ಲಿಂಗನಮಕ್ಕಿ ಡ್ಯಾಂ ಬಹುತೇಕ ಭರ್ತಿ, 2ನೇ ಮುನ್ನೆಚ್ಚರಿಕೆ ಪ್ರಕಟ
ಶಿವಮೊಗ್ಗ, ಜುಲೈ 28: ಶಿವಮೊಗ್ಗ ಜಿಲ್ಲೆ ಸಾಗರದಲ್ಲಿರುವ ಲಿಂಗನಮಕ್ಕಿ ಡ್ಯಾಂ ಬಹುತೇಕ ಭರ್ತಿಯಾಗಿದೆ. ಡ್ಯಾಂನಿಂದ ಶರಾವತಿ ನದಿಗೆ ನೀರು ಹರಿಸುವ ಕುರಿತು ಕಾರ್ಯನಿರ್ವಾಹಕ ಅಭಿಯಂತರರು (ಕಾಮಗಾರಿ) ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಕಾರ್ಗಲ್ ಪ್ರಕಟಣೆ ಮೂಲಕ 2ನೇ ಮುನ್ನೆಚ್ಚರಿಕೆ ಘೋಷಣೆ ಮಾಡಿದೆ.
ಈ ಕುರಿತು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಪರವಾಗಿ ಕಾರ್ಯನಿರ್ವಾಹಕ ಅಭಿಯಂತರರು (ಕಾಮಗಾರಿ) ಪ್ರಕಟಣೆ ನೀಡಿದ್ದು, ಈ ಪ್ರಕಟಣೆ ಲಿಂಗನಮಕ್ಕಿ ಜಲಾಶಯದ ಪ್ರವಾಹದ ಎರಡನೇ ಮುನ್ನೆಚ್ಚರಿಕೆಯ ಸೂಚನೆ ಎಂಬ ವಿಷಯ ಒಳಗೊಂಡಿದೆ.

ಪ್ರಕಟಣೆಯ ವಿವರಗಳು: ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟವು ದಿನೇದಿನೇ ಏರುತ್ತಿರುತ್ತದೆ.
ಜಲಾಶಯದ ಗರಿಷ್ಠ ಮಟ್ಟವು 1819.00 ಅಡಿಗಳಾಗಿದ್ದು, ಇಂದಿನ ಅಂದರೆ ದಿನಾಂಕ 27/07/2024ರಂದು ಬೆಳಗ್ಗೆ 8 ಗಂಟೆಗೆ ಜಲಾಶಯದ ನೀರಿನ ಮಟ್ಟ 1807.00 (75.51%) ಅಡಿಗಳಿಗೆ ತಲುಪಿರುತ್ತದೆ. ಈ ದಿನದ ಲಿಂಗನಮಕ್ಕಿ ಜಲಾಶಯದ ಒಳ ಹರಿವು ಸುಮಾರು 74,600 ಕ್ಯೂಸೆಕ್ಗಳಿಗಿಂತಲೂ ಅಧಿಕವಾಗಿದೆ.
ಇದೇ ರೀತಿಯಲ್ಲಿ ಜಲಾಶಯಕ್ಕೆ ಬರುವ ನೀರಿನ ಹರಿವು ಮುಂದುವರೆದ ಪಕ್ಷದಲ್ಲಿ ಜಲಾಶಯವು ಅತೀ ಶೀಘ್ರದಲ್ಲಿ ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಅಣೆಕಟ್ಟೆಯ ಸುರಕ್ಷತೆ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಜಲಾಶಯದಿಂದ ಯಾವುದೇ ಸಮಯದಲ್ಲಿ ಹೊರಬಿಡಲಾಗುವುದು.
ಆದ್ದರಿಂದ, ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ವಗೈರೆಗಳೊಂದಿಗೆ, ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿಕೊಳ್ಳಬೇಕೆಂದು ಹಾಗೂ ಪ್ರವಾಸಿಗರು ಅನಗತ್ಯವಾಗಿ ನದಿಗೆ ಇಳಿಯಬಾರದೆಂದು ಈ ಮೂಲಕ ತಿಳಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.
ಗಂಗೆ ಪೂಜೆ ಮಾಡಿದ್ದ ಅಧಿಕಾರಿಗಳು: ಲಿಂಗನಮಕ್ಕಿ ಜಲಾಶಯ ಭರ್ತಿಯಾಗುತ್ತಿರುವ ಹಿನ್ನಲೆಯಲ್ಲಿ ಶುಕ್ರವಾರ ಅಧಿಕಾರಿಗಳು ಗಂಗೆಪೂಜೆ ಮಾಡಿ, ಶರಾವತಿ ನದಿಗೆ ಬಾಗಿನ ಅರ್ಪಣೆ ಮಾಡಿದ್ದರು. ಒಂದು ಗೇಟ್ ಮೇಲೆತ್ತಿ ನೀರು ಹೊರಕ್ಕೆ ಬಿಟ್ಟು ಬಾಗಿನ ಅರ್ಪಿಸಿದ್ದರು.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನಲ್ಲಿ ಲಿಂಗನಮಕ್ಕಿ ಜಲಾಶಯವಿದೆ. ಜಲಾಶಯ ಭರ್ತಿಯಾದ ಬಳಿಕ ಹೊರ ಬೀಡುವ ನೀರು ವಿಶ್ವವಿಖ್ಯಾತ ಜೋಗದ ಮೂಲಕ ಸಾಗಿ ಉತ್ತರ ಜಿಲ್ಲೆಗೆ ತಲುಪುತ್ತದೆ. ಹೊಸನಗರ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ.
ಜಲಾಶಯದ ನೀರಿನ ಮಟ್ಟ ಹೆಚ್ಚಳವಾದ ಹಿನ್ನೆಲೆಯಲ್ಲಿ ಶುಕ್ರವಾರ ಅಧಿಕಾರಿಗಳು ಗಂಗೆಪೂಜೆಯನ್ನು ಮಾಡಿ, ಸಾಂಪ್ರದಾಯಿಕವಾಗಿ ಒಂದು ಗೇಟ್ ಮೂಲಕ ನೀರನ್ನು ಬಿಟ್ಟಿದ್ದರು. ಕಳೆದ ವರ್ಷ ಮಳೆ ಕೊರತೆಯ ಕಾರಣ ಡ್ಯಾಂ ತುಂಬಿರಲಿಲ್ಲ. ಆದರೆ ಈ ಬಾರಿ ಡ್ಯಾಂ ಭರ್ತಿಯಾಗುವ ಸೂಚನೆ ಸಿಕ್ಕಿದೆ.
ಶಿವಮೊಗ್ಗದಲ್ಲಿ ಭಾನುವಾರ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, "ಈ ಹಿಂದೆ ಮಾಡಿರುವ ಯೋಜನೆಗಳಲ್ಲಿ ಕೆಲವು ಕಾನೂನು ತೊಡಗಿದೆ. ಶರಾವತಿ ಸಂತ್ರಸ್ತರಿಗೆ ಸಹಕಾರ ನೀಡುವ ಕೆಲಸ ಆಗುತ್ತದೆ. ಸುಪ್ರೀಂಕೋರ್ಟ್ನಲ್ಲಿ ಸಂತ್ರಸ್ತರಿಗೆ ಅನ್ಯಾಯ ಆಗಿರುವ ಬಗ್ಗೆ ಸರ್ಕಾರ ಕೇಸು ನಡೆಸಲಿದೆ" ಎಂದರು.












Click it and Unblock the Notifications