ಶಿವಮೊಗ್ಗದಲ್ಲಿ ಎಚ್.ಡಿ.ಕುಮಾರಸ್ವಾಮಿ ಬಿಜೆಪಿಗೆ ಹೇಳಿದ್ದೇನು?
Recommended Video

ಶಿವಮೊಗ್ಗ, ಅಕ್ಟೋಬರ್ 16 : 'ದಿ.ಎಸ್.ಬಂಗಾರಪ್ಪ ಅವರ ಕುಟುಂಬಕ್ಕಾದ ನೋವು ಸರಿಪಡಿಸುವ ಅವಕಾಶ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಈಗ ಸಿಕ್ಕಿದೆ' ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಮಂಗಳವಾರ ಎಚ್.ಡಿ.ಕುಮಾರಸ್ವಾಮಿ ಅವರು ಶಿವಮೊಗ್ಗ ಪ್ರವಾಸದಲ್ಲಿದ್ದಾರೆ. ಶಿವಮೊಗ್ಗ ಲೋಕಸಭೆ ಉಪ ಚುನಾವಣೆಗೆ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರು ಇಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ಜೊತೆಗಿದ್ದರು.
ಎಚ್.ಡಿ.ಕುಮಾರಸ್ವಾಮಿ ಅವರು ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. 'ಸೊರಬ ಶಾಸಕ ಕುಮಾರ್ ಬಂಗಾರಪ್ಪ ಅವರು ಹೇಳಿದಂತೆ ಇದು ಹುಡುಕಾಟದ ಚುನಾವಣೆಯಲ್ಲ. ದೇವರ ಆಟದ ಚುನಾವಣೆ' ಎಂದರು.
ನವೆಂಬರ್ 3ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ನವೆಂಬರ್ 6ರಂದು ಫಲಿತಾಂಶ ಹೊರಬೀಳಲಿದೆ. ಬಿಜೆಪಿಯಿಂದ ಬಿ.ವೈ.ರಾಘವೇಂದ್ರ, ಜೆಡಿಎಸ್ನಿಂದ ಮಧು ಬಂಗಾರಪ್ಪ, ಜೆಡಿಯುನಿಂದ ಮಹಿಮಾ ಪಟೇಲ್ ಕಣದಲ್ಲಿದ್ದಾರೆ.

ಪ್ರಥಮ ಹೆಜ್ಜೆಯಾಗಲಿದೆ
'ಬಂಗಾರಪ್ಪ ಕುಟುಂಬಕ್ಕಾದ ನೋವು ಸರಿಪಡಿಸುವ ಅವಕಾಶ ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಗೆ ಈಗ ಸಿಕ್ಕಿದೆ. ಶಾಶ್ವತವಾಗಿ ಈ ಮೈತ್ರಿ ಮುಂದುವರೆಸಲು ಈ ಚುನಾವಣೆ ಪ್ರಥಮ ಹೆಜ್ಜೆಯಾಗಿದೆ. ಬಿಜೆಪಿಯವರು ಸಣ್ಣತನದಿಂದ ಮಾತನಾಡುತ್ತಿದ್ದಾರೆ ಅಷ್ಟೇ' ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಹಿಂದುತ್ವ ಗುತ್ತಿಗೆ ಪಡೆದಿದ್ದಾರೆಯೇ?
'ಬಿಜೆಪಿಯವರಿಗೆ ಉಳಿದಿರುವುದು ಹಿಂದುತ್ವ ಒಂದೇ. ಅದು ಬಿಟ್ಟರೆ ಅವರ ಬಳಿ ಬೇರೆ ಏನೂ ಇಲ್ಲ. ಬಿಜೆಪಿಯವರು ಹಿಂದುತ್ವವನ್ನು ಏನು ಗುತ್ತಿಗೆ ಪಡೆದಿದ್ದಾರೆಯೇ?. ನಾವು ಕೂಡಾ ಹಿಂದೂಗಳೇ. ಕುಮಾರ್ ಬಂಗಾರಪ್ಪ ಅವರು ಹೇಳಿದಂತೆ ಇದು ಹುಡುಕಾಟದ ಚುನಾವಣೆ ಅಲ್ಲ, ದೇವರ ಆಟದ ಚುನಾವಣೆ' ಎಂದು ಕುಮಾರಸ್ವಾಮಿ ಹೇಳಿದರು.

ಕಾಗೋಡು ತಿಮ್ಮಪ್ಪ ಭೀಷ್ಮ
'ಶಿವಮೊಗ್ಗ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಹುಡುಕಾಟದ ಪ್ರಶ್ನೇಯೇ ಇಲ್ಲ. ಕಾಗೋಡು ತಿಮ್ಮಪ್ಪ ಅವರು ಭೀಷ್ಮನಂತೆ. ಅವರ ಆಶೀರ್ವಾದ ಪಡೆದು ಮಧು ಬಂಗಾರಪ್ಪ ಸ್ಪರ್ಧೆ ಮಾಡಿದ್ದಾರೆ. ಮೂರು ಉಪ ಚುನಾವಣೆಗಳಲ್ಲಿ ಶಿವಮೊಗ್ಗ ಕ್ಷೇತ್ರ ದೇಶದ ಗಮನ ಸೆಳೆಯುತ್ತಿದೆ. ಸುಧೀರ್ಘ ಚರ್ಚೆ ಬಳಿಕ ಅಭ್ಯರ್ಥಿ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ' ಎಂದು ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಪರ್ಯಾಯ ವ್ಯವಸ್ಥೆ ಅಗತ್ಯವಿದೆ
'ಕಾಗೋಡು ತಿಮ್ಮಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಮೊದಲು ತೀರ್ಮಾನಿಸಲಾಗಿತ್ತು. ಇದು ವ್ಯಕ್ತಿಗತ ಚುನಾವಣೆಯಲ್ಲ ಆದ್ದರಿಂದ, ಮೈತ್ರಿ ಮಾಡಿಕೊಳ್ಳಲಾಗಿದೆ' ಎಂದು ಕುಮಾರಸ್ವಾಮಿ ಹೇಳಿದರು.
'ಪಕ್ಷದ ನಾಯಕರು, ಮುಖಂಡರ ತೀರ್ಮಾನದಂತೆ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ. ದೇಶದಲ್ಲಿ ಹಲವಾರು ಬೆಳವಣಿಗೆಗಳು ನಡೆಯುತ್ತಿವೆ. ಪರ್ಯಾಯ ವ್ಯವಸ್ಥೆಯ ಅಗತ್ಯ ದೇಶಕ್ಕೆ ಇದೆ. ಆದ್ದರಿಂದ, ರಾಜ್ಯದಲ್ಲಿ ಮೈತ್ರಿ ಮಾಡಿಕೊಳ್ಳಲಾಗಿದೆ' ಎಂದರು.












Click it and Unblock the Notifications