ಕನ್ನಯ್ಯ ಲಾಲ್ ಕೊಲೆ: ದೇಶದಲ್ಲಿ ಮದರಾಸಗಳನ್ನು ಬ್ಯಾನ್ ಮಾಡಬೇಕೆಂದ ಈಶ್ವರಪ್ಪ
ಶಿವಮೊಗ್ಗ, ಜೂನ್ 29: ಮದರಸಾಗಳಲ್ಲಿ ಶಸ್ತ್ರಾಸ್ತ್ರಗಳ ತರಬೇತಿ ನೀಡಲಾಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ಮದರಸಾಗಳನ್ನು ಬ್ಯಾನ್ ಮಾಡಬೇಕು ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಆಗ್ರಹಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ, "ರಾಜಸ್ಥಾನದಲ್ಲಿ ಕನ್ನಯ್ಯ ಲಾಲ್ ಅವರ ಕಗ್ಗೊಲೆ, ಕೇವಲ ಒಬ್ಬ ವ್ಯಕ್ತಿಯನ್ನು ಇಬ್ಬರು ಕೊಂದರು ಎಂಬುದಕ್ಕೆ ಸೀಮಿತವಾಗಲ್ಲ. ಇಡೀ ಹಿಂದೂ ಸಮಾಜಕ್ಕೆ ದೇಶದೆಲ್ಲೆಡೆ ಇದು ಸವಾಲಾಗಿದೆ" ಎಂದು ಹೇಳಿದರು.
ಉದಯಪುರ ಟೈಲರ್ನ ಹಂತಕರಿಗೆ ಪಾಕ್ ಉಗ್ರಗಾಮಿ ಗುಂಪಿನ ಜೊತೆ ಸಂಪರ್ಕ?
"ನಮ್ಮ ಶ್ರದ್ಧಾ ಕೇಂದ್ರಗಳು ನೂರಾರು ವರ್ಷದಿಂದ ಅಪವಿತ್ರಗೊಂಡಿವೆ. ಅಯೋಧ್ಯೆಯಲ್ಲಿದ್ದ ರಾಮಮಂದಿರ ಧ್ವಂಸ ಮಾಡಿ ಬಾಬರಿ ಮಸೀದಿ ಕಟ್ಟಿದ್ದರು. ಇದು ಗೊತ್ತಿದ್ದರೂ ಕೂಡ ಅಪಮಾನವನ್ನು ನೂರಾರು ವರ್ಷ ಸಹಿಸಿಕೊಂಡು ಬಂದಿದ್ದೆವು. ಇಂದಿಗೂ ಕಾಶಿಯಲ್ಲಿ ವಿಶ್ವನಾಥನ ಲಿಂಗ ನೀರಿನಲ್ಲಿತ್ತು. ಆ ನೀರಿನಲ್ಲಿ ಮುಸಲ್ಮಾನರು ಕಾಲು ತೊಳೆದುಕೊಂಡು ಹೋಗಿ ನಮಾಜು ಮಾಡುತ್ತಿದ್ದರು. ಮಥುರಾದಲ್ಲಿ ಶ್ರೀಕೃಷ್ಣನ ಜನ್ಮ ಸ್ಥಳದ ದೇವಾಲಯ ಧ್ವಂಸ ಮಾಡಿ ಮಸೀದಿ ಕಟ್ಟಿದ್ದಾರೆ" ಎಂದರು.
ರಾಜಸ್ಥಾನದಲ್ಲಿ ಟೈಲರ್ ಶಿರಚ್ಛೇದ: 'ಕೊಂದು ಉಳಿಸಿಕೊಳ್ಳುವ ಧರ್ಮ ಯಾವುದಿದೆ?
ಪ್ರಧಾನಿ ಕೊಲೆ ಬೆದರಿಕೆ ದೇಶಕ್ಕೆ ಅಪಮಾನ
"ಈ ಮೂರು ದೇವಸ್ಥಾನಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ. ಹಿಂದೂ ಸಮಾಜ ಅಪಮಾನ ಸಹಿಸಿಕೊಂಡು ಶಾಂತಿಯಿಂದ ಇರುವಾಗ ನೂಪುರ್ ಶರ್ಮಾ ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಮುಸ್ಲಿಂ ದೇಶಗಳಲ್ಲಿ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಯಿತು. ಆದರೆ ಇದೀಗ ರಾಜಸ್ಥಾನದಲ್ಲಿ ಬಡ ಟೈಲರ್ ಕೊಲೆ ಮಾಡಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿಯನ್ನು ಕೊಲೆ ಮಾಡುವುದಾಗಿ ಹೇಳಿದ್ದಾರೆ. ಇದು ಹಿಂದೂ ಸಮುದಾಯಕ್ಕೆ ಆದ ಅಪಮಾನ ಹಾಗೂ ಸವಾಲು" ಎಂದು ಹೇಳಿದರು.
ಕಾಂಗ್ರೆಸ್ ನಾಯಕರು ಬಾಯಿ ಬಿಟ್ಟಿಲ್ಲ
"ಸದಾ ಮುಸ್ಲಿಂ ಪರ ನಿಲ್ಲುವ ಕಾಂಗ್ರೆಸ್ ನಾಯಕರು ಹಿಂದೂ ವ್ಯಕ್ತಿಯನ್ನು ಕೊಲೆ ಮಾಡಿ, ವಿಡಿಯೋ ಮಾಡಿ ಹರಿಬಿಟ್ಟರೂ, ಇದುವರೆಗೆ ಯಾರೊಬ್ಬ ಕಾಂಗ್ರೆಸ್ ನಾಯಕ ತುಟಿ ಬಿಚ್ಚಿಲ್ಲ. ಹಿಂದುಗಳಿಗೆ ಅವಮಾನ, ಕೊಲೆಗಳು ನಡೆಯುತ್ತಿದ್ದರೂ ಕಾಂಗ್ರೆಸ್ ನಾಯಕರು ಮಾತ್ರ ಆಗಿದ್ದು ಆಯಿತು ಎನ್ನುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಬಾಯಿ ಬಿಟ್ಟಿಲ್ಲ" ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ದುಷ್ಕರ್ಮಿಗಳನ್ನು ಗುಂಡಿಕ್ಕಿ ಕೊಲ್ಲಿ
"ಸ್ವತಃ ಕೊಲೆಗಡುಕರೇ ನಾವೇ ಕೊಂದಿದ್ದೇವೆ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಆದರೆ ಈಗಿನ ಕಾನೂನಿನಲ್ಲಿ ಅವರ ಮೇಲೆ ಶೀಘ್ರವೇ ಕ್ರಮ ಕೈಗೊಳ್ಳಲು ಅವಕಾಶವಿಲ್ಲ. ಅಲ್ಲದೆ ಅವರಿಗೆ ಕಾನೂನಿನಲ್ಲಿ ಜಾಮೀನು ಸಿಗುವ ಸಾಧ್ಯತೆಯಿದೆ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಅಧಿವೇಶನ ಕರೆದು ಕಾನೂನು ಬದಲಾವಣೆ ಮಾಡಬೇಕು. ಕೊಲೆಗಡುಕರು ಕೊಲೆ ಮಾಡಿದ್ದೇನೆ ಎಂದು ಹೇಳಿಕೊಂಡ ಮೇಲೆ ವಿಚಾರಣೆಯ ಅಗತ್ಯವಿಲ್ಲ. ಕೊಲೆಗಡುಕ ಎಂದು ತೀರ್ಮಾನವಾದ ಕೂಡಲೇ ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಅಥವಾ ಗಲ್ಲಿಗೇರಿಸಬೇಕು" ಎಂದು ಹೇಳಿದರು.
ವಿಶ್ವಸಂಸ್ಥೆಯಲ್ಲಿ ಚರ್ಚೆ ಆಗಬೇಕು
"ಮದರಸಾಗಳಲ್ಲಿ ಶಸ್ತ್ರಾಸ್ತ್ರಗಳ ತರಬೇತಿ ನೀಡಲಾಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ಮದರಸಾಗಳನ್ನು ಬ್ಯಾನ್ ಮಾಡಬೇಕು. ಇಲ್ಲವೇ ಅಲ್ಲಿ ದೇಶಭಕ್ತಿ ಮೂಡಿಸುವ ಶಿಕ್ಷಣ ಕೊಡಿಸುವ ಕೆಲಸ ಮಾಡಬೇಕು. ಪ್ರಧಾನಿಯನ್ನು ಕೊಲ್ಲುತ್ತೇವೆ ಎಂದು ಹೇಳಿರುವ ಹೇಳಿಕೆ ಬಗ್ಗೆ ವಿಶ್ವಸಂಸ್ಥೆಯಲ್ಲಿ ಚರ್ಚೆಯಾಗಬೇಕು. ಜೊತೆಗೆ ಉಗ್ರರ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಬೇಕು ಎಂದ ಅವರು, ಮುಂದಿನ ದಿನಗಳಲ್ಲಿ ಕಾಶಿಯೂ ಮುಕ್ತವಾಗಿ ಹಿಂದುಗಳ ಕೈಗೆ ಬರಲಿದೆ. ಮುಂದೆ ಹಿಂದೂಗಳ ಆಕ್ರೋಶದಿಂದ ದೇಶದಲ್ಲಿ ಏನು ಬೇಕಾದರೂ ಆಗಬಹುದು" ಎಂದು ಎಚ್ಚರಿಕೆ ನೀಡಿದರು.
"ಕನ್ನಯ್ಯ ಕೊಲೆ ಪ್ರಕರಣವನ್ನು ಎನ್ಐಎಗೆ ವಹಿಸುವುದಾಗಿ ಕೇಂದ್ರ ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಇದು ಸ್ವಾಗತಾರ್ಹ ಬೆಳವಣಿಗೆ" ಎಂದರು ತಿಳಿಸಿದರು.