ಚಿತ್ರಗಳು : ಪ್ರವಾಸಿಗರನ್ನು ಆಕರ್ಷಿಸುವ ಶಿಕಾರಿಪುರದ ಪಾರ್ಕ್
ಶಿವಮೊಗ್ಗ, ಜುಲೈ 18 : ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಅತ್ಯಾಧುನಿಕ ಉದ್ಯಾನವನ ನಿರ್ಮಾಣವಾಗಿದೆ. ಕ್ಷೇತ್ರದ ಶಾಸಕ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬುಧವಾರ ಉದ್ಯಾನವನ ಉದ್ಘಾಟಿಸಿದ್ದಾರೆ.
ಶಿಕಾರಿಪುರದ ಅಂಜನಾಪುರ ಜಲಾಶಯ ವೀಕ್ಷಿಸಲು ಬರುವ ಪ್ರವಾಸಿಗರು ಇನ್ನುಮುಂದೆ ಜಲಾಶಯದ ಪಕ್ಕದಲ್ಲಿಯೇ ಸುಮಾರು 6.5 ಎಕರೆ ಪ್ರದೇಶದಲ್ಲಿರುವ ಉದ್ಯಾನವನನ್ನು ಕಣ್ತುಂಬಿಕೊಳ್ಳಬಹುದು. ಸುಮಾರು 6 ಕೋಟಿ ವೆಚ್ಚದಲ್ಲಿ ಉದ್ಯಾನ ನಿರ್ಮಾಣ ಮಾಡಲಾಗಿದೆ.
ಅಂಜನಾಪುರ ಜಲಾಶಯ ಭರ್ತಿ, ಬಾಗಿನ ಅರ್ಪಿಸಿದ ಯಡಿಯೂರಪ್ಪ
ಅಂಜನಾಪುರ ಜಲಾಶಯ ಶಿಕಾರಿಪುರ ತಾಲೂಕಿನ ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುತ್ತದೆ. ಪಟ್ಟಣದಿಂದ 16 ಕಿ.ಮೀ. ದೂರದಲ್ಲಿರುವ ಜಲಾಶಯ ತಾಲೂಕಿಗೆ ಕುಡಿಯುವ ನೀರನ್ನು ಒದಗಿಸುತ್ತದೆ. ಜಲಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮದ ಅನುದಾನದಲ್ಲಿ ಉದ್ಯಾನ ನಿರ್ಮಿಸಲಾಗಿದೆ.
ಈ ಉದ್ಯಾನ ಹಲವು ವಿಶೇಷತೆಗಳನ್ನು ಹೊಂದಿದೆ. ಉದ್ಯಾನದಲ್ಲಿ ಕೇವಲ ಹೂ, ಗಿಡ, ಮರಗಳು ಮಾತ್ರವಲ್ಲದೇ ಪ್ರವಾಸಿಗರನ್ನು ಆಕರ್ಷಿಸುವ ವಿವಿಧ ಕಲಾಕೃತಿಗಳಿವೆ. ಶಿಗ್ಗಾಂವ್ ಸಮೀಪದ ಗೋಟಗೋಡಿಯ ಉತ್ಸವ್ ರಾಕ್ ಗಾರ್ಡನ್ ಮಾದರಿಯ ಕಲಾಕೃತಿಗಳನ್ನು ಇಲ್ಲಿ ಕಾಣಬಹುದಾಗಿದೆ. ಉದ್ಯಾನದ ಚಿತ್ರಗಳು ಇಲ್ಲಿವೆ ನೋಡಿ...
ಉದ್ಯಾನ ಉದ್ಘಾಟಿಸಿದ ಬಿಎಸ್ವೈ
ಶಿಕಾರಿಪುರ ಪಟ್ಟಣದಿಂದ ಸುಮಾರು 16 ಕಿ.ಮೀ. ದೂರದಲ್ಲಿರುವ ಅತ್ಯಾಧುನಿಕ ಉದ್ಯಾನವನ್ನು ಮಾಜಿ ಮುಖ್ಯಮಂತ್ರಿ ಹಾಗೂ ಕ್ಷೇತ್ರದ ಶಾಸಕ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದರು.
ಅಂಜನಾಪುರ ಜಲಾಶಯದ ಪಕ್ಕದಲ್ಲಿಯೇ ಸುಮಾರು 6.5 ಎಕರೆ ಪ್ರದೇಶದಲ್ಲಿ, ಸುಮಾರು 6 ಕೋಟಿ ವೆಚ್ಚದಲ್ಲಿ ಉದ್ಯಾನ ನಿರ್ಮಾಣ ಮಾಡಲಾಗಿದೆ.
ಉದ್ಯಾನದಲ್ಲಿ ಏನಿದೆ?
ಉದ್ಯಾನ ಪ್ರವೇಶಿಸುತ್ತಿದಂತೆ ತಾಲೂಕಿನ ಈಸೂರು ಗ್ರಾಮದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದ ದೃಶ್ಯಗಳನ್ನು ಮೆಲುಕು ಹಾಕುವಂತಹ ಕಲಾಕೃತಿಗಳು ಎದುರಾಗುತ್ತವೆ. ಬ್ರಿಟಿಷರ ವಿರುದ್ಧ ನಡೆಸಿದ ಚಳವಳಿ ಹಾಗೂ ಬ್ರಿಟಿಷರು ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸುವ ದೃಶ್ಯವನ್ನು ಬಿಂಬಿಸುವ ಕಲಾಕೃತಿಗಳು ಜನರನ್ನು ಆಕರ್ಷಿಸಲಿವೆ.
ರೈತರ ಬದುಕು ಬಿಂಬಿಸುವ ಕಲಾಕೃತಿ
ರೈತ ಕುಟುಂಬ ಸಮೇತ ಬೇಸಾಯ ಮಾಡುವ ದೃಶ್ಯ, ಭತ್ತ ನಾಟಿ ಮಾಡುವ ದೃಶ್ಯ, ದೇಶಿಯ ಕಲೆಗಳನ್ನು ಪ್ರತಿಬಿಂಬಿಸುವ ಡೊಳ್ಳುಕುಣಿತ, ಜಗ್ಗಲಿಗೆ ಕುಣಿತ, ಕೋಲು ಕುಣಿತ, ಮಂಗಳವಾದ್ಯ, ಭಜನೆ ಪ್ರದರ್ಶನ ಮಾಡುತ್ತಿರುವ ಜನರನ್ನು ಹೋಲುವ ಕಲಾಕೃತಿಗಳು, ಕುರುಬರ ಬಾಲಕ ಕುರಿ ಕಾಯುವ ದೃಶ್ಯ, ವಯೋವೃದ್ಧ ದನ ಕಾಯುವ ಹಾಗೂ ಎಮ್ಮೆ ಮೇಲೆ ಬಾಲಕ ಕುಳಿತ ಕಲಾಕೃತಿಗಳು ಉದ್ಯಾನದಲ್ಲಿದ್ದು, ಪ್ರವಾಸಿಗರನ್ನು ಆಕರ್ಷಿಸಲಿವೆ.
ಮಕ್ಕಳಿಗೆ ಅಚ್ಚುಮೆಚ್ಚು
ಪ್ರವಾಸಿಗರು ಕುಟುಂಬ ಸಮೇತ ಉದ್ಯಾನದಲ್ಲಿ ಸಮಯ ಕಳೆಯಲು ಪೂರಕ ವಾದಂತಹ ಸಂಗೀತ ಕಾರಂಜಿ, ಮಕ್ಕಳಿಗೆ ಆಟವಾಡಲು ಪೂರಕವಾದ ಆಟದ ಪರಿಕರಗಳಿದ್ದು, ಕೂರಲು ಆಸನ ವ್ಯವಸ್ಥೆ ಇದೆ.
ಶಿಗ್ಗಾಂವ್ ಸಮೀಪದ ಗೋಟಗೋಡಿಯ ಉತ್ಸವ್ ರಾಕ್ ಗಾರ್ಡನ್ ಮಾದರಿಯ ಕಲಾಕೃತಿಗಳನ್ನು ಉದ್ಯಾನದಲ್ಲಿ ನಿರ್ಮಿಸಲಾಗಿದೆ. ಉತ್ಸವ್ ಗಾರ್ಡನ್ನಲ್ಲಿ ಕಲಾಕೃತಿ ನಿರ್ಮಾಣ ಮಾಡಿದ ಕಲಾವಿದ ಹರ್ಷ ಮತ್ತು ತಂಡದವರೇ ಈ ಉದ್ಯಾನದಲ್ಲಿಯೂ ಕಲಾಕೃತಿಗಳನ್ನೂ ನಿರ್ಮಾಣ ಮಾಡಿರುವುದು ವಿಶೇಷ.
6 ಕೋಟಿ ವೆಚ್ಚ
ಅಂಜನಾಪುರ ಜಲಾಶಯ ಶಿಕಾರಿಪುರದ ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ನೀರು ಒದಗಿಸುತ್ತದೆ. ಶಿರಾಳಕೊಪ್ಪ, ಶಿಕಾರಿಪುರ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುತ್ತದೆ.
ಜಲಾಶಯದ ಪಕ್ಕದಲ್ಲಿಯೇ ಸುಮಾರು 6.5 ಎಕರೆ ಪ್ರದೇಶದಲ್ಲಿ ಜಲಸಂಪನ್ಮೂಲ ಇಲಾಖೆ ಕರ್ನಾಟಕ ನೀರಾವರಿ ನಿಗಮದ 6 ಕೋಟಿ ಅನುದಾನದಲ್ಲಿ ಉದ್ಯಾನ ನಿರ್ಮಾಣಗೊಂಡಿದೆ. ಈ ಉದ್ಯಾನ ಪಟ್ಟಣದ ಪ್ರವಾಸಿ ತಾಣವಾಗಲಿದೆ.