ಮತ್ತೊಂದು ಹೊಸ ಘೋಷಣೆ ಮಾಡಿದ ಕೆಎಸ್ ಈಶ್ವರಪ್ಪ!
ಚಿಕ್ಕಮಗಳೂರು, ಮಾರ್ಚ್ 25: ಪುತ್ರ ಕಾಂತೇಶ್ಗೆ ಹಾವೇರಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಕಾರಣಕ್ಕೆ ಅಸಮಾಧಾನಗೊಂಡ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯವ ಘೋಷಣೆ ಮಾಡಿದ್ದಾರೆ. ಯಾವ ಮಾತುಕತೆ ನಡೆದರೂ ಸಹ ಅವರು ತಮ್ಮ ತೀರ್ಮಾನ ವಾಪಸ್ ಪಡೆಯುತ್ತಿಲ್ಲ.
ಮೇ 7ರಂದು ನಡೆಯುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಬಿ. ವೈ. ರಾಘವೇಂದ್ರ ಮತ್ತು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್. ಈಗ ಪಕ್ಷೇತರ ಅಭ್ಯರ್ಥಿಯಾಗಿ ಈಶ್ವರಪ್ಪ ಕಣಕ್ಕಿಳಿದರೆ ಚುನಾವಣಾ ಕಣ ಕುತೂಹಲಕ್ಕೆ ಕಾರಣವಾಗಲಿದೆ.

ಮಠ, ದೇವಾಲಯಗಳ ಭೇಟಿ, ಅಭಿಮಾನಿಗಳ ಸಭೆ ಹೀಗೆ ಚುನಾವಣಾ ಕಾರ್ಯದಲ್ಲಿ ಈಶ್ವರಪ್ಪ ಬ್ಯುಸಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಆಗಮಿಸಿ ಚುನಾವಣಾ ಪ್ರಚಾರ ನಡೆಸಿದರು. ಆದರೆ ಸಮಾವೇಶದಿಂದ ದೂರ ಉಳಿದು ಈಶ್ವರಪ್ಪ ಬಂಡಾಯದ ಬಾವುಟ ಹಾರಿಸಿದ್ದಾರೆ.
ಮತ್ತೊಂದು ಘೋಷಣೆ ಮಾಡಿದ ಈಶ್ವರಪ್ಪ: ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಸೋಮವಾರ ಚಿಕ್ಕಮಗಳೂರಿನಲ್ಲಿರುವ ರಂಭಾಪುರಿ ಮಠಕ್ಕೆ ಭೇಟಿ ನೀಡಿದರು. "ಈ ಪವಿತ್ರ ಕ್ಷೇತ್ರದಲ್ಲಿ ಕೆಟ್ಟ ರಾಜಕಾರಣದ ಬಗ್ಗೆ ಮಾತನಾಡುವುದಿಲ್ಲ. ಆ ಪಾಪವನ್ನು ಹೊತ್ತುಕೊಳ್ಳಲು ನಾನು ಸಿದ್ಧನಿಲ್ಲ" ಎಂದು ಹೇಳಿದರು.
"ನನ್ನ ಚುನಾವಣಾ ಸ್ಪರ್ಧೆ 100ಕ್ಕೆ 100 ಖಚಿತ. ನಾನು ಯಾವ ಸಂಧಾನಕ್ಕೂ ಒಪ್ಪುವುದಿಲ್ಲ. ಯಡಿಯೂರಪ್ಪನವರ ಬಗ್ಗೆ ಏನೇ ಇದ್ದರೂ ಹೊರಗಡೆ ಮಾತನಾಡುತ್ತೇನೆ" ಎಂದು ತಿಳಿಸಿದರು. ಈ ಮೂಲಕ ಸ್ಪರ್ಧೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಖಚಿತಪಡಿಸಿದರು.
ಹಠಬಿಡದ ಈಶ್ವರಪ್ಪ: ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಬಿಜೆಪಿಯ ಭದ್ರಕೋಟೆ ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲ್ಲುವುದು ಅಷ್ಟು ಸುಲಭವೇ?. ಶಿವಮೊಗ್ಗದ ರಾಜಕೀಯ ಗೊತ್ತಿದ್ದವರು ಇದು ಖಂಡಿತ ಸಾಧ್ಯವಿಲ್ಲ ಎಂದು ಹೇಳುತ್ತಾರೆ.
ಇಷ್ಟು ವರ್ಷ ಈಶ್ವರಪ್ಪ ರಾಜಕೀಯ ಮಾಡಿಕೊಂಡು ಬಂದಿದ್ದು ಬಿಜೆಪಿ, ಯಡಿಯೂರಪ್ಪ ಅವರ ಪ್ರಭಾವದಲ್ಲಿಯೇ. ಆದರೆ ಈಗ ಯಡಿಯೂರಪ್ಪ ಮತ್ತು ಅವರ ಮಕ್ಕಳನ್ನು ಎದುರು ಹಾಕಿಕೊಂಡು, ಬಿಜೆಪಿ ಅಭ್ಯರ್ಥಿ ವಿರುದ್ಧವೇ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಸುಮ್ಮನೆ ಎಂಬ ಮಾತು ಕೇಳಿ ಬರುತ್ತಿದೆ.
ಬಿ. ಎಸ್. ಯಡಿಯೂರಪ್ಪ 2013ರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿ ಶಿಕಾರಿಪುರದಲ್ಲಿ ಕಣಕ್ಕಿಳಿದು ಗೆದ್ದಿದ್ದರು. ಆಗ ಶಿವಮೊಗ್ಗ ನಗರದಲ್ಲಿ ಯಡಿಯೂರಪ್ಪ ಎದುರು ಹಾಕಿಕೊಂಡು ಕೆಜೆಪಿ ಅಭ್ಯರ್ಥಿ ವಿರುದ್ಧ ಸೋತು 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು ಈಶ್ವರಪ್ಪ.
ಲೋಕಸಭೆ ಚುನಾವಣೆಗೆ ಕರ್ನಾಟಕ ಬಿಜೆಪಿ ಉಸ್ತುವಾರಿಯಾದ ರಾಧಾ ಮೋಹನ್ ದಾಸ್ ಅಗರ್ವಾಲ್ ಬಂದು, ಭೇಟಿ ಮಾಡಿ ಸಭೆ ಮಾಡಿದರೂ ಸಹ ಕೆ. ಎಸ್. ಈಶ್ವರಪ್ಪ ಪಟ್ಟನ್ನು ಸಡಿಲಿಸುತ್ತಿಲ್ಲ. ಮಠಗಳ ಬೆಂಬಲವಿದೆ, ಶಿವಮೊಗ್ಗದ ಜನರ ನನ್ನ ಜೊತೆ ಇದ್ದಾರೆ ಎಂದು ಅವರು ಪಕ್ಷೇತರ ಅಭ್ಯರ್ಥಿಯಾಗಿ ಪ್ರಚಾರವನ್ನು ಆರಂಭಿಸಿದ್ದಾರೆ.
ಈಶ್ವರಪ್ಪ ಮನವೊಲಿಸುತ್ತೇವೆ. ಟಿಕೆಟ್ ಹಂಚಿಕೆ ಕೇವಲ ಯಡಿಯೂರಪ್ಪ ತೀರ್ಮಾನವಲ್ಲ. ಕೇಂದ್ರ ಚುನಾವಣಾ ಸಮಿತಿಯ ನಿರ್ಧಾರ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ. ಆದರೆ ತಮ್ಮ ಪುತ್ರನಿಗೆ ಟಿಕೆಟ್ ಕೈತಪ್ಪಲು ಯಡಿಯೂರಪ್ಪ, ಅವರ ಪುತ್ರ ಬಿ. ವೈ. ವಿಜಯೇಂದ್ರ ಕಾರಣ ಎಂದು ಈಶ್ವರಪ್ಪ ಟೀಕೆಗಳನ್ನು ಮಾಡುತ್ತಿದ್ದಾರೆ.
ಚುನಾವಣಾ ಅಧಿಸೂಚನೆ ಪ್ರಕಟವಾಗಲೂ ಇನ್ನೂ ಸಮಯವಿದೆ. ಕೆ. ಎಸ್. ಈಶ್ವರಪ್ಪ ತೀರ್ಮಾನ ಬದಲಿಸುತ್ತಾರೆಯೇ? ಅಥವ ಪಕ್ಷೇತರ ಅಭ್ಯರ್ಥಿಯಾಗಿ ಉಳಿಯುತ್ತಾರೆಯೇ? ಕಾದು ನೋಡಬೇಕಿದೆ.












Click it and Unblock the Notifications