ಕುಮಾರಸ್ವಾಮಿ ಬಳಿ ದಯಾಮರಣಕ್ಕೆ ಮೊರೆಯಿಟ್ಟ ಹಂದಿಗೋಡು ಗ್ರಾಮಸ್ಥರು
ಶಿವಮೊಗ್ಗ, ಡಿಸೆಂಬರ್ 1: ಹಂದಿಗೋಡು ಎನ್ನುವುದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಒಂದು ಊರು, ಇಲ್ಲಿನ ಜನರು ವಿಚಿತ್ರವಾದ ಸಂದಿ ನೋವು ಕಾಯಿಲೆಯಿಂದ ಬಳಲುತ್ತಿದ್ದು ತಮಗೆ ದಯಾಮರಣ ನೀಡುವಂತೆ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಅವರ ಬಳಿ ಮನವಿ ಮಾಡಿದ್ದಾರೆ.
ಹುಟ್ಟುವಾಗ ಆರೋಗ್ಯವಂತರಾಗಿದ್ದರೂ ಬೆಳೆಯುತ್ತಿರುವಂತೆ ಸೊಂಟ, ಮೊಣಕಾಲು, ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಹಂದಿಗೋಡು ಕಾಯಿಲೆಯ ಲಕ್ಷಣ.

ಅಲ್ಲಿಗೆ ಅವರ ದೈಹಿಕ ಬೆಳವಣಿಗೆಯೇ ನಿಂತು ಕುಬ್ಜತನ ಕಾಡುತ್ತದೆ. ಕ್ರಮೇಣ ಸರಿಯಾಗಿ ಕೂರಲು, ನಿಲ್ಲಲು ಸಾಧ್ಯವಾಗದೆ ತೆವಳುವ ಸ್ಥಿತಿಗೆ ತಲುಪಿ ಮರಣ ಹೊಂದುತ್ತಿದ್ದಾರೆ.
ಹಂದಿಗೋಡು ಕಾಯಿಲೆ ಬಹುಪಾಲು ತಳ ಸಮುದಾಯದ ಚೆನ್ನಯ್ಯ ಸಮಾಜದವರಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದೆ. ಈಚಿನ ವರ್ಷಗಳಲ್ಲಿ ಮಕ್ಕಳಿಗೂ ಈ ಕಾಯಿಲೆ ಬಂದಿದ್ದು ಇದರಿಂದಾಗಿ ಶಾಲೆ ಬಿಡುವಂತಾಗಿದೆ.ತಾಲ್ಲೂಕಿನ ಹಂದಿಗೋಡು ಗ್ರಾಮ ರೋಗದ ಹೆಸರಿನಿಂದಲೇ ಗುರುತಿಸಿಕೊಂಡಿರುವುದು ದುರಂತ. 1975ರಲ್ಲಿ ಮೊದಲ ಬಾರಿಗೆ ಈ ಗ್ರಾಮದಲ್ಲೇ ವಿಚಿತ್ರವಾದ ಹಾಗೂ ವೈದ್ಯಕೀಯ ವಿಜ್ಞಾನಕ್ಕೆ ಇಂದಿಗೂ ಸವಾಲಾಗಿದೆ.
ಸಾಗರ ತಾಲ್ಲೂಕಿನಲ್ಲಿ 600ಕ್ಕೂ ಹೆಚ್ಚು ಹಂದಿಗೋಡು ಕಾಯಿಲೆ ಸಂತ್ರಸ್ತರಿದ್ದರು. ಈ ಪೈಕಿ ಸುಮಾರು 300 ಜನರು ಮೃತಪಟ್ಟಿದ್ದಾರೆ. ಉಳಿದವರು ನೋವು ನಿವಾರಕ ಗುಳಿಗೆ ನುಂಗಿ ಅಂಗಾಂಗ ಹಾಳು ಮಾಡಿಕೊಂಡಿದ್ದಾರೆ.
1970ರ ದಶಕದಲ್ಲೇ ಬೆಂಗಳೂರಿನ ನಿಮ್ಹಾನ್ಸ್ನ ತಜ್ಞರು ಸಂಶೋಧನೆ ನಡೆಸಿ ಹಂದಿಗೋಡು ಕಾಯಿಲೆ ನರಸಂಬಂಧಿ ರೋಗ ಅಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
1984ರಲ್ಲಿ ದೆಹಲಿಯ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ, 2001ರಲ್ಲಿ ಲಖನೌದ ಸಂಜಯ್ ಗಾಂಧಿ ಸ್ನಾತಕೋತ್ತರ ಕೇಂದ್ರ ಹಲವು ಸಂಶೋಧನೆ ನಡೆಸಿದ್ದರೂ ಕಾಯಿಲೆಗೆ ನಿಖರ ಕಾರಣ ಕಂಡುಹಿಡಿಯಲಾಗಿಲ್ಲ.ಇದರಿಂದ ಬೇಸರಗೊಂಡಿರು ಸಂತ್ರಸ್ತರು ಈಗ ಕೊನೆಯ ಅಸ್ತ್ರವಾಗಿ ದಯಾಮರಣ ಪಾಲಿಸಿ ಎಂಬ ಬೇಡಿಕೆ ಇಟ್ಟಿದ್ದಾರೆ.












Click it and Unblock the Notifications