ಶಿವಮೊಗ್ಗ ಕಾರಾಗೃಹದ ಶೌಚಾಲಯದಲ್ಲಿ ಕೈದಿ ಆತ್ಮಹತ್ಯೆ
ಶಿವಮೊಗ್ಗ, ಅಕ್ಟೋಬರ್ 24: ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಕೈದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೈಲಿನ ಶೌಚಾಲಯದಲ್ಲಿ ಶಿಕ್ಷಾ ಬಂಧಿ ಕೈದಿ ಪಂಚೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಜುನಾಥ್ (33) ಆತ್ಮಹತ್ಯೆ ಮಾಡಿಕೊಂಡಿರುವ ಕೈದಿ. ನಿನ್ನೆ ಸಂಜೆ ಜೈಲಿನ ತುಂಗಾ ವಿಭಾಗದ ಕೊಠಡಿಯ ಶೌಚಾಲಯದಲ್ಲಿ ಪಂಚೆಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಜೈಲಿನ ಆರೋಗ್ಯಾಧಿಕಾರಿ ಪರೀಕ್ಷಿಸಿ, ಮಂಜುನಾಥ್ ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದರು. ಆದರೆ ಅಷ್ಟರಲ್ಲಿಯೇ ಮಂಜುನಾಥ್ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಮಂಜುನಾಥ್, ಸಾಗರದ ಎನ್.ಎಸ್ ಬಡಾವಣೆಯ ನಿವಾಸಿಯಾಗಿದ್ದು, ಜೀವಾವಧಿ ಶಿಕ್ಷೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.
ನ್ಯಾಯಾಧೀಶರ ಸಮ್ಮುಖದಲ್ಲಿ ಇಂದು ಮರಣೋತ್ತರ ಪರೀಕ್ಷೆ ನಡೆಸಿದ್ದು, ಮಂಜುನಾಥ್ ಕುಟುಂಬದವರಿಗೆ ಮೃತದೇಹವನ್ನು ಹಸ್ತಾಂತರಿಸಲಾಗುತ್ತದೆ.











Click it and Unblock the Notifications