ಶಿವಮೊಗ್ಗದಲ್ಲಿ ರೌಡಿ ಪರೇಡ್; ಖಡಕ್ ಎಚ್ಚರಿಕೆ ಕೊಟ್ಟ ಎಸ್ಪಿ
ಶಿವಮೊಗ್ಗ, ಫೆಬ್ರವರಿ 4; ಶಿವಮೊಗ್ಗ ನಗರದಲ್ಲಿ ಬಾರ್ ಒಂದರಲ್ಲಿ ಇತ್ತೀಚೆಗೆ ಗಲಾಟೆ ನಡೆದು ಯುವಕನೊಬ್ಬನ ಹತ್ಯೆ ಮಾಡಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಗರದಲ್ಲಿ ರೌಡಿಗಳ ಪರೇಡ್ ನಡೆಸಿ, 170ಕ್ಕೂ ಹೆಚ್ಚು ರೌಡಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಗುರುವಾರ ಅಪರಾಧ ಚಟುವಟಿಕೆಯಲ್ಲಿ ತೊಡಗಿರುವವರಿಗೆ ಎಚ್ಚರಿಕೆ ನೀಡಲು ಶಿವಮೊಗ್ಗ ಪೊಲೀಸರು ರೌಡಿ ಪರೇಡ್ ನಡೆಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಎಂ. ಶಾಂತರಾಜು ರೌಡಿಗಳ ಕೇಸುಗಳ ಬಗ್ಗೆ ಮಾಹಿತಿ ಪಡೆದು, ಚಟುವಟಿಕೆ ನಿಲ್ಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಯಾವುದೆ ರೀತಿಯ ರೌಡಿ ಚಟವಟಿಕೆ ನಡೆಸದಂತೆ ಸೂಚನೆ ಕೊಟ್ಟರು. ಶಿವಮೊಗ್ಗ ಉಪ ವಿಭಾಗದ ದೊಡ್ಡಪೇಟೆ, ಕೋಟೆ, ಜಯನಗರ , ವಿನೋಬನಗರ, ಶಿವಮೊಗ್ಗ ಗ್ರಾಮಾಂತರ, ತುಂಗಾ ನಗರ, ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಗಳು ಪರೇಡ್ನಲ್ಲಿ ಪಾಲ್ಗೊಂಡಿದ್ದರು.

ಬಾರ್, ಟೀ ಅಂಗಡಿ ಮುಂದೆ ನಿಲ್ಲಂಗಿಲ್ಲ; ಬಾರ್ ಒಂದರಲ್ಲಿ ಇತ್ತೀಚೆಗೆ ಗಲಾಟೆಯಾಗಿ ಯುವಕನೊಬ್ಬನ ಹತ್ಯೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಬಾರ್ಗಳಲ್ಲಿ ಕುಡಿದು ಕಿರಿಕ್ ಮಾಡುವ ರೌಡಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ರಕ್ಷಣಾಧಿಕಾರಿ ಹೇಳಿದರು.
ಟೀ ಅಂಗಡಿ ಮುಂದೆ ಗುಂಪುಗೂಡಿ ಗಲಾಟೆ ಮಾಡುವುದು ಸೇರಿದಂತೆ ಶಾಂತಿ ಕದಡುವವರ ವಿರುದ್ಧ ಕೇಸ್ ದಾಖಲಿಸಲಾಗುತ್ತದೆ. ಇನ್ನು ಮುಂದೆ ಟೀ ಅಂಗಡಿಗಳ ಮುಂದೆ ಸಿಸಿಟಿವಿ ಅಳವಡಿಸಬೇಕು. ಈ ಸಂಬಂಧ ಪೊಲೀಸ್ ಸಿಬ್ಬಂದಿಗಳು ಟೀ ಅಂಗಡಿ ಮಾಲೀಕರ ಮನವೊಸಲಿಸಬೇಕು ಎಂದರು.
ಹೆಚ್ಚುವರಿ ರಕ್ಷಣಾಧಿಕಾರಿ ಹೆಚ್. ಟಿ. ಶೇಖರ್, ಡಿವೈಎಸ್ಪಿ ಉಮೇಶ್ ನಾಯ್ಕ್ ಸೇರಿದಂತೆ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ವಿವಿಧ ಸಿಬ್ಬಂದಿಗಳು ಉಪಸ್ಥಿತರಿದ್ದರು.












Click it and Unblock the Notifications