ಸಹ್ಯಾದ್ರಿ ಕಾಲೇಜು ಹಳೆ ವಿದ್ಯಾರ್ಥಿಗಳ ಪುನರ್ ಮಿಲನ
ಶಿವಮೊಗ್ಗ, ಏ. 24 : ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಸಾಹಿತ್ಯ, ವಿಜ್ಞಾನ, ರಾಜಕೀಯ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಹಲವಾರು ಗಣ್ಯರನ್ನು ಕೊಡುಗೆಯಾಗಿ ನೀಡಿದೆ. ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ ಏ.25ರಂದು ಪುನರ್ ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ದಿ.ಯು.ಆರ್.ಅನಂತಮೂರ್ತಿ, ಸಾಹಿತಿಗಳಾದ ಪಿ.ಲಂಕೇಶ್, ಹಾ.ಮಾ.ನಾಯಕ್, ಮನೋವೈದ್ಯ ಡಾ.ಕೆ.ಎ.ಅಶೋಕ್ ಪೈ, ಗಾಯಕ ಶಿವಮೊಗ್ಗ ಸುಬ್ಬಣ್ಣ ಸೇರಿದಂತೆ ಹಲವು ಗಣ್ಯರನ್ನು ನಾಡಿಗೆ ಕೊಡುಗೆಯಾಗಿ ನೀಡಿದ ಕೀರ್ತಿ ಸಹ್ಯಾದ್ರಿ ಕಾಲೇಜಿನದು. [ಫೇಸ್ ಬುಕ್ ಪುಟ]

ಅನೇಕರು ಸಹ್ಯಾದ್ರಿ ಕಾಲೇಜಿನಲ್ಲೇ ಓದಿ, ಅದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇತಿಹಾಸವಿದೆ. ಮೈಸೂರು ಮಹಾರಾಜ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರಿಂದ 1940ರಲ್ಲಿ ಆರಂಭವಾದ ಕಾಲೇಜು ನಂತರ ರಾಜ್ಯ ಸರ್ಕಾರದ ಆಡಳಿತಕ್ಕೊಳಪಟ್ಟು ಮೈಸೂರು ವಿಶ್ವವಿದ್ಯಾಲಯಕ್ಕೆ ಸೇರಿತ್ತು. [ಬಿಎಂಎಸ್ ಹಳೇ ವಿದ್ಯಾರ್ಥಿಗಳ ಸುವರ್ಣ ಮಿಲನ]
1956ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಾಗಿ ಮೇಲ್ದರ್ಜೆಗೇರಿ, ಮೈಸೂರು ವಿಶ್ವವಿದ್ಯಾನಿಲಯದ ಅಂದಿನ ಕುಲಪತಿಗಳಾಗಿದ್ದ, ರಾಷ್ಟ್ರಕವಿ ಕುವೆಂಪು ಅವರಿಂದ 1962ರಲ್ಲಿ ಸಹ್ಯಾದ್ರಿ ಕಾಲೇಜು ಎಂದು ನಾಮಕರಣಗೊಂಡಿತು.
1984ರಲ್ಲಿ ಸಹ್ಯಾದ್ರಿ ವಿಜ್ಞಾನ ಕಾಲೇಜು ಹಾಗೂ ಕಲಾ ಮತ್ತು ವಾಣಿಜ್ಯ ಕಾಲೇಜುಗಳಾಗಿ ವಿಂಗಡನೆಗೊಂಡು 1992ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಿತು. 2012ರಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ ಬಂದಿದೆ.

ಹಳೆ ವಿದ್ಯಾರ್ಥಿಗಳ ಸಂಘ ಏ.25ರ ಶನಿವಾರ ಪುನರ್ ಮಿಲನ ಕಾರ್ಯಕ್ರಮವನ್ನು ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದೆ. ಕಾಲೇಜಿನಲ್ಲಿ ಓದಿರುವ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಸಂಘ ಫೇಸ್ಬುಕ್ ಮೂಲಕ ಮನವಿ ಮಾಡಿದೆ.
ಕಾರ್ಯಕ್ರಮದ ವಿವರ
ಹಳೆ ವಿದ್ಯಾರ್ಥಿಗಳ ಪುನರ್ ಮಿಲನ ಕಾರ್ಯಕ್ರಮ
ಮುಖ್ಯ ಅತಿಥಿಗಳು : ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ
ಸಮಯ : ಸಂಜೆ 4 ಗಂಟೆ, ಏ.25 ಶನಿವಾರ
ಸ್ಥಳ : ಸಹ್ಯಾದ್ರಿ ಕಾಲೇಜಿನ ಆವರಣ (ಹೊಸ ಕಟ್ಟಡದ ಸಭಾಂಗಣ)












Click it and Unblock the Notifications