ಅನ್ನಭಾಗ್ಯದ ಅಕ್ಕಿ ಮಾರಿದರೆ ತಪ್ಪಿಲ್ಲ ಅಂದ್ರು ಸಚಿವರು!

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಶುಕ್ರವಾರ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಿಮ್ಮನೆ ರತ್ನಾಕರ್, ಅನ್ನಭಾಗ್ಯ ಯೋಜನೆಯನ್ನು ಪ್ರಸ್ತಾಪಿಸಿದರು. ಬಡವರಿಗಾಗಿ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಆರಂಭಿಸಿದೆ ಎಂದು ಹೇಳಿದರು.
ಅನ್ನಭಾಗ್ಯ ಯೋಜನೆಯಲ್ಲಿ ಖರೀದಿಸುವ ಅಕ್ಕಿಯನ್ನು ಕೆಲವರು ಮಾರಿಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ. ಇದರಲ್ಲಿ ತಪ್ಪೇನಿಲ್ಲ, ಮಾರಿಕೊಳ್ಳಲಿ ಬಿಡಿ ಎಂದರು. ತಮ್ಮ ಹೇಳಿಕೆಗೆ ಸಮರ್ಥನೆ ನೀಡುತ್ತಾ ಸ್ವಲ್ಪ ಅಕ್ಕಿಯನ್ನು ಮಾರಿದರೆ ತಪ್ಪಿಲ್ಲ ಎಂದು ತಿಳಿಸಿದರು.
ಶ್ರೀಮಂತರು ಕೋಟಿಗಟ್ಟಲೆ ಲೂಟಿ ಹೊಡೆದಿದ್ದಾರೆ. ಹೀಗಿರುವಾಗ ಕುಟುಂಬದ ಖರ್ಚಿಗೆ, ಕಾಯಿಲೆಗೆ ಬೇಕಿರುವ ಮಾತ್ರೆ ಖರೀದಿಗೆ, ಮಕ್ಕಳಿಗೆ ಚಪ್ಪಲಿ ಕೊಡಿಸಲು ಬಡವರು ಒಂದೆರಡು ಕೆ.ಜಿ.ಅಕ್ಕಿಯನ್ನು ಮಾರಿಕೊಂಡರೆ ತಪ್ಪಿಲ್ಲ ಎಂದು ವಿಶ್ಲೇಷಿಸಿದರು.
ಬಡವರ ವಿರುದ್ಧ ಶ್ರೀಮಂತರು ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಯೋಜನೆ ಜಾರಿಗೆ ಬಂದಾಗ ಬಡವರು ಸೋಮಾರಿಗಳಾಗುತ್ತಾರೆ ಎಂದು ಶ್ರೀಮಂತರು ಆರೋಪಿಸುತ್ತಿದ್ದರು. ಸದ್ಯ ಅಕ್ಕಿಯನ್ನು ಮಾರಿಕೊಳ್ಳುತ್ತಾರೆ ಎಂದು ದೂರುತ್ತಿದ್ದಾರೆ.
ಜನರು ತಮ್ಮ ಕಷ್ಟಗಳಿಗಾಗಿ ಎಲ್ಲೋ ಒಂದಿಷ್ಟು ಅಕ್ಕಿ ಮಾರಿಕೊಳ್ಳುತ್ತಿರುವುದು ನಿಜವಿದ್ದರೂ ಇರಬಹುದು. ಅದರಲ್ಲಿ ತಪ್ಪೇನಿಲ್ಲ ಎಂದು ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ಮುಖ್ಯಮಂತ್ರಿಗಳ ಸಂಪುಟ ಸಚಿವರೊಬ್ಬರು ನೀಡಿರುವ ಈ ಹೇಳಿಕೆ ವಿವಾದವೆಬ್ಬಿಸುವ ಸಾಧ್ಯತೆ ಇದೆ.
ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಅಲ್ಪಸಂಖ್ಯಾತರ ಸಭೆಯಲ್ಲಿ 'ನೀವು ಸಾಲ ಪಡೆದು ಅದನ್ನು ಮರು ಪಾವತಿಸಿದೆ ಸರ್ಕಾರಕ್ಕೆ ಟೋಪಿ ಹಾಕಿ' ಎಂದು ಹೇಳಿಕೆ ನೀಡುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿವಾದಕ್ಕೆ ಈಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications