ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಸಲ್ಲಿಸಿದ ಕಾಗೋಡು ತಿಮ್ಮಪ್ಪ
ಶಿವಮೊಗ್ಗ,ನವೆಂಬರ್ 17 : ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಅವರ ಪುತ್ರಿ ಡಾ. ರಾಜನಂದಿನಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಾಗರ ಕ್ಷೇತ್ರದಿಂದ ಸ್ಪರ್ಧಿಸಲು ಪಕ್ಷದ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದು ಇತರೆ ಆಕಾಂಕ್ಷಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಮುಂದೇನು ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಪುತ್ರಿ ಕಾಂಗ್ರೆಸ್ ಪಕ್ಷದ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದು, ಇಬ್ಬರಲ್ಲಿ ಒಬ್ಬರಿಗಾದರು ಟಿಕೆಟ್ ಸಿಗಬಹುದು ಎಂಬ ವಿಶ್ವಾಸ ಹೊಂದಿದ್ದಾರೆ. ಈ ಕುರಿತು ಶಿವಮೊಗ್ಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕಾಗೋಡು ತಿಮ್ಮಪ್ಪ, ಚುನಾವಣೆಗೆ ಸ್ಪರ್ಧಿಸುವ ಕುರಿತು ಯೋಚನೆ ಮಾಡಿಲ್ಲ. ಸ್ವಾಭಾವಿಕವಾಗಿ ಅರ್ಜಿ ಸಲ್ಲಿಸಿದ್ದೇನೆ. ಪುತ್ರಿ ಕೂಡ ರಾಜಕೀಯ ಆಸಕ್ತಿ ಹೊಂದಿದ್ದಾರೆ. ಆದ್ದರಿಂದ ಅವರೂ ಅರ್ಜಿ ಸಲ್ಲಿಸಿದ್ದಾರೆ . ಟಿಕೆಟ್ಗಾಗಿ ತಮ್ಮ ಕುಟುಂಬದಲ್ಲಿ ಯಾವುದೇ ಸ್ಪರ್ಧೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಇನ್ನು, ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿ ಕಾಗೋಡು ಮಾತನಾಡಿ, ಮುಂಚಿನಿಂದಲು ಸಿದ್ಧತೆ ಮಾಡಿಕೊಂಡಿದ್ದೇವೆ. ಪಕ್ಷದಲ್ಲಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಜವಾಬ್ದಾರಿ ನಿಭಾಯಿಸಿದ್ದೇನೆ. ಕಾಗೋಡು ತಿಮ್ಮಪ್ಪ ಅವರು ಈ ಭಾರಿ ಟಿಕೆಟ್ಗಾಗಿ ಅರ್ಜಿ ಸಲ್ಲಿಸುವುದಿಲ್ಲ ಎಂದು ಹೇಳಿದ್ದರು. ಆದರೆ ಮುತ್ಸದ್ಧಿಯೊಬ್ಬರು ಅರ್ಜಿ ಹಾಕದಿದ್ದರೆ ತಪ್ಪಾಗಲಿದೆ ಎಂದು ಭಾವಿಸಿ ಅರ್ಜಿ ಸಲ್ಲಿಸಿದ್ದಾರೆ. ಅವರ ಹಲವು ಕೆಲಸಗಳು ಬಾಕಿ ಉಳಿದಿವೆ, ಅವರ ಅವಶ್ಯಕತೆ ನಾಡಿಗಿದೆ ಎಂದು ತಿಳಿಸಿದರು.

2018ರಲ್ಲೇ ರಾಜಕೀಯ ನಿವೃತ್ತಿ ಘೋಷಿಸಿದ್ದ ತಿಮ್ಮಪ್ಪ
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಸಾಗರ ಕ್ಷೇತ್ರದಿಂದ ಐದು ಭಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1972ರಲ್ಲಿ ಸಂಯುಕ್ತ ಸೋಷಿಯಲಿಸ್ಟ್ ಪಕ್ಷದಿಂದ ಮೊದಲ ಭಾರಿ ವಿಧಾನಸಭೆಗೆ ಪ್ರವೇಶ ಪಡೆದಿದ್ದರು. ಆನಂತರ 1989, 1994, 1999 ಮತ್ತು 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಶಾಸಕರಾಗಿ, ಸಚಿವರಾಗಿ, ವಿಧಾನಸಭೆಯ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದ್ದರು. ವಯಸ್ಸು, ಆರೋಗ್ಯದ ಕಾರಣಕ್ಕೆ ಈ ಭಾರಿ ಅವರು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಲಾಗುತ್ತಿತ್ತು. ಅಲ್ಲದೆ 2018ರಲ್ಲಿ ಕಾಗೋಡು ತಿಮ್ಮಪ್ಪ ಚುನಾವಣೆಗೆ ಇನ್ನುಮುಂದೆ ಸ್ಪರ್ಧೆ ಮಾಡುವುದಿಲ್ಲ ಎಂದು ತಿಳಿಸಿದ್ದರು. ಈ ಕಾರಣಕ್ಕೆ ಅವರ ಪುತ್ರಿ ಡಾ. ರಾಜನಂದಿನಿ ಸೇರಿದಂತೆ ಎರಡನೇ ಹಂತದ ನಾಯಕರು ಪ್ರಚಾರ ಆರಂಭಿಸಿದ್ದರು.

ಪಕ್ಷ ಸಂಘಟನೆ ಆರಂಭಿಸಿದ್ದ ಇತರೆ ಆಕಾಂಕ್ಷಿಗಳು
ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಕಳೆದ ಒಂದು ವರ್ಷದಿಂದ ಸಂಘಟನೆ ಆರಂಭಿಸಿದ್ದರು. ತಮ್ಮ ವೈಯಕ್ತಿ ವರ್ಚಸ್ಸು ವೃದ್ಧಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಹಳ್ಳಿ, ಹಳ್ಳಿ ಸುತ್ತಿದ್ದರು. ಕಾರ್ಯಕ್ರಮಗಳನ್ನು ರೂಪಿಸಿ, ಹೋರಾಟಗಳನ್ನು ಮಾಡಿ, ಕಾರ್ಯಕರ್ತರನ್ನು ಸಂಘಟಿಸಿದ್ದರು. ಕಾಗೋಡು ತಿಮ್ಮಪ್ಪ ಚುನಾವಣಾ ಕಣಕ್ಕಿಳಿಯುವುದಿಲ್ಲ ಎಂಬ ವಿಶ್ವಾಸದೊಂದಿಗೆ, 'ತಾವೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ' ಎಂದು ಬಿಂಬಿಸಿಕೊಂಡಿದ್ದರು. ಇದೇ ಉತ್ಸಾಹದಲ್ಲಿ ಟಿಕೆಟ್ ಪಡೆಯಲು ಅರ್ಜಿಯನ್ನೂ ಸಲ್ಲಿಸಿದ್ದರು.

ತಿಮ್ಮಪ್ಪ ಆಪ್ತರ ಬೇಸರ
ಸಾಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದವರಿಗೆ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಕೊನೆ ಕ್ಷಣದಲ್ಲಿ ಶಾಕ್ ನೀಡಿದ್ದಾರೆ. ಅವರು ಮತ್ತು ಅವರ ಪುತ್ರಿ ಅರ್ಜಿ ಸಲ್ಲಿಸಿರುವುದು ಇತರೆ ಆಕಾಂಕ್ಷಿಗಳಿಗೆ ನುಂಗಲಾರದ ತುತ್ತಾಗಿದೆ. 'ಕಾಗೋಡು ತಿಮ್ಮಪ್ಪ ಅವರು ಅರ್ಜಿ ಸಲ್ಲಿಸುವುದಾಗಿ ಈ ಮೊದಲೇ ತಿಳಿಸಿದ್ದರೆ, ತಾವು ಅರ್ಜಿ ಹಾಕುತ್ತಿರಲಿಲ್ಲ' ಎಂದು ಆಪ್ತರಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕುತೂಹಲ ಕೆರಳಿಸಿದ
ಒಂದು ವೇಳೆ ಪಕ್ಷದ ಹೈಕಮಾಂಡ್ ಹಿರಿತನ, ಅನುಭವಕ್ಕೆ ಆದ್ಯತೆ ನೀಡಿದರೆ, ಕಾಗೋಡು ತಿಮ್ಮಪ್ಪ ಮತ್ತೊಮ್ಮೆ ಸ್ಪರ್ಧೆ ಮಾಡಲಿದ್ದಾರೆ. ಬೇರೆಯದ್ದೆ ಮಾನದಂಡ ಅನುಸರಿಸಿದರೆ ಉಳಿದ ಆಕಾಂಕ್ಷಿಗಳ ಪೈಕಿ ಒಬ್ಬರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಸದ್ಯ ಕಾಗೋಡು ತಿಮ್ಮಪ್ಪ ಅವರ ನಡೆ ಆಕಾಂಕ್ಷಿಗಳಲ್ಲಿ ಗೊಂದಲ ನಿರ್ಮಿಸಿದ್ದರೆ, ಯಾರಿಗೆ ಟಿಕೆಟ್ ಲಭ್ಯವಾಗಲಿದೆ ಎಂದು ಜನರು ಕುತೂಹಲದಿಂದ ನೋಡುವಂತಾಗಿದೆ.












Click it and Unblock the Notifications