ಪೋಲಿಸರನ್ನೇ ದೋಚುತ್ತಿದ್ದ ಭೂಪ ಈಗ ಕಂಬಿಗಳ ಹಿಂದೆ
ಶಿವಮೊಗ್ಗ, ಜನವರಿ 17: ಪೊಲೀಸರನ್ನೇ ಯಾಮಾರಿಸಿ ಅವರಿಂದ ಹಣ ಕೀಳುತ್ತಿದ್ದ ಆಸಾಮಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಪೊಲೀಸ್ ಉನ್ನತ ಅಧಿಕಾರಿಯ ಸೋಗಿನಲ್ಲಿ ಪಿಎಸ್ಐ, ಸಿಐ ಅಧಿಕಾರಿಗಳಿಗೆ ಕರೆ ಮಾಡಿ ಹಣ ವಸೂಲಿ ಮಾಡುತ್ತಿದ್ದ ಗದಗ ಜಿಲ್ಲೆಯ ನರಗುಂದ ತಾಲ್ಲೂಕಿನ ಕೊಣ್ಣೂರು ನಿವಾಸಿ ಶಿವಣ್ಣ ಹಿರೇಮಠ(34) ಶಿವಮೊಗ್ಗ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಪೊಲೀಸ್ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳ ಮೊಬೈಲ್ ಸಿಮ್ ನಂಬರ್ ತಿಳಿದುಕೊಂಡು ಅದೇ ಸೀರೀಸ್ನಲ್ಲೇ ಮಾಮೂಲಿ ಸಿಮ್ ಖರೀದಿಸಿ ಕೆಳಮಟ್ಟದ ಅಧಿಕಾರಿಗಳಿಗೆ ಕರೆ ಮಾಡಿ 'ಒಬ್ಬ ವ್ಯಕ್ತಿ ಬರುತ್ತಾನೆ ಅವನಿಗೆ ಹಣ ಕೊಡಿ ಆಮೇಲೆ ನಾನು ನಿಮಗೆ ಕೊಡುತ್ತೇನೆ' ಎಂದು ಹೇಳುತ್ತಿದ್ದ. ಆ ನಂತರ ತಾನೇ ಹೋಗಿ ಸಾಹೇಬರು ಕಳಿಸಿದ್ದಾರೆಂದು ಹೇಳಿ ಹಣ ಪಡೆದುಕೊಂಡು ಬರುತ್ತಿದ್ದ.

ಇತ್ತೀಚೆಗಷ್ಟೆ ಈತ ಶಿವಮೊಗ್ಗ ಪೋಲೀಸರಿಂದ ಸುಮಾರು 25 ಸಾವಿರ ರೂಪಾಯಿ ಹಣ ವಸೂಲಿ ಮಾಡಿಕೊಂಡಿದ್ದನು. ಶಿವಮೊಗ್ಗದ ಜಯನಗರ ಪೋಲೀಸ್ ಠಾಣೆಯ ಪಿಎಸ್ಐ ಇಮ್ರಾನ್ ಗೆ ಕರೆ ಮಾಡಿ ಹಣ ಕೊಡುವಂತೆ ನಿರ್ದೇಶಿಸಿದ್ದಾನೆ. ನಂತರ ಹಣ ಪಡೆಯಲು ಬಂದಾಗ ಅನುಮಾನಗೊಂಡ ಪಿಎಸ್ಐ ಇಮ್ರಾನ್ ಆತನ ವಿಚಾರಣೆ ನಡೆಸಿದ್ದಾರೆ ಆಗ ಶಿವಣ್ಣನ ನಾಟಕ ಗೊತ್ತಾಗಿದೆ.
ಈತ ಶಿವಮೊಗ್ಗ ಮಾತ್ರವಲ್ಲ ಇತರ ಹಲವು ಕಡೆ ಇದೇ ಕಸಬು ಮಾಡಿ ಸಾವಿರಾರು ರೂಪಾಯಿ ಹಣವನ್ನು ಪಿಎಸ್ಐಗಳಿಂದ ವಸೂಲಿ ಮಾಡಿರುವಾಗಿ ವಿಚಾರಣೆ ಸಮಯದಲ್ಲಿ ತಿಳಿದುಬಂದಿದೆ.












Click it and Unblock the Notifications