ಶಿವಮೊಗ್ಗದಲ್ಲಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವಿವಾದಾತ್ಮಕ ಹೇಳಿಕೆ
ಶಿವಮೊಗ್ಗ, ಮಾರ್ಚ್ 14: ಚಕ್ರವರ್ತಿ ಸೂಲಿಬೆಲೆ, ಸಂಸದ ತೇಜಸ್ವಿ ಸೂರ್ಯ ಹಾಗೂ ಬಿಜೆಪಿ ಕುರಿತು ಮಾತನಾಡಿರುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಹೊಸ ವಿವಾದಕ್ಕೆ ಸಿಲುಕಿದ್ದಾರೆ.
"ಚಕ್ರವರ್ತಿ ಸೂಲಿಬೆಲೆ ಹಾಗೂ ತೇಜಸ್ವಿ ಇಬ್ಬರೂ ಕೇಂದ್ರ ಸರ್ಕಾರದ ಬಗ್ಗೆ ಹೊಗಳಿ ಮಾತನಾಡುತ್ತಾರೆ. ನರೇಂದ್ರಮೋದಿ ಪ್ರಧಾನಿಯಾದ ಬಳಿಕ ಸೈನಿಕರು ಸತ್ತಿಲ್ಲವೇ? ಪುಲ್ವಾಮಾ ದಾಳಿಯಲ್ಲೇ 40ಕ್ಕೂ ಹೆಚ್ಚು ಸೈನಿಕರು ಮೃತಪಟ್ಟಿದ್ದಾರೆ. ಇವರಿಬ್ಬರೂ ಹೊಗಳು ಭಟ್ಟರು. ಈರುಳ್ಳಿ ಬೆಲೆ 200 ರೂಪಾಯಿ ತಲುಪಿದಾಗ ಈ ಇಬ್ಬರು ಎಲ್ಲಿಗೆ ಹೋಗಿದ್ದರು? ಏಕೆ ಮಾತನಾಡಲಿಲ್ಲ" ಎಂದು ಕಿಡಿಕಾರಿದರು.
"ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಗಗನಕ್ಕೇರಿದರೂ ಇವರು ತುಟಿ ಬಿಚ್ಚುತ್ತಿಲ್ಲ. ಇದೇನಾ ಅಚ್ಛೇ ದಿನ್? ಎಸ್.ಎಲ್. ಭೈರಪ್ಪ ಬಿಜೆಪಿ ಏಜೆಂಟ್. ಹಾಗಾಗಿಯೇ ಅವರ ಹೆಸರಿನಲ್ಲಿ ಬಜೆಟ್ ನಲ್ಲಿ ಐದುಕೋಟಿ ಮೀಸಲಿಟ್ಟಿದ್ದಾರೆ. ಯಾವುದೇ ವ್ಯಕ್ತಿ ಸತ್ತ ಮೇಲೆ ಅವರ ಅಂತ್ಯಸಂಸ್ಕಾರಕ್ಕೆ ಹಣ ನೀಡುವುದನ್ನು ನೋಡಿದ್ದೇನೆ. ಆದರೆ ಭೈರಪ್ಪ ಅವರ ಗ್ರಾಮಕ್ಕೆ ಯಾವ ಉದ್ದೇಶಕ್ಕೆ ಹಣ ನೀಡಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಉತ್ತರ ಕರ್ನಾಟಕದಲ್ಲಿ ಶಾಲೆಗಳೇ ಇಲ್ಲ. ಭೈರಪ್ಪ ಅವರ ಊರಿಗೆ ನೀಡಿದ ಅನುದಾನವನ್ನು ಉತ್ತರ ಕರ್ನಾಟಕದ ಶಾಲೆಗಳಿಗೆ ನೀಡಬಹುದಿತ್ತು" ಎಂದಿದ್ದಾರೆ.

ಬಿಜೆಪಿ ನಾಯಕಾರ ಕುರಿತೂ ಮಾತನಾಡಿದ ಅವರು, "ನಲಪಾಡ್ ಕಾರು ಅಪಘಾತ ಆದಾಗ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡಿದ್ದರು. ಆದರೆ ಅಶೋಕ್ ಕಾರು ಅಪಘಾತವಾದಾಗ ಯಾರೂ ಚಕಾರವೆತ್ತಲಿಲ್ಲ. ನಲಪಾಡ್ ಪ್ರಕರಣದಲ್ಲಿ ಮಾತನಾಡಿದ್ದ ಆರ್.ಅಶೋಕ್ ತನ್ನ ಮಗನ ಕಾರು ಅಪಘಾತವಾಗುತ್ತಿದ್ದಂತೆ ಮೌನಕ್ಕೆ ಶರಣಾಗಿದ್ದಾರೆ" ಎಂದು ಆರೋಪಿಸಿದರು.
"ಶರತ್ ಬಚ್ಚೇಗೌಡ ಪಕ್ಷದಿಂದ ದೂರ ಹೋದರೆ ಪಕ್ಷಕ್ಕೆ, ತಾಯಿಗೆ ದ್ರೋಹ ಮಾಡಿದಂತೆ ಎಂದು ಸಿ.ಟಿ.ರವಿ ಹಾಗೂ ಆರ್.ಅಶೋಕ್ ಹೇಳುತ್ತಾರೆ. ಅದೇ ಕಾಂಗ್ರೆಸ್ ನ 17 ಜನ ಶಾಸಕರನ್ನು ಬಿಜೆಪಿಗೆ ಸೆಳೆದರು. ಅದಕ್ಕೇನು ಹೇಳುತ್ತಾರೆ" ಎಂದು ಪ್ರಶ್ನಿಸಿದರು.












Click it and Unblock the Notifications