ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಗೆ ಪ್ರತಿಷ್ಠೆಯಾದ ಶಿವಮೊಗ್ಗ ಪಾಲಿಕೆ ಎಲೆಕ್ಷನ್
ಶಿವಮೊಗ್ಗ, ಆಗಸ್ಟ್.13: ಪ್ರಮುಖ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿರುವ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯು, ಬಹುತೇಕ ಜಿದ್ದಾಜಿದ್ದಿನ ಅಖಾಡಕ್ಕೆ ಸಾಕ್ಷಿಯಾಗುವ ಲಕ್ಷಣಗಳು ಗೋಚರವಾಗುತ್ತಿವೆ. ಮಳೆಗಾಲದಲ್ಲಿಯೂ ಚುನಾವಣಾ ಕಣ ಕಾವೇರುವಂತೆ ಮಾಡಿದೆ.
ಸ್ಥಳೀಯ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿರುವ ಬೆನ್ನಲ್ಲೆ, ಸೋಮವಾರದಿಂದ ನಾಮಪತ್ರ ಸಲ್ಲಿಕೆ ಕಾರ್ಯಕ್ಕೆ ವಿದ್ಯುಕ್ತ ಚಾಲನೆ ದೊರಕಿದೆ.
ಆ. 9 ರಿಂದಲೇ ಪಾಲಿಕೆ ವ್ಯಾಪ್ತಿಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಆ. 13 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತಿದ್ದು, ನಾಮಪತ್ರ ಸಲ್ಲಿಕೆ ಕಾರ್ಯ ಕೂಡ ಆರಂಭವಾಗಲಿದೆ. ಆ. 20 ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿದೆ. ಆ. 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ಆ. 23 ರಂದು ನಾಮಪತ್ರ ವಾಪಾಸ್ ಪಡೆಯಲು ಕೊನೆಯ ದಿನವಾಗಿದೆ. ಆ. 31 ರಂದು ಮತ ಎಣಿಕೆ ನಡೆಯಲಿದೆ. ಮರು ಮತದಾನದ ಅಗತ್ಯವಿದ್ದಲ್ಲಿ ಸೆಪ್ಟೆಂಬರ್ 2 ರ ದಿನಾಂಕ ನಿಗದಿಗೊಳಿಸಲಾಗಿದ್ದು, ಸೆಪ್ಟೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ. ಸೆ. 3 ರವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ ನೀತಿ-ಸಂಹಿತೆ ಜಾರಿಯಲ್ಲಿರುತ್ತದೆ.

'ನೋಟಾ' ಆಯ್ಕೆಗೂ ಅವಕಾಶ
ರಾಜ್ಯ ಚುನಾವಣಾ ಆಯೋಗವು ಐಎಎಸ್ ದರ್ಜೆಯ ಅಧಿಕಾರಿಯೋರ್ವರನ್ನು ವಿಶೇಷ ವೀಕ್ಷಕರಾಗಿ ನಿಯೋಜಿಸುತ್ತಿದೆ. ಸಾಮಾನ್ಯ ವೀಕ್ಷಕರಾಗಿ ಕೆಎಎಸ್ ಹಾಗೂ ಲೆಕ್ಕಪತ್ರ ವೀಕ್ಷಕರಾಗಿ ಲೆಕ್ಕ ಪರಿಶೋಧಕ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸುತ್ತಿದೆ. ಮತದಾನಕ್ಕೆ ಇವಿಎಂ ಮತಯಂತ್ರಗಳನ್ನು ಬಳಸುತ್ತಿದೆ. ಮಹಿಳೆಯರಿಗೆ ಶೇ. 50 ರಷ್ಟು ಮೀಸಲು ನಿಗದಿಪಡಿಸಲಾಗಿದೆ.
ಮತಯಂತ್ರದಲ್ಲಿ ಅಭ್ಯರ್ಥಿ ಭಾವಚಿತ್ರ ಕೂಡ ಮುದ್ರಿಸಲಾಗುತ್ತಿದೆ. ಇತರೆ ಚುನಾವಣೆಗಳ ರೀತಿಯಲ್ಲಿ ಮತಯಂತ್ರದಲ್ಲಿ 'ನೋಟಾ' (ಯಾವ ಅಭ್ಯರ್ಥಿಗಳು ಇಷ್ಟವಿಲ್ಲ) ಆಯ್ಕೆಗೂ ಅವಕಾಶ ಕಲ್ಪಿಸಲಾಗಿದೆ.

ಕಟ್ಟುನಿಟ್ಟಿನ ನಿರ್ದೇಶನ
ರಾಜಕೀಯ ಪಕ್ಷಗಳ ಫ್ಲೆಕ್ಸ್-ಬ್ಯಾನರ್ ತೆರವುಗೊಳಿಸಲು ಜಿಲ್ಲಾಡಳಿತ ಕ್ರಮಕೈಗೊಂಡಿದೆ. ಅನುಮತಿ ಇಲ್ಲದೆ ಫ್ಲೆಕ್ಸ್, ಬ್ಯಾನರ್ ಅಳವಡಿಸುವವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.
ಮತದಾರರ ಮೇಲೆ ಪ್ರಭಾವ ಬೀರುವಂತಹ ಯಾವುದೇ ಕಾರ್ಯಕ್ರಮಗಳಿಗೆ ಅನುಮತಿ ನೀಡದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.

ಪ್ರತಿಷ್ಠೆಯ ಪ್ರಶ್ನೆ
ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾವಣೆಯು ಬಿಜೆಪಿ-ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಇತ್ತೀಚೆಗೆ ಮುಗಿದ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಪ್ರಾಬಲ್ಯ ಮೆರೆದಿರುವ ಬಿಜೆಪಿಯು ಸ್ವತಂತ್ರವಾಗಿ ಪಾಲಿಕೆ ಆಡಳಿತದ ಅಧಿಕಾರ ಗದ್ದುಗೆ ಹಿಡಿಯಲು ಕಾರ್ಯತಂತ್ರ ರೂಪಿಸುತ್ತಿದೆ.
ಕಾಂಗ್ರೆಸ್-ಜೆಡಿಎಸ್ ಗೆ ಹೋಲಿಸಿದರೆ ಬಿಜೆಪಿಯು ಕಳೆದ ಹಲವು ದಿನಗಳಿಂದಲೇ ಚುನಾವಣಾ ಸಿದ್ಧತೆಯಲ್ಲಿ ತೊಡಗಿದೆ. ಮತ್ತೊಂದೆಡೆ ಕಾಂಗ್ರೆಸ್-ಜೆಡಿಎಸ್ ಪಕ್ಷಗಳಲ್ಲಿಯೂ ತಯಾರಿ ಬಿರುಸುಗೊಳ್ಳಲಾರಂಭಿಸಿದೆ.

ತೀವ್ರ ಲಾಬಿ
ಮೂರು ಪಕ್ಷಗಳಲ್ಲಿ 35 ವಾರ್ಡ್ ಗಳಲ್ಲಿಯೂ ಟಿಕೆಟ್ ಗೆ ಸಾಕಷ್ಟು ಪೈಪೋಟಿಯಿದೆ. ವಿವಿಧ ವಾರ್ಡ್ ಗಳಲ್ಲಿ ನಾಲ್ಕೈದು ಜನರು ಟಿಕೆಟ್ ರೇಸ್ ನಲ್ಲಿರುವುದು ಕಂಡುಬರುತ್ತಿದೆ. ಇದು ಪಕ್ಷದ ಪ್ರಮುಖರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವಂತೆ ಮಾಡಿದೆ.
ಮತ್ತೊಂದೆಡೆ ಕೆಲ ಸ್ಪರ್ಧಾ ಆಕಾಂಕ್ಷಿಗಳು ಟಿಕೆಟ್ ಖಚಿತ ಪಡಿಸಿಕೊಳ್ಳಲು ಇನ್ನಿಲ್ಲದ ಲಾಬಿ ನಡೆಸುತ್ತಿರುವುದು ಕಂಡುಬರುತ್ತಿದೆ.












Click it and Unblock the Notifications