು ಪ್ರತಿಜ್ಞೆ ಮಾಡಿದ್ದಾರೆ.
ಭಾನುವಾರ ಶಿವಮೊಗ್ಗದಲ್ಲಿ "ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಡಿಸಿಎಂ ಈಶ್ವರಪ್ಪ ಹಣ ಲೂಟಿ ಹೊಡೆಯುವುದನ್ನು ಬಿಟ್ಟು ಬೇರೇನೂ ಮಾಡಲಿಲ್ಲ. ಮಾಜಿ ಸಿಎಂ ಸಾವಿರ ಕೋಟಿ ರೂ.ಗಿಂತಲೂ ಹೆಚ್ಚು ಹಣ ಲೂಟಿ ಹೊಡೆದಿದ್ದಾರೆ" ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸದ್ಯ ಯಡಿಯೂರಪ್ಪ ಅವರ ಕೋಪಕ್ಕೆ ಕಾರಣವಾಗಿದ್ದು ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ. ಸಿದ್ದರಾಮಯ್ಯ ಅವರನ್ನು ಯಡಿಯೂರಪ್ಪ ಟೀಕಿಸಿದ್ದು ಹೀಗೆ
ನಿಮ್ಮ ಕಾರ್ಯವೈಖರಿಗೆ ನಾಚಿಕೆಯಾಗಬೇಕು
ಜಾತಿ ವಿಷಬೀಜ ಬಿತ್ತಿ 'ಅಹಿಂದ' ಹೆಸರು ಹೇಳಿಕೊಂಡು ನಾಟಕವಾಡುತ್ತಿರುವ ನಿಮ್ಮ ಕಾರ್ಯವೈಖರಿಗೆ ನಾಚಿಕೆಯಾಗಬೇಕು. ಏಳು ಬಾರಿ ಹಣಕಾಸು ಸಚಿವರಾಗಿದ್ದರೂ ರಾಜ್ಯದ ಬಜೆಟ್ಟನ್ನು 37 ಸಾವಿರ ಕೋಟಿ ರೂ. ದಾಟಿಸಲಾಗಲಿಲ್ಲ. ನಾವು ಒಂದು ಲಕ್ಷ ಕೋಟಿ ರೂ.ಗೆ ಬಜೆಟ್ ಮಂಡಿಸಿದ್ದೇವೆ. ಯಡಿಯೂರಪ್ಪ ತುಂಬಿಸಿದ್ದ ಖಜಾನೆ ಹಣದಲ್ಲಿ ನೀವು ಆಡಳಿತ ನಡೆಸುತ್ತಿದ್ದೀರಿ.
ರಾಜೀನಾಮೆ ಕೊಡಿಸುವೆ
ನಮ್ಮ ತಪ್ಪಿನಿಂದಾಗಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ನೀವು ಮುಖ್ಯಮಂತ್ರಿ ಆಗಿದ್ದೀರಿ. ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳೆಲ್ಲ ಸೇರಿ ಕಾಂಗ್ರೆಸ್ ಪಕ್ಷಕ್ಕೆ ಮೂರು ಸ್ಥಾನವೂ ಸಿಗದಂತೆ ಮಾಡಿ, ನಿಮ್ಮನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸದೆ ಹೋದರೆ ನಾನು ಯಡಿಯೂರಪ್ಪನೇ ಅಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಅಧಿಕಾರದ ಅಮಲು
ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತಿದ್ದೀರಿ ಎಂಬ ಅಮಲಿನಲ್ಲಿ ಈ ರೀತಿ ಮಾತನಾಡುತ್ತಿದ್ದೀರಿ. ಅಲ್ಪಸಂಖ್ಯಾತರು, ಹಿಂದುಳಿದವರು, ದಲಿತರು, ರೈತರಿಗೆ ಏನು ಮಾಡಿದ್ದೀರಿ? ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ವಾಲ್ಮೀಕಿ, ಕನಕ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಘೋಷಿಸಿದ್ದು ಯಡಿಯೂರಪ್ಪನೇ ಹೊರತು ಸಿದ್ದರಾಮಯ್ಯ ಅಲ್ಲ.
ರಾಜಕೀಯ ನಿವೃತ್ತಿ ಪಡೆಯುತ್ತೇನೆ
ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿ ಯಡಿಯೂರಪ್ಪ ಮತ್ತು ಅವರ ಮಕ್ಕಳ ಕೈವಾಡ ಗುಲಗಂಜಿಯಷ್ಟು ಸಾಬೀತಾದರೂ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಅಧಿಕಾರ ಇಲ್ಲದ ಸಮಯದಲ್ಲಿ ಬಳ್ಳಾರಿವರೆಗೆ ಡ್ಯಾನ್ಸ್ ಮಾಡಿಕೊಂಡು ಪಾದಯಾತ್ರೆ ಮಾಡಿದಿರಿ. ಆದರೆ, ಅದಕ್ಕೂ ಮೊದಲೇ ರಾಜ್ಯದೆಲ್ಲೆಡೆ ಗಣಿಗಾರಿಕೆಯನ್ನೇ ನಾವು ನಿಷೇಧಿಸಿದೆವು ಎಂಬದು ನಿಮಗೆ ತಿಳಿದಿರಲಿ.
ವಿಧಾನಸೌಧಕ್ಕೆ ಮುತ್ತಿಗೆ
ನಿಷ್ಕ್ರಿಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತಿಂಗಳಾಂತ್ಯದಲ್ಲಿ ಕೆಜೆಪಿ ಹೋರಾಟ ಮಾಡುತ್ತದೆ. ವಿಧಾನಸೌಧಕ್ಕೆ 10 ಸಾವಿರಕ್ಕೂ ಅಧಿಕ ಕೆಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕುತ್ತಾರೆ. ನಿಮ್ಮಲ್ಲಿ ಬಲವಿದ್ದರೆ, ನಮ್ಮ ಕಾರ್ಯಕರ್ತರನ್ನು ಎದುರಿಸಿ ಎಂದು ಯಡಿಯೂರಪ್ಪ ಅವರು ಸಿಎಂಗೆ ಸವಾಲು ಹಾಕಿದರು.
ರಮೇಶ್ ಕುಮಾರ್ ಹೇಳಿದ್ದೇನು
ಮುಖ್ಯಮಂತ್ರಿಗಳಾದ ನೀವು ಮತ್ತು ನಿಮ್ಮ ಶಾಸಕರು ಸೇರಿಕೊಂಡು ವರ್ಗಾವಣೆ ದಂಧೆಯಲ್ಲಿ ತೊಡಗಿಸಿಕೊಂಡು ಅಧಿಕಾರಿಗಳನ್ನು ಸುಲಿಗೆ ಮಾಡುತ್ತಿದ್ದೀರಿ? ನಿಮ್ಮ ಸುತ್ತ ಭ್ರಷ್ಟರೇ ತುಂಬಿಕೊಂಡಿದ್ದಾರೆ. ಈ ಮಾತನ್ನು ಸ್ವತಃ ನಿಮ್ಮ ಪಕ್ಷದ ಹಿರಿಯ ಶಾಸಕ ರಮೇಶ್ ಕುಮಾರ್ ಅವರೇ ಪಕ್ಷದ ಸಭೆಯಲ್ಲಿ ಹೇಳಿದ್ದಾರೆ. ನಿಮ್ಮ ಅಧಿಕಾರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಮೊದಲು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡು ಸಿದ್ರಾಮಣ್ಣ" ಎಂದು ಏಕವಚನದಲ್ಲಿ ತಾಕೀತು ಮಾಡಿದರು.
ರೈತಪರವಾದ ಕಾಳಜಿ ನಿಮಗಿದೆಯೇ?
ರಾಜ್ಯದ ಮುಖ್ಯಮಂತ್ರಿಯಾದ ನಿಮಗೆ ರೈತರ ಬಗ್ಗೆ ಕಾಳಜಿ ಇದ್ದಲ್ಲಿ ರಾಷ್ಟ್ರೀಕೃತ ಬ್ಯಾಂಕ್ಗಳ ಮೂಲಕ ರೈತರಿಗೆ ನೀಡುವ ಎಲ್ಲ ಸಾಲವನ್ನು ಶೇ 3ರ ಬಡ್ಡಿ ದರದಲ್ಲಿ ನೀಡುವ ವ್ಯವಸ್ಥೆ ಮಾಡಿಸಿ. ಭದ್ರಾವತಿಯ ವಿಐಎಸ್ಎಲ್ ಮತ್ತು ಎಂಪಿಎಂ ಕಂಪನಿಗಳನ್ನು ಖಾಸಗೀಕರಣ ಮಾಡುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಯಡಿಯೂರಪ್ಪ ಗುಡುಗಿದರು.
ಸಿದ್ದುಗೆ ಕಣ್ಣು-ಕಿವಿ ಸರಿಯಿಲ್ಲ
ಸಿಎಂ ಸಿದ್ದರಾಮಯ್ಯ ಅವರಿಗೆ ಕಣ್ಣು-ಕಿವಿ ಸರಿಯಿಲ್ಲ. ಅಭಿವೃದ್ಧಿ ಆಗಿದ್ದು ಕಾಣುತ್ತಿಲ್ಲ. ಸಿಎಂ ಆಗಿದ್ದಾರೆ ಎಂದು ಸುಮ್ಮನಿದ್ದೆ. ಈಗ ನನ್ನನ್ನು ಬಡಿದೆ ಬ್ಬಿಸಿದ್ದಾರೆ. ನನ್ನ ರಕ್ತ ಕುದಿಯುತ್ತಿದೆ. ಒಮ್ಮ ಮೈಸೂರು ಮತ್ತು ಶಿವಮೊಗ್ಗ ಜಿಲ್ಲೆಯನ್ನು ನೋಡಿಕೊಂಡು ಬಂದು ನಂತರ ಅಭಿವೃದ್ಧಿ ಎಂದರೆ ಏನು ಎಂದು ಅರ್ಥಮಾಡಿಕೊಳ್ಳಿ ಎಂದು ವಾಗ್ದಾಳಿ ನಡೆಸಿದರು.
ಕಣ್ಣು-ಕಿವಿ ಇದ್ದರೂ ಜೈಲಿಗೆ ಹೋಗಿ ಬಂದರಲ್ಲ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾತಿಗೆ ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. "ಕಣ್ಣು-ಕಿವಿ, ಮೂಗು ಎಲ್ಲವೂ ಇದ್ದರೂ ಯಡಿಯೂರಪ್ಪನವರು ಜೈಲಿಗೆ ಹೋಗಿಬಂದರಲ್ಲ" ಎಂದು ವ್ಯಂಗ್ಯವಾಡಿದ್ದಾರೆ.