ಶಿವಮೊಗ್ಗ-ಬೆಂಗಳೂರು ಇಂಟರ್ಸಿಟಿ ಸಮಯ ಮತ್ತೆ ಬದಲು
ಶಿವಮೊಗ್ಗ, ಮೇ 3: ತಾಳಗುಪ್ಪದಿಂದ ಬೆಂಗಳೂರಿಗೆ ಪ್ರತಿದಿನ ಬೆಳಿಗ್ಗೆ ಹೊರಡುವ ಇಂಟರ್ಸಿಟಿ ರೈಲಿನ ವೇಳಾಪಟ್ಟಿಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿತ್ತು. ಸಮಯ ಬದಲಾವಣೆಯಿಂದ ಪ್ರಯಾಣಿಕರು ತೊಂದರೆಗೆ ಒಳಗಾಗುತ್ತಿರುವುದರಿಂದ ಎರಡು ದಿನದಲ್ಲಿಯೇ ಈ ನಿರ್ಧಾರದಲ್ಲಿ ರೈಲ್ವೆ ಇಲಾಖೆ ಮಾರ್ಪಾಡು ತಂದಿದೆ.
ರೈಲ್ವೆ ಮಾರ್ಗದ ಅಭಿವೃದ್ಧಿ ಕಾಮಗಾರಿ ಸಲುವಾಗಿ ಶಿವಮೊಗ್ಗದಿಂದ ಬೆಂಗಳೂರಿಗೆ ಹೊರಡುವ ಇಂಟರ್ಸಿಟಿ ರೈಲಿನ ಸಂಚಾರದ ಸಮಯವನ್ನು ಬದಲಾಯಿಸಲಾಗಿತ್ತು. ನಿಗದಿತ ವೇಳೆಗಿಂತ ರೈಲು ಒಂದು ಗಂಟೆ ತಡವಾಗಿ ಹೊರಡುವುದಾಗಿ ನಿರ್ಧರಿಸಲಾಗಿತ್ತು. ಮೇ 1ರಿಂದ ಜೂನ್ 6ರವರೆಗೆ ಈ ಹೊಸ ವೇಳಾಪಟ್ಟಿಯಂತೆ ರೈಲು ಶಿವಮೊಗ್ಗದಿಂದ ತಡವಾಗಿ ನಿರ್ಗಮಿಸಬೇಕಿತ್ತು. ಅದರಲ್ಲಿ ಅಲ್ಪ ಬದಲಾವಣೆ ತಂದಿದ್ದು, ರೈಲು 40 ನಿಮಿಷ ತಡವಾಗಿ ಹೊರಡಲಿದೆ.
ತಾಳಗುಪ್ಪದಿಂದ ರೈಲು ಬೆಳಿಗ್ಗೆ 3.50ಕ್ಕೆ ಹೊರಟು 6.05ಕ್ಕೆ ಶಿವಮೊಗ್ಗ ತಲುಪುತ್ತದೆ. ಶಿವಮೊಗ್ಗದಿಂದ ಬೆಳಿಗ್ಗೆ 6.40ಕ್ಕೆ ಬೆಂಗಳೂರಿಗೆ ಹೊರಡಲಿದೆ. ರೈಲು ಮಾರ್ಗದ ಅಭಿವೃದ್ಧಿ ಕಾಮಗಾರಿ ಸಲುವಾಗಿ 6.40ರ ಬದಲು ಬೆಳಿಗ್ಗೆ 7.40ಕ್ಕೆ ರೈಲು ಹೊರಡುವಂತೆ ಸಮಯ ಬದಲಾಯಿಸಲಾಗಿತ್ತು. ಈಗ ರೈಲ್ವೆ ಇಲಾಖೆ ಆದೇಶವನ್ನು ಮಾರ್ಪಾಡು ಮಾಡಿದ್ದು, ಶಿವಮೊಗ್ಗದಿಂದ ಬೆಳಿಗ್ಗೆ 7.20ಕ್ಕೆ ಹೊರಡಲಿದೆ.

ಮೈಸೂರು ವಿಭಾಗದ ಕಡೂರು ಮತ್ತು ಅರಸೀಕೆರೆ ಜಂಕ್ಷನ್ ನಡುವೆ ಮಹತ್ವದ ಸಿವಿಲ್ ಎಂಜಿನಿಯರಿಂಗ್ ಕೆಲಸ ನಡೆಯುತ್ತಿರುವುದರಿಂದ ಮೇ 3ರಿಂದ ಜೂನ್ 6ರವರೆಗೆ 20652 ಸಂಖ್ಯೆಯ ರೈಲು ಶಿವಮೊಗ್ಗದಿಂದ 60 ನಿಮಿಷಕ್ಕೆ ಬದಲಾಗಿ 40 ನಿಮಿಷ ತಡವಾಗಿ ಹೊರಡಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.












Click it and Unblock the Notifications