ಮಳೆಗಾಲಕ್ಕೂ ಮಜಬೂತು ಜಾಗ ಶಿವಮೊಗ್ಗದ ಶೆಟ್ಟರ ಗೋಲಿ ಬಜ್ಜಿ ಕಾರ್ನರ್
ಶಿವಮೊಗ್ಗದ ಮೀನಾಕ್ಷಿ ಭವನ್ ಹೋಟೆಲ್ ಬಗ್ಗೆ ಕಳೆದ ಬಾರಿ ತಿಳಿಸಿದ್ದೆ. ಆಗಲೂ ಮಳೆ, ಈಗಲೂ ಮಳೆ. ಮಲೆನಾಡು ಮಳೆಗೆ, ಆತಿಥ್ಯಕ್ಕೆ ಹಾಗೂ ಸೊಗಸಾದ ಅಡುಗೆಗೆ ಹೆಸರುವಾಸಿ. ಸಂಜೆಯ ಜಿಟಿ -ಜಿಟಿ ಮಳೆಗೆ ನಾಲಿಗೆ ರುಚಿ ತಣಿಸಲು ಜೇಬಿಗೆ ಅಷ್ಟೇನೂ ಭಾರವಲ್ಲದ ಮತ್ತು ರುಚಿಗೆ ಮೋಸವಿಲ್ಲದ ಗೋಲಿಬಜ್ಜಿ ಸೆಂಟರ್ ವೊಂದರ ಪರಿಚಯವನ್ನು ಇಂದು ಮಾಡಿಕೊಡಲಾಗುತ್ತಿದೆ.
ಶಿವಮೊಗ್ಗೆಯ ಹೃದಯಭಾಗದಲ್ಲಿರುವ ಓಲ್ಡ್ ಪೋಸ್ಟ್ ಆಫೀಸ್ ರಸ್ತೆಯಲ್ಲಿ ಹಾದು ಬಂದರೇ ಸಾಕು, ಮೂಗಿಗೆ ಘಮ್ಮೆಂದು ಬಡಿಯುವ ಗೋಲಿಬಜ್ಜಿ, ಹಾಗೇ ಒಮ್ಮೆ ರುಚಿ ನೋಡಿಕೊಂಡು ಹೋಗಿ ಎಂದು ಕೈ ಬೀಸಿ ಕರೆದಂತೆ ಎನಿಸುತ್ತದೆ. ಕಳೆದ 25 ವರುಷಗಳಿಂದ ಮಂಜುನಾಥ್ ಶೆಟ್ಟಿ ಅವರು ನಡೆಸಿಕೊಂಡು ಬರುತ್ತಿರುವ ಗೋಲಿಬಜ್ಜಿ ಕಾರ್ನರ್ ಇಂದಿಗೂ ಬಹಳ ಹೆಸರುವಾಸಿ.
ಮಂಜುನಾಥ್ ಅವರ ಇಡೀ ಕುಟುಂಬವೇ ಗ್ರಾಹಕರಿಗೆ ಸೇವೆ ನೀಡಲು ಸಜ್ಜಾಗಿರುತ್ತದೆ. ತಮ್ಮ ಕಷ್ಟದ ಸಂದರ್ಭದಲ್ಲಿ ಏನು ಕಾಯಕ ಮಾಡಬೇಕೆಂಬ ಅರಿವಿಲ್ಲದೇ ಆರಂಭಿಸಿದ ಈ ಗೋಲಿಬಜ್ಜಿ ಕಾರ್ನರ್ ಮಂಜುನಾಥ್ ದಿಕ್ಕನ್ನೇ ಬದಲಿಸಿತು. ಅವರ ಪತ್ನಿ ಸುಧಾರಾಣಿ ಕೈ ಜೋಡಿಸಿದರು. ಅಂದಿನಿಂದ ಇಂದಿನವರೆಗೂ ಶಿವಮೊಗ್ಗೆ ಮಂದಿಯ ಹಾಟ್ ಫೇವರೆಟ್ ಸ್ಪಾಟ್ ಗಳಲ್ಲಿ ಇದು ಕೂಡ ಒಂದು.

ದುಡ್ಡು ಎಷ್ಟಿದ್ದರೂ ಈಗಲೂ ಜನಸ್ನೇಹಿಯಾಗಿರುವ ಮಂಜುನಾಥ್ ಎಲ್ಲರನ್ನೂ ಗುರುತಿಸಿ ಮಾತನಾಡುವ ಪರಿಯಿಂದ ಮತ್ತೊಮ್ಮೆ ಈ ಜಾಗಕ್ಕೆ ಭೇಟಿ ಕೊಡಬೇಕೆಂಬ ಆಸೆ ಹುಟ್ಟುವಂತೆ ಮಾಡುತ್ತಾರೆ. ಇಲ್ಲಿ ಗೋಲಿ ಬಜ್ಜಿ ಸವಿಯಲು ರಸ್ತೆಯಲ್ಲೇ ತಂಡೋಪತಂಡವಾಗಿ ಜನರು ಕಾಯುತ್ತಾರೆ.
ಅರೇ, ಎಲ್ಲರೂ ಗೋಲಿಬಜ್ಜಿ ಮಾಡುತ್ತಾರೆ. ಇವರದ್ದೇನು ವಿಶೇಷ ಎಂದು ನೀವು ಕೇಳಬಹುದು. ಮಂಜುನಾಥ್ ಶೆಟ್ಟಿ ಅವರು ತಯಾರಿಸುವ ಗೋಲಿ ಬಜ್ಜಿಯೇ ಒಂದು ವಿಶೇಷ. ಅದಕ್ಕೆ ಹಾಕಿಕೊಡುವ ಚಟ್ನಿ ಮತ್ತೂ ವಿಶೇಷ. ಟೊಮೆಟೋ, ಬೆಲ್ಲ, ಹುಣಸೇರಸ ಸೇರಿ ಮತ್ತಷ್ಟು ಪದಾರ್ಥಗಳನ್ನು ಮಿಶ್ರ ಮಾಡಿ ನೀಡುವ ಚಟ್ನಿಯನ್ನು ಬಹಶಃ ಇಲ್ಲಿ ಮಾತ್ರ ರುಚಿ ನೋಡಲು ಸಾಧ್ಯ.
ಕಳೆದ 15 ವರುಷಗಳಿಂದಲೂ ಕಟ್ಟಿಗೆ ಒಲೆಯಲ್ಲಿಯೇ ಮಂಜುನಾಥ್- ಸುಧಾ ಗೋಲಿ ಬಜ್ಜಿಯನ್ನು ಮಾಡುತ್ತಿದ್ದರು. ಇತ್ತೀಚಿನ ವರುಷಗಳಲ್ಲಿ ಮಾತ್ರ ಬದಲಿಸಿದ್ದೇವೆ ಎನ್ನುತ್ತಾರೆ ಮಂಜುನಾಥ್ ಅವರ ಮಗ ಸುನೀಲ್.

ದಿನಕ್ಕೆ 1000 ಗೋಲಿಬಜ್ಜಿ ಮಾರಾಟ
ಮಂಜುನಾಥ್ ಅವರ ತಳ್ಳುವ ಗಾಡಿಯಲ್ಲೇ ಸುಮಾರು 800 ರಿಂದ 1000 ಗೋಲಿ ಬಜ್ಜಿಗಳು ಮಾರಾಟವಾಗುತ್ತದೆ. ಗೋಲಿಬಜ್ಜಿಯೊಂದಿಗೆ ಇತರೆ ಬಜ್ಜಿಗಳು ಹೋಗುವುದು ಲೆಕ್ಕಕ್ಕೇ ಇಲ್ಲ. ಬೋಂಡಾಗಳೊಂದಿಗೆ ಮಸಾಲೆ ಮಂಡಕ್ಕಿ, ನಿಪ್ಪಟ್ಟು ಮಸಾಲೆ, ಬೋಟಿ, ಮೊಳಕೆ ಕಾಳು, ಚಕ್ಕುಲಿ, ಕಾರ್ನ್ ಫ್ಲೇಕ್ಸ್ ಮಸಾಲೆ ಎಂಬಿತ್ಯಾದಿ ಬಗೆಗಳನ್ನು ಇಲ್ಲಿ ಮಾಡಲಾಗುತ್ತದೆ. ಇವುಗಳು ಸೇರಿ ದಿನಕ್ಕೆ 500 ಪ್ಲೇಟ್ ಮಾರಾಟ ಆಗುತ್ತದೆ ಎನ್ನುತ್ತಾರೆ ಸುನೀಲ್.
ಈ ಗೋಲಿಬಜ್ಜಿ ಕಾರ್ನರ್ ಲ್ಲಿ ಪ್ಲೇಟ್ ಒಂದಕ್ಕೆ ಕೇವಲ 10 ರುಪಾಯಿ ಅಷ್ಟೇ. ಒಂದು ಪ್ಲೇಟ್ ನಲ್ಲಿ 5 ಬಿಸಿ -ಬಿಸಿ ಕುರುಂ ಕರಂ ಗೋಲಿ ಬಜ್ಜಿ, ಹುಳಿ -ಸಿಹಿ ಚಟ್ನಿ, ಮೇಲೆ ಉದುರಿಸಿದ ಈರುಳ್ಳಿ ಕೊಡುತ್ತಾರ. ಅದರೊಟ್ಟಿಗೆ ಕೇವಲ 10 ರುಪಾಯಿಗೆ ತಟ್ಟೆಯ ತುಂಬಾ ಮಂಡಕ್ಕಿ ನೀಡುತ್ತಾರೆ.
ನಮಗೆ ಹಣಕ್ಕಿಂತ ಗ್ರಾಹಕರ ಸಂತೃಪ್ತಿ ಆದ್ಯತೆ. ಅವರು ತಿಂದು ಚೆನ್ನಾಗಿದೆ ಎಂದು ಒಂದು ವಾಕ್ಯ ಹೇಳಿದರೆ ಸಾಕು, ಅದೇ ಅವರು ನಮ್ಮ ರುಚಿಗೆ ನೀಡುವ ಬೆಲೆ ಎಂದು ನಗುತ್ತಲೇ ನುಡಿಯುತ್ತಾರೆ ಮಂಜುನಾಥ್.
ವಿಪ್ರೋ ಕೆಲಸ ಬೇಡವೆಂದು ಅಪ್ಪನೊಂದಿಗೆ ಕೈಜೋಡಿಸಿದ ಮಗ
ಮಂಜುನಾಥ್ ಪುತ್ರ ಸುನೀಲ್ ಬಿ.ಕಾಂ ಪಧವೀದರ. ಆದರೆ ತಾವು ವಿದ್ಯಾವಂತರಾಗಲು ಕಾರಣವಾದ ಈ ಕೆಲಸವನ್ನು ಬಿಡುವುದು ಅವರಿಗೆ ಇಷ್ಟವಿಲ್ಲ. "ವಿಪ್ರೋ ಸೇರಿದಂತೆ ಅನೇಕ ಕಂಪೆನಿಗಳಲ್ಲಿ ಕೆಲಸ ಸಿಕ್ಕಿತು. ಆದರೆ ನನಗೆ ಈ ಕೆಲಸದಲ್ಲಿ ಸಿಕ್ಕ ತೃಪ್ತಿ ಬೇರೆಲ್ಲೂ ಲಭಿಸಿಲ್ಲ. ನನಗೆ ಅಪ್ಪನೊಟ್ಟಿಗೆ ಇದ್ದು ಸಹಾಯ ಮಾಡಬೇಕೆಂಬ ಹಂಬಲಿವಿದೆ" ಎನ್ನುತ್ತಾರೆ ಸುನೀಲ್.
ನಾವೇನು ಹೇಳಿದರೆ ಏನು? ನೀವು ರುಚಿ ನೋಡಿ, ಹೇಗನಿಸಿತು ಎಂದು ಹೇಳದ ಹೊರತು ಎಲ್ಲವೂ ವ್ಯರ್ಥವೇ. ಹಾಗಾದರೆ ಶೆಟ್ಟರ ಗೋಲಿ ಬಜ್ಜಿ ಕಾರ್ನರ್ ಗೆ ಹೋಗಿ, ಒಂದೆರಡು ಪ್ಲೇಟ್ ಬಾರಿಸಿ ಬನ್ನಿ. ನಿಮ್ಮ ಅಭಿಪ್ರಾಯವನ್ನು ತಿಳಿಸುವುದನ್ನು ಮರೆಯಬೇಡಿ.












Click it and Unblock the Notifications