Breaking; ಶಿವಮೊಗ್ಗ; ಸಾಗರ ಬಳಿ ಕೆರೆಗೆ ಬಿದ್ದ ಕೆಎಸ್ಆರ್ಟಿಸಿ ಬಸ್
ಶಿವಮೊಗ್ಗ, ಜುಲೈ 30; ಸಾಗರದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದೆ. ಈ ಅಪಘಾತದಲ್ಲಿ ಒಬ್ಬ ಪ್ರಯಾಣಿಕರು ಮೃತಪಟ್ಟಿದ್ದಾರೆ, ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ.
ಶುಕ್ರವಾರ ಬೆಳಗ್ಗೆ ಸಾಗರ ತಾಲೂಕಿನ ಕಾಸ್ಪಾಡಿ ಎಂಬಲ್ಲಿ 27 ಜನರಿದ್ದ ಕೆಎಸ್ಆರ್ಟಿಸಿ ಬಸ್ ಕೆರೆಗೆ ಉರುಳಿದೆ. ಪೊಲೀಸರು, ಅಗ್ನಿ ಶಾಮಕ ದಳ ಮತ್ತು ಸ್ಥಳೀಯರು ತಕ್ಷಣಾ ರಕ್ಷಣಾ ಕಾರ್ಯದಲ್ಲಿ ತೊಡಗಿದರು. ಪ್ರಯಾಣಿಕರನ್ನು ಬಸ್ನಿಂದ ಮೇಲೆ ಕರೆ ತಂದರು.

ಎದುರಿನಿಂದ ಬಂದ ಬೈಕ್ಗೆ ಬಸ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ರಸ್ತೆಯ ಪಕ್ಕದಲ್ಲಿದ್ದ ಕೆರೆಗೆ ಉರುಳಿದೆ. ಅಪಘಾತದಲ್ಲಿ ಶಿವಮೊಗ್ಗದ ಗುರುಪುರದ ನಿವಾಸಿ 35 ವರ್ಷದ ದೀಪಕ್ ಮೃತಪಟ್ಟಿದ್ದಾರೆ.

ಅಪಘಾತದಲ್ಲಿ ದೀಪಕ್ ಮತ್ತು ಶಬರೀಶ್ ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗುತ್ತಿತ್ತು. ಮಾರ್ಗ ಮಧ್ಯೆ ದೀಪಕ್ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಚಿಕ್ಕಪುಟ್ಟಗಾಯಗಳಾಗಿದ್ದ ಪ್ರಯಾಣಿಕರಿಗೆ ಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಾಗರ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ಸಹಕಾರ ನೀಡಿದರು. ಪ್ರಕರಣದ ಬಗ್ಗೆ ತನಿಖೆಯನ್ನು ಸಹ ನಡೆಸುತ್ತಿದ್ದಾರೆ.
ಹೇಗಾಯ್ತು ಘಟನೆ?
ಸಾಗರದಿಂದ ಶಿವಮೊಗ್ಗ ಮೂಲಕ ದಾವಣಗೆರೆಗೆ ತೆರಳಬೇಕಿದ್ದ ಕೆಎಸ್ಆರ್ಟಿಸಿ ಬಸ್, ಕಾಸ್ಪಾಡಿ ಕ್ರಾಸ್ ಬಳಿ ಬರುತ್ತಿದ್ದಾಗ ಘಟನೆ ಸಂಭವಿಸಿದೆ. ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನ ರಸ್ತೆ ಮಧ್ಯೆಕ್ಕೆ ಬಂದಿದೆ. ಬೈಕ್ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸುವ ಬಸ್ ಚಾಲಕನ ಪ್ರಯತ್ನ ವಿಫಲವಾಗಿದೆ. ಈ ವೇಳೆ ಬೈಕ್ಗೆ ಡಿಕ್ಕಿ ಹೊಡೆದ ಬಸ್, ಕೆರೆಗೆ ಪಲ್ಟಿ ಹೊಡೆದಿದೆ. ಬೈಕ್ ಸವಾರರಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಂತರ ಅವರನ್ನು ದೀಪಕ್ ಮತ್ತು ಪ್ರಜ್ವಲ್ ಎಂದು ಗುರುತಿಸಲಾಗಿದೆ. ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಆಸ್ಪತ್ರೆಯಲ್ಲಿ ದೀಪಕ್ ಕೊನೆಯುಸಿರು
ಕೆಎಸ್ಆರ್ಟಿಸಿ ಬಸ್ ಅಪಘಾತದ ಸದ್ದು ಕೇಳುತ್ತಿದ್ದಂತೆ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಬಸ್ಸಿನಲ್ಲಿದ್ದ 20ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಕೆರೆಗೆ ಉರುಳಿದ್ದ ಬಸ್ನಿಂದ ಪ್ರಯಾಣಿಕರನ್ನು ಹೊರಗೆಳೆದು ತಂದಿದ್ದಾರೆ. ಅಪಘಾತದಿಂದ ವಿಚಲಿತರಾಗಿದ್ದ ಪ್ರಯಾಣಿಕರಿಗೆ ಸಮಾಧನಪಡಿಸಿ, ನಂತರ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ಕಳುಹಿಸಲಾಯಿತು.
ಗಂಭೀರವಾಗಿ ಗಾಯಗೊಂಡಿದ್ದ ಶಿವಮೊಗ್ಗದ ಗಾಂಧಿ ಬಜಾರ್ ನಿವಾಸಿ ದೀಪಕ್, ಕೊನೆಯುಸಿರೆಳೆದಿದ್ದಾನೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ದೀಪಕ್ ಸಾವನ್ನಪ್ಪಿದ್ದಾನೆ. ಪ್ರಜ್ವಲ್ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಅತ್ಯಂತ ಡೇಂಜರ್ ರಸ್ತೆ
"ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಐಗಿನಬೈಲು ಕ್ರಾಸ್, ಕಾಸ್ಪಾಡಿ ಕೆರೆ ತಿರುವು, ಉಳ್ಳೂರು ಕೆರೆ ತಿರುವಿನಲ್ಲಿ ಅಪಘಾತಗಳು ಸಾಮಾನ್ಯ ಎನ್ನುವಂತಾಗಿದೆ. ಪ್ರತಿ ವರ್ಷ ಈ ಮೂರು ಕಡೆಗಳಲ್ಲಿ ಹತ್ತಾರು ಮಂದಿ ಅಪಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಭಾಗದಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ರಮ ಕೈಗೊಳ್ಳಬೇಕು,'' ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.












Click it and Unblock the Notifications