"ಎಲ್ಐಸಿ ಏಜೆಂಟ್ ಶೋಭಾ ಕೋಟಿಗಳನ್ನು ಸಂಪಾದಿಸಿದ್ದು ಹೇಗೆ?"
ಶಿವಮೊಗ್ಗ, ನವೆಂಬರ್ 28: ಶೋಭಾ ಕರಂದ್ಲಾಜೆ ಎಲ್ಐಸಿ ಏಜೆಂಟ್ ಆಗಿದ್ದರು. ಈಗ ಕೋಟ್ಯಾಂತರ ರೂಪಾಯಿ ಆಸ್ತಿ ಮಾಡಿದ್ದಾರೆ. ಇದೆಲ್ಲಾ ಎಲ್ಲಿಂದ ಬಂತು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ಪ್ರಶ್ನಿಸಿದ್ದಾರೆ.
ಶೋಭಾ ಕರಂದ್ಲಾಜೆ ಕೋಟ್ಯಧಿಪತಿಯಾಗಿದ್ದು ತನಿಖೆಯಾಗಬೇಕು. ಈಗಾಗಲೇ ಅವರಿಂದ ಸರಕಾರಕ್ಕೆ ಕೋಟ್ಯಂತರ ರೂ. ನಷ್ಟವಾಗಿರುವುದು ಕಂಡು ಬಂದಿದೆ. ಇಂತಹ ಮಹಿಳೆ ಕಾಂಗ್ರೆಸ್ ನಾಯಕರನ್ನು ಟೀಕಿಸುತ್ತಿರುವುದನ್ನು ನೋಡಿದರೆ ಅವರ ಬಗ್ಗೆ ವಿಷಾದವಾಗುತ್ತದೆ ಎಂದರು.

ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಶ್ರೀನಿವಾಸ್, "ಬಿಜೆಪಿಯವರು ಭ್ರಷ್ಟ ಮನಸ್ಸನ್ನು ಪರಿವರ್ತನೆ ಮಾಡಿಕೊಳ್ಳಬೇಕೇ ವಿನಃ ಪರಿವರ್ತನಾ ಯಾತ್ರೆ ಮಾಡುವುದಲ್ಲ," ಎಂದು ವ್ಯಂಗ್ಯವಾಡಿದ್ದಾರೆ.
ಬಿಜೆಪಿಯಲ್ಲಿರುವ ಮುಖಂಡರೆಲ್ಲ ಬಾಯಿಗೆ ಬಂದಂತೆ ಅರಚುತ್ತಿದ್ದಾರೆ. ಅವರಿಗೆ ಮಾತನಾಡುವ ಸಂಸ್ಕೃತಿಯೇ ಗೊತ್ತಿಲ್ಲ. ಕೆ.ಎಸ್.ಈಶ್ವರಪ್ಪ, ನಳಿನ್ ಕುಮಾರ್ ಕಟೀಲ್, ಅನಂತ್ ಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ ಮುಂತಾದವರು ತೀರಾ ಕೆಳಮಟ್ಟದ ಭಾಷೆ ಪ್ರಯೋಗಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಮಾತನಾಡಿಸುತ್ತಾರೆ. ಇವರಿಗೆ ಹುದ್ದೆಯ ಬೆಲೆಯೂ ಇಲ್ಲದಂತಾಗಿದೆ ಎಂದು ಟೀಕಿಸಿದರು.
ಮೋದಿ ಸರಕಾರ ಶೂನ್ಯ ಸರಕಾರವಾಗಿದೆ. ಭಾಷಣಕ್ಕೆ ಸೀಮಿತವಾದುದನ್ನು ಬಿಟ್ಟರೆ ಬೇರೇನೂ ಮಾಡುತ್ತಿಲ್ಲ. ಕೇಂದ್ರದ ಆಡಳಿತ ಸಂಪೂರ್ಣ ವಿಫಲವಾಗಿದೆ. ಮೋದಿ ಅಲೆ ಇನ್ನು ನಡೆಯುವುದಿಲ್ಲ. ರಾಹುಲ್ ಗಾಂಧಿಯ ಬರುವಿಕೆಯಿಂದ ಅವರ ಮುಖದಲ್ಲಿ ಬೆವರು ಕಾಣಿಸಿಕೊಂಡಿದೆ ಎಂದು ಶ್ರೀನಿವಾಸ್ ಹೇಳಿದರು.












Click it and Unblock the Notifications