ಶಿವಮೊಗ್ಗ: ಮಕ್ಕಳಿಗೆ ಮೃತ್ಯುವಾದ ನೀರಿನ ತೊಟ್ಟಿ
ಶಿವಮೊಗ್ಗ, ಮಾ. 5 : ಹೊಸ ಮನೆ ಕಟ್ಟಲು ನಿರ್ಮಾಣ ಮಾಡಿಕೊಂಡಿದ್ದ ನೀರಿನ ತೊಟ್ಟಿಯೇ ಮಕ್ಕಳಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಇಬ್ಬರು ಮಕ್ಕಳನ್ನು ಮನೆ ಹಿಂದಿನ ನೀರಿನ ತೊಟ್ಟಿ ಬಲಿ ತೆಗೆದುಕೊಂಡಿದೆ.
ಮನೆಯ ಹಿಂದಿನ ನೀರಿನ ತೊಟ್ಟಿಗೆ ಆಕಸ್ಮಿಕವಾಗಿ ಬಿದ್ದ ಅಣ್ಣ-ತಂಗಿ ದಾರುಣ ಸಾವಿಗೀಡಾಗಿದ್ದಾರೆ. ಶಿವಮೊಗ್ಗದ ವಿನೋಬ ನಗರದಲ್ಲಿ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ.[ಶಿವಮೊಗ್ಗ: ಶಿವರಾತ್ರಿಗೆ ಹೋದ ಬಾಲಕರು ತುಂಗೆ ಪಾಲು]

ಶಿವಮೊಗ್ಗ ಜಿಲ್ಲೆ ಬೊಮ್ಮನಕಟ್ಟೆ ಗ್ರಾಮದ ನಾಗರಾಜು ಅವರ ಮಕ್ಕಳಾದ ತರುಣ್(5) ಮತ್ತು ದೀಪ್ತಿ(3) ಮೃತ ದುರ್ದೈವಿಗಳು. ವಿನೋಬಾನಗರದಲ್ಲಿ ಹೊಸ ನಾಗರಾಜು ಹೊಸ ಮನೆ ನಿರ್ಮಾಣ ಮಾಡುತ್ತಿದ್ದು ಕಾಮಗಾರಿಗೆಂದು ಮರಳು ತರಿಸಿ ಇಟ್ಟುಕೊಂಡಿದ್ದರು. ಮಕ್ಕಳು ಇದೇ ಮರಳಿನಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನೀರು ತುಂಬಿದ್ದ ತೆರೆದ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಘಟನೆ ನಡೆಯುವ ವೇಳೆ ಸ್ಥಳದಲ್ಲಿ ಯಾರೂ ಇರಲಿಲ್ಲ.[ಶಿವಮೊಗ್ಗ ಗಲಭೆಗೆ ಕಾರಣವೇನು]
ಕೆಲ ಸಮಯದ ನಂತರ ನಾಗರಾಜು ಮಕ್ಕಳನ್ನು ಹುಡುಕಾಡಿದಾಗ ತೊಟ್ಟಿಯಲ್ಲಿ ಬಿದ್ದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಇಬ್ಬರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅದಾಗಲೇ ಮಕ್ಕಳ ಪ್ರಾಣ ಪಕ್ಷಿ ಹಾರಿಹೋಗಿತ್ತು. ಮನೆ ಬೆಳಗಬೇಕಾಗಿದ್ದ ಮಕ್ಕಳು ದುರಂತ ಸಾವಿಗೀಡಾಗಿದ್ದು ನಾಗರಾಜು ಕುಟುಂಬ ಶೋಕದಲ್ಲಿ ಮುಳುಗಿದೆ. ವಿನೋಬಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications