ಶಿವಮೊಗ್ಗ : ಬಿಎಸ್ವೈಗೆ ಹಿನ್ನಡೆ, ಜಿಲ್ಲಾ ಪಂಚಾಯತಿ ಜೆಡಿಎಸ್ಗೆ
ಶಿವಮೊಗ್ಗ, ಮೇ 05 : ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ತವರು ಜಿಲ್ಲೆಯಲ್ಲಿ ಮುಖಭಂಗವಾಗಿದೆ. ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್, ಕಾಂಗ್ರೆಸ್ ಮೈತ್ರಿಕೂಟ ಪಕ್ಷೇತರ ಅಭ್ಯರ್ಥಿ ನೆರವಿನಿಂದ ಅಧಿಕಾರ ಹಿಡಿದಿದೆ.
ಗುರುವಾರ ನಡೆದ ಚುನಾವಣೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್ನ ಜ್ಯೋತಿ ಮತ್ತು ಉಪಾಧ್ಯಕ್ಷರಾಗಿ ಪಕ್ಷೇತರ ಅಭ್ಯರ್ಥಿ ವೇದಾ ಅವರು ಆಯ್ಕೆಯಾಗಿದ್ದಾರೆ. ಕೊನೆ ಕ್ಷಣದಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಸೆಳೆದ ಮಧು ಬಂಗಾರಪ್ಪ ಅವರ ತಂತ್ರದಿಂದಾಗಿ 15 ಸ್ಥಾನಗಳಲ್ಲಿ ಜಯಗಳಿಸಿದ್ದ ಬಿಜೆಪಿಗೆ ಮುಖಭಂಗವಾಗಿದೆ. [ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲು ಪಟ್ಟಿ]

ಶಿವಮೊಗ್ಗ ಜಿಲ್ಲಾ ಪಂಚಾಯಿತಿಯ ಒಟ್ಟು ಸದಸ್ಯ ಬಲ 31. ಚುನಾವಣೆಯಲ್ಲಿ ಕಾಂಗ್ರೆಸ್ 8, ಬಿಜೆಪಿ 15, ಜೆಡಿಎಸ್ 7 ಸ್ಥಾನಗಳಲ್ಲಿ ಜಯಗಳಿಸಿದ್ದವು. ಪಕ್ಷೇತರ ಅಭ್ಯರ್ಥಿ 1 ಸ್ಥಾನದಲ್ಲಿ ಗೆದ್ದಿದ್ದರು. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿತ್ತು. [30 ಜಿಲ್ಲೆಗಳ ಪಂಚಾಯ್ತಿ ಫಲಿತಾಂಶ ಸಂಪೂರ್ಣ ವಿವರ]
1 ಮತದಲ್ಲಿ ಸೋಲು : ಇಂದು ನಡೆದ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಪಕ್ಷೇತರ ಅಭ್ಯರ್ಥಿ ನೆರವಿನೊಂದಿಗೆ 16 ಮತಗಳಿಸಿತು. 15 ಮತಗಳನ್ನು ಪಡೆದ ಬಿಜೆಪಿ ತಂತ್ರಗಾರಿಕೆಗೆ ಶರಣಾಗಿ ಅಧಿಕಾರವನ್ನು ಬಿಟ್ಟುಕೊಟ್ಟಿತು. [ಮೈಸೂರಿನಲ್ಲಿ ಬರದ ನಡುವೆಯೇ ರೆಸಾರ್ಟ್ ರಾಜಕಾರಣ!]
ಮಧು ಬಂಗಾರಪ್ಪ ತಂತ್ರ : ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಸೊರಬ ಕ್ಷೇತ್ರದ ಜೆಡಿಎಸ್ ಶಾಸಕ ಮಧು ಬಂಗಾರಪ್ಪ ಮಾಡಿದ ತಂತ್ರ ಫಲ ನೀಡಿತು. ಪಕ್ಷೇತರ ಅಭ್ಯರ್ಥಿಯನ್ನು ಸೆಳೆದ ಅವರು, ಕಾಂಗ್ರೆಸ್ ನೆರವಿನೊಂದಿಗೆ ಮೈತ್ರಿಕೂಟ ರಚಿಸಿ ಅಧಿಕಾರ ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದರು.
ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕಿಮ್ಮನೆ ರತ್ನಾಕರ್, ಮಧು ಬಂಗಾರಪ್ಪ ಮುಂತಾದ ನಾಯಕರು ನೂತನವಾಗಿ ಆಯ್ಕೆಯಾದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದರು.












Click it and Unblock the Notifications