ಕುವೆಂಪು ವಿವಿ ಎಡವಟ್ಟು, ಪುಸ್ತಕವಿಲ್ಲದೇ ಗೊಂದಲದಲ್ಲಿ ವಿದ್ಯಾರ್ಥಿಗಳು
ಶಿವಮೊಗ್ಗ, ಜೂನ್ 29: ತರಗತಿಗಳು ಆರಂಭವಾಗಿ ವಾರ ಕಳೆದರೂ ಕನ್ನಡ ಪಠ್ಯಪುಸ್ತಕ ಕೈಸೇರದೆ ಪದವಿ ವಿದ್ಯಾರ್ಥಿಗಳು ಮತ್ತೆ ಸಂಕಷ್ಟಕ್ಕಿಡಾಗಿದ್ದಾರೆ. ಪಠ್ಯ ಪುಸ್ತಕವಿಲ್ಲದೆ ಮೊದಲ ಸೆಮಿಸ್ಟರ್ ಕಳೆದಿದ್ದ ವಿದ್ಯಾರ್ಥಿಗಳು, ಇದೀಗ ಎರಡನೇ ಮತ್ತು ನಾಲ್ಕನೆ ಸೆಮಿಸ್ಟರ್ ಕೂಡ ಪಠ್ಯವಿಲ್ಲದೆ ಪರೀಕ್ಷೆ ಬರೆಯಬೇಕಾದ ಆತಂಕಕ್ಕೀಡಾಗಿದ್ದಾರೆ. ಇಷ್ಟಾದರೂ ಕುವೆಂಪು ವಿಶ್ವವಿದ್ಯಾಲಯ ಮಾತ್ರ ಮೌನಕ್ಕೆ ಶರಣಾಗಿದೆ.
ಡಿಗ್ರಿ ಎರಡು ಹಾಗೂ ನಾಲ್ಕನೇ ಸೆಮಿಸ್ಟರ್ ಆರಂಭವಾಗಿ ವಾರ ಕಳೆದಿದೆ. ಆದರೆ ಪಠ್ಯಪುಸ್ತಕ ಕೈಸೇರಿಲ್ಲ, ಪ್ರಾಧ್ಯಾಪಕರಿಗೂ ಸಿಲಬಸ್ ಬಿಟ್ಟು ಪಠ್ಯಕ್ರಮ ಸಿಕ್ಕಿಲ್ಲ. ವಿದ್ಯಾರ್ಥಿಗಳಿಗೆ ಏನು ಪಾಠ ಮಾಡಬೇಕೆಂಬ ಗೊಂದಲದಲ್ಲಿ ಉಪನ್ಯಾಸಕರು ಸಿಲುಕಿದ್ದಾರೆ.
ನ್ಯಾಷನಲ್ ಎಜುಕೇಶನ್ ಪಾಲಿಸಿ ಜಾರಿಗೆ ತರಲು ಕುವೆಂಪು ವಿವಿ ಉತ್ಸುಕತೆ ತೋರಿ ಶೈಕ್ಷಣಿಕ ವರ್ಷ ಜಾರಿ ಮಾಡಿತ್ತು. ಡಿಗ್ರಿ ಮೊದಲ ಸೆಮಿಸ್ಟರ್ನಲ್ಲಿ ಕನ್ನಡ ಪಠ್ಯಪುಸ್ತಕ ಪೂರೈಸಲು ಆಗದೆ ವಿದ್ಯಾರ್ಥಿಗಳಿಗೆ ಪಿಡಿಎಫ್ ಕಾಪಿ ಮಾತ್ರ ಪೂರೈಸಿತ್ತು. ಪಠ್ಯಪುಸ್ತಕ ಮುದ್ರಣ ಜವಾಬ್ದಾರಿ ಪ್ರಸಾರಂಗಕ್ಕೆ ನೀಡಲಾಗಿತ್ತು.
ಪಠ್ಯಕ್ರಮ ತಡೆ, ಟೆಂಡರ್ ನಿಧಾನ ಇತರೆ ಕಾರಣ ನೀಡಿ ಬಿಎ, ಬಿಎಸ್ಸಿ, ಬಿ.ಕಾಂಗೆ ತಲಾ ಸಾವಿರ ಪುಸ್ತಕ ನೀಡಲು ಮುದ್ರಣ ಮಾಡಿಸಲಾಗಿತ್ತು. ಪರೀಕ್ಷೆ ಮುಗಿದ ಮೇಲೆ ಪಠ್ಯಪುಸ್ತಕಗಳು ಕೈಸೇರಿದ್ದವು. ಈಗ ಅಂತದ್ದೇ ಎಡವಟ್ಟಿಗೆ ಕುವೆಂಪು ವಿವಿ ಮತ್ತೆ ಮುಂದಾಗಿದೆ.

ಅಧ್ಯಾಪಕರ ವೇದಿಕೆಗೆ ಪುಸ್ತಕ ಮುದ್ರಣ ಜವಾಬ್ದಾರಿ
ಕಾಲೇಜು ಶುರುವಾಗಿ ವಾರ ಕಳೆದರೂ ಪಠ್ಯಪುಸ್ತಕ ಮುದ್ರಣಕ್ಕೆ ಹೋಗಿಲ್ಲ. ಪಠ್ಯಪುಸ್ತಕ ಮುದ್ರಣ ಜವಾಬ್ದಾರಿ ಪ್ರತಿವರ್ಷ ಪ್ರಸಾರಾಂಗಕ್ಕೆ ನೀಡಲಾಗುತ್ತಿತ್ತು. ಅದಕ್ಕೂ ಮೊದಲು ಅಧ್ಯಾಪಕರ ವೇದಿಕೆ ಮಾಡುತ್ತಿತ್ತು. ಕಳೆದ ವರ್ಷದ ಗೊಂದಲ ಗಮನಿಸಿದ ಕನ್ನಡ ಅಧ್ಯಾಪಕರ ಸಂಘ, ಪಠ್ಯಪುಸ್ತಕ ಮುದ್ರಣ ಜವಾಬ್ದಾರಿಯನ್ನು ತಮಗೆ ನೀಡುವಂತೆ ಕುಲಪತಿ, ರಿಜಿಸ್ಟಾರ್ ಗೆ ಮನವಿ ಮಾಡಿತ್ತು. ಅಳೆದು ತೂಗಿ ಜೂ.22ರಂದು ಈಗ ಅಧ್ಯಾಪಕರ ವೇದಿಕೆಗೆ ಪುಸ್ತಕ ಮುದ್ರಣ ಜವಾಬ್ದಾರಿ ನೀಡಲಾಗಿದೆ. ಈಗ ಸಂಘವು ವಿದ್ಯಾರ್ಥಿಗಳ ಸಂಖ್ಯೆ ಬೇಡಿಕೆ ಪಟ್ಟಿ ಮಾಡಿ ಟೆಂಡರ್ ಕರೆಯಬೇಕಿದೆ. ಅಲ್ಲಿಂದ ನಂತರ ಪಠ್ಯಪುಸ್ತಕ ಪೂರೈಸಬೇಕಿದೆ.

ಅಧ್ಯಾಪಕರಿಗೂ ಸಿಲಬಸ್ ಗೊಂದಲ
ಕನ್ನಡ ಪಠ್ಯ ಪುಸ್ತಕದಲ್ಲಿ ಯಾವ ಪಠ್ಯಗಳು ಬರಲಿವೆ ಎಂಬ ಮಾಹಿತಿ ಪ್ರಾಧ್ಯಾಪಕರಿಗೆ ತಿಳಿಸಲಾಗಿದ್ದರೂ ಗೊಂದಲಗಳು ಇದ್ದಾವೆ. ಐಚ್ಛಿಕ ಕನ್ನಡದಲ್ಲಿ ನವೋದಯ ಪೂರ್ವ ಸಾಹಿತ್ಯ ಇದೆ ಎಂದು ತಿಳಿಸಲಾಗಿದ್ದರೂ ಯಾವುದಕ್ಕೆ ಆದ್ಯತೆ ಕೊಡಬೇಕು ಎಂದು ತಿಳಿಸಿಲ್ಲ. ಬಿಎಸ್ಸಿಯಲ್ಲಿ ಮಂಕುತಿಮ್ಮನ ಕಗ್ಗ ಇದ್ದು, ಯಾವ ಕಗ್ಗ ಎಂದು ತಿಳಿಸಿಲ್ಲ. ಈ ಹಿಂದೆ ಬಿಸಿಎ ಎರಡನೇ ಸೆಮಿಸ್ಟರ್ನಲ್ಲಿ ಕುರುಡು ಕಾಂಚಾಣ ಪಠ್ಯ ಇತ್ತಾದರೂ, ಈಗ ಅದನ್ನು ಕೈಬಿಡಲಾಗಿದೆ. ಹೀಗಾಗಿ ಅಧ್ಯಾಪಕರು ಗೊಂದಲಕ್ಕೀಡಾಗಿದ್ದಾರೆ.

ದುರ್ಬಳಕೆಯಾಗುವ ದೃಷ್ಠಿಯಿಂದ ಪಿಡಿಎಫ್ ನೀಡುತ್ತಿಲ್ಲ
ಕನ್ನಡ ಪ್ರಾಧ್ಯಾಪಕರಿಗೆ ಪಠ್ಯ ಪುಸ್ತಕ ಪಿಡಿಎಫ್ ಒದಗಿಸಲು ಪಠ್ಯಪುಸ್ತಕ ರಚನಾ ಸಮಿತಿ ಹಿಂದೇಟು ಹಾಕಿದೆ. ಪಿಡಿಎಫ್ ಕಳುಹಿಸಿದರೆ ದುರ್ಬಳಕೆಯಾಗಿ ವಿದ್ಯಾರ್ಥಿಗಳು ಜೆರಾಕ್ಸ್ ಮಾಡಿಸಿಕೊಂಡು ಪಠ್ಯ ಪುಸ್ತಕ ತೆಗೆದುಕೊಳ್ಳದೇ ಇರಬಹುದು ಎಂಬ ಕಾರಣಗಳನ್ನು ನೀಡಲಾಗಿದೆ. ಹಾಗಾಗಿ ಪಠ್ಯಪುಸ್ತಕ ವಿಚಾರದಲ್ಲಿ ಗೊಂದಲ ಮುಂದುವರೆದಿದ್ದು, ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿದೆ.

ವಾರದೊಳಗೆ ಪಠ್ಯಪುಸ್ತಕ
ಕಳೆದ ಬಾರಿ ಪುಸ್ತಕ ಪೂರೈಸದೇ ಮೊದಲ ಸೆಮಿಸ್ಟರ್ ಮುಗಿಯಿತು. ವಿವಿ ಆಡಳಿತ ವರ್ಗದ ಗೊಂದಲದಿಂದ ಈ ಬಾರಿಯೂ ಅಂತದ್ದೇ ತಪ್ಪು ನಿರ್ಧಾರಗಳು ಆಗಬಾರದೆಂದು ಪಠ್ಯಪುಸ್ತಕ ಮುದ್ರಣ ಜವಾಬ್ದಾರಿಯನ್ನು ನಮಗೆ ನೀಡಲು ಕೇಳಿದೆವು. ಈಗ ನಮಗೆ ನೀಡಲಾಗಿದೆ. ವಾರದೊಳಗೆ ಪಠ್ಯಪುಸ್ತಕ ವಿದ್ಯಾರ್ಥಿಗಳ ಕೈ ಸೇರುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕನ್ನಡ ಪ್ರಾಧ್ಯಾಪಕರ ವೇದಿಕೆ ಅಧ್ಯಕ್ಷ ಅಂಜನಪ್ಪ ತಿಳಿಸಿದ್ದಾರೆ.












Click it and Unblock the Notifications