'ಯಾರು ಏನೇ ಸರ್ಕಸ್ ಮಾಡಿದರೂ ಬಿಜೆಪಿ ಶಾಸಕರ ಒಗ್ಗಟ್ಟು ಮುರಿಯಲಾಗದು'- ಈಶ್ವರಪ್ಪ
ಶಿವಮೊಗ್ಗ, ಮೇ 26: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಸುದ್ದಿಯಾಗುತ್ತಿದ್ದಂತೆ ಶಾಸಕರ ಸಭೆ ಕರೆಯುವಂತೆ ಬಿಜೆಪಿ ಹೈಕಮಾಂಡ್ ಸಿಎಂ ಬಿ ಎಸ್ ಯಡಿಯೂರಪ್ಪಗೆ ಸೂಚಿಸಿದೆ. ಈ ನಡುವೆ ವಯೋಸಹಜ ಸಮಸ್ಯೆ ಇಂದಾಗಿ ಬಿಎಸ್ವೈ ಸಿಎಂ ಕುರ್ಚಿಯಿಂದ ಕೆಳಗಿಳಿಯಲಿದ್ದಾರೆ, ಮುಂದಿನ ಸಿಎಂ ಯಾರೆಂದು ಪ್ರಧಾನಿ ಮೋದಿ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಆದರೆ ರಾಜ್ಯದ ಬಿಜೆಪಿ ಮುಖಂಡರುಗಳು ಈ ಸುದ್ದಿಗಳನ್ನು ಅಲ್ಲಗಳೆಯುತ್ತಿದ್ದಾರೆ.
Recommended Video
ಶಿವಮೊಗ್ಗದಲ್ಲಿ ಬುಧವಾರ ಮಾಧ್ಯಮದೊಂದಿಗೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ''ಮುಖ್ಯಮಂತ್ರಿ ಬದಲಾವಣೆ ವಿಚಾರ ಬರೀ ಊಹಾಪೋಹ ಸುದ್ದಿ. ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಆಗಲ್ಲ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರೇ ಮುಂದುವರಿಯುತ್ತಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಹಾಗೆಯೇ ಯಾರೂ ಏನೇ ಸರ್ಕಸ್ ಮಾಡಿದರೂ ಬಿಜೆಪಿ ಶಾಸಕರ ಒಗ್ಗಟ್ಟು ಮುರಿಯಲು ಸಾಧ್ಯವಾಗುವುದಿಲ್ಲ" ಎಂದಿದ್ದಾರೆ.
''ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರ ಬದಲಾವಣೆ ಇಲ್ಲ. ಈ ಬಗ್ಗೆ ಕೇಂದ್ರ ನಾಯಕರು ಈಗಾಗಲೇ ತೀರ್ಮಾನ ಕೈಗೊಂಡಾಗಿದೆ'' ಎಂದು ಹೇಳಿದ ಈಶ್ವರಪ್ಪ, ಇದೇ ವೇಳೆ ''ಆದರೆ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ'' ಎಂದೂ ಹೇಳಿದ್ದಾರೆ.

''ಕೊರೊನಾ ಸಂದರ್ಭದಲ್ಲಿ ವಿಧಾನ ಮಂಡಲದ ಸಮಿತಿ ಸಭೆಯೇ ನಡೆಯುತ್ತಿಲ್ಲ. ಇನ್ನು ಸಂಪುಟ ಸಭೆ ನಡೆಸಲು ಕೂಡಾ ನಾವು ಹಿಂದೆ ಮುಂದೆ ನೋಡುತ್ತಿದ್ದೇವೆ. ಹಾಗಿರುವಾಗ ಈ ವಿಷಯದಲ್ಲಿ ತಲೆಕೆಡಿಸಿಕೊಳ್ಳಲ ನಮ್ಮ ಶಾಸಕರಿಗೆ ಸಮಯವಿಲ್ಲ. ಈ ಕೊರೊನಾ ಸಂದರ್ಭದಲ್ಲಿ ಶಾಸಕರು, ಸಚಿವರಿಗೆ ಬೇಕಾದಷ್ಟು ಕೆಲಸವಿದೆ'' ಎಂದು ತಿಳಿಸಿದರು.
ಇನ್ನು ಇದಕ್ಕೂ ಮುನ್ನ ಮಾತನಾಡಿದ್ದ ಕಂದಾಯ ಸಚಿವ ಆರ್.ಅಶೋಕ್, ''ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದ ಚಟುವಟಿಕೆಗಳು ನಡೆದಿರುವುದು ಶೇ.100 ರಷ್ಟು ನಿಜ. ಆದರೆ ನಾನು ಮಾತ್ರ ಕೊರೊನಾ ನಿರ್ವಹಣೆ ಕಾರ್ಯದಲ್ಲಿದ್ದೇನೆ. ನನಗೆ ಈ ಸಂದರ್ಭದಲ್ಲಿ ಇದು ಮುಖ್ಯ'' ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications