Breaking: ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೊರೊನಾ ಸೋಂಕು
ಶಿವಮೊಗ್ಗ, ಮೇ 15: ಶಿವಮೊಗ್ಗದಲ್ಲಿ ಮತ್ತೊಬ್ಬ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಶಿವಮೊಗ್ಗದಲ್ಲಿ ಒಂದೂ ಕೊರೊನಾ ಪ್ರಕರಣವಿಲ್ಲದೆ ಗ್ರೀನ್ ಝೋನ್ನಲ್ಲಿತ್ತು ಕಳೆದ ಕೆಲವೇ ದಿನಗಳ ಹಿಂದಷ್ಟೇ ಒಂದೇ ಬಾರಿಗೆ 8 ಪ್ರಕರಣಗಳು ದೃಢಪಟ್ಟಿದ್ದವು.
ಸಿಎಂ ತವರು ಜಿಲ್ಲೆ ಶಿವಮೊಗ್ಗಕ್ಕೂ ಕಾಲಿಟ್ಟ ಕೊರೊನಾ ವೈರಸ್
ಇದೀಗ ತೀರ್ಥಹಳ್ಳಿಯಲ್ಲಿ ಕ್ವಾರಂಟೈನ್ನಲ್ಲಿದ್ದ ವ್ಯಕ್ತಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಅವರಿಗೆ ಜ್ವರ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಗಂಟಲು ದ್ರವ ಮಾದರಿ, ರಕ್ತದ ಪರೀಕ್ಷೆ ನಡೆಸಲಾಗಿತ್ತು ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಮಾಹಿತಿ ನೀಡಿದ್ದಾರೆ.
ಈ ಹಿಂದೆ ಪಾಸಿಟವ್ ಬಂದಿದ್ದ ಎಂಟು ಮಂದಿಯನ್ನೂ ಪ್ರತ್ಯೇಕವಾಗಿರಿಸಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅಹಮದಾಬಾದ್ನಿಂದ ಬಂದವರಲ್ಲಿ ಕೊರೊನಾ ಪತ್ತೆಯಾಗಿದೆ. ಗುಜರಾತ್ನಿಂದ ಒಟ್ಟು 9 ಜನ ಜಿಲ್ಲೆಗೆ ಬಂದಿದ್ದರೂ ಅದರಲ್ಲಿ 8 ಜನಕ್ಕೆ ಕೊರೊನಾ ದೃಢಪಟ್ಟಿದೆ ಎಂದು ತಿಳಿಸಿದ್ದರು.
ಅಹಮದಾಬಾದ್ನಿಂದ ಬಂದವರಲ್ಲಿ ಎಂಟು ಮಂದಿ ಶಿಕಾರಿಪುರದವರು, ಒಬ್ಬ ತೀರ್ಥಹಳ್ಳಿಯವರು, ತಬ್ಲಿಘಿ ನಂಟಿನಿಂದ ಜಿಲ್ಲೆಗೆ ಕೊರೊನಾ ಬಂದಿದೆ. ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದ್ದರಿಂದ, ಶಿವಮೊಗ್ಗ ಜಿಲ್ಲೆ ಹಸಿರು ವಲಯದಲ್ಲಿಯೇ ಮುಂದುವರಿಯುತ್ತದೆ. ಆದರೆ, ಜನ ಜಾಗೃತರಾಗಿ ಇರಬೇಕು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಮನವಿ ಮಾಡಿದ್ದರು.
ಜಿಲ್ಲೆಗೆ ಹೊರ ರಾಜ್ಯದಿಂದ 284 ಜನ ಆಗಮಿಸಿದ್ದಾರೆ. ಅವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಜನ ಆತಂಕ ಪಡುವ ಅವಶ್ಯಕತೆ ಇಲ್ಲ. ಜಿಲ್ಲಾಡಳಿತದ ಜತೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೇಳಿದರು.