ಪಕ್ಷ ನಿಷ್ಠೆ, ಪ್ರಾಮಾಣಿಕತೆಗೆ ಬೆಲೆ ಇಲ್ಲ: ಶಾಸಕ ಆರಗ ಜ್ಞಾನೇಂದ್ರ ಅಭಿಮಾನಿಗಳ ಆಕ್ರೋಶ
ಶಿವಮೊಗ್ಗ, ಆಗಸ್ಟ್ 21: ರಾಜ್ಯ ಬಿಜೆಪಿ ಸರ್ಕಾರದ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಉದ್ಭವಿಸಿರುವ ಅಸಮಾಧಾನದ ಹೊಗೆ ದಟ್ಟವಾಗುತ್ತಿದೆ. ಮೂರು ನಾಲ್ಕು ಬಾರಿ ಶಾಸಕರಾಗಿದ್ದರೂ, ಪಕ್ಷಕ್ಕೆ ಬದ್ಧತೆ ಪ್ರದರ್ಶಿಸಿದ್ದರೂ ಸಚಿವ ಸ್ಥಾನ ಸಿಗದೆ ಇರುವುದು ಅನೇಕ ಶಾಸಕರಲ್ಲಿ ಬೇಸರ ಮೂಡಿಸಿದೆ.
ಕೆಲವು ಶಾಸಕರು ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದಾರೆ. ಇನ್ನು ಕೆಲವು ಶಾಸಕರು ಸರ್ಕಾರಕ್ಕೆ ಬೆಂಬಲ ನೀಡುವುದೇ ತಮ್ಮ ಮುಖ್ಯ ಗುರಿ ಎಂದು ಹೇಳಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಸರ್ಕಾರದ ವಿರುದ್ಧ ಸಿಟ್ಟು ಹೊರಹಾಕತೊಡಗಿದ್ದಾರೆ.
Recommended Video
ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ತೀರ್ಥಹಳ್ಳಿಯ ಶಾಸಕ ಆರಗ ಜ್ಞಾನೇಂದ್ರ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗದೆ ಇರುವುದು ಅಚ್ಚರಿ ಮೂಡಿಸಿದೆ. ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಳ್ಯ ಶಾಸಕ ಅಂಗಾರ, ಜ್ಞಾನೇಂದ್ರ ಸೇರಿದಂತೆ ಪ್ರಮುಖರನ್ನು ಸಂಪುಟದಿಂದ ದೂರವೇ ಇಟ್ಟಿರುವುದಕ್ಕೆ ಈ ಭಾಗಗಳ ಜನರಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ನಿಷ್ಠೆಗೆ ಗೌರವ ನೀಡದ ಪಕ್ಷ
ಬಿಜೆಪಿಯಲ್ಲಿನ ಹಾಲಿ 105 ಶಾಸಕರ ಪೈಕಿ 1983ರಿಂದ ಸತತವಾಗಿ ಒಂಬತ್ತು ಬಾರಿ ಬಿಜೆಪಿಯಿಂದಲೇ ಸ್ಪರ್ಧಿಸಿರುವ ಏಕೈಕ ಶಾಸಕ ಜ್ಞಾನೇಂದ್ರ ಮಾತ್ರ ಎನ್ನುವುದು ಗಮನಿಸಬೇಕಾದ ವಿಚಾರ. ಅವರು ಮೂರೂವರೆ ದಶಕಗಳಿಂದ ಪಕ್ಷದ ನಿಷ್ಠೆಯಲ್ಲಿ ಯಾವುದೇ ವ್ಯತ್ಯಾಸ ತೋರದೆ ಬದ್ಧತೆ ಮೆರೆದಿದ್ದಾರೆ. ತಮಗೆ ವಹಿಸಿದ ಪಕ್ಷದ ಕೆಲಸಗಳನ್ನು ಅಷ್ಟೇ ಪ್ರಾಮಾಣಿಕತೆಯಿಂದ ಮಾಡಿದ್ದಾರೆ. ಆದರೂ ಅವರನ್ನು ಪಕ್ಷ ಗುರುತಿಸಿ ಸೂಕ್ತ ಗೌರವ ಸಲ್ಲಿಸಿಲ್ಲ ಎಂದು ಆರೋಪಿಸಿದ್ದಾರೆ.

ಪಕ್ಷದಲ್ಲಿ ಪ್ರಾಮಾಣುಕತೆಗೆ ಬೆಲೆ ಇಲ್ಲ
ನಿಜಕ್ಕೂ ಬೇಸರದ ವಿಷಯ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ಪಕ್ಷದ ನಾಯಕರು ಈ ವಿಚಾರದಲ್ಲಿ ಬಹಳಷ್ಟು ಎಡವಿದ್ದಾರೆ ಎನ್ನುವುದು ನನ್ನ ಅಭಿಪ್ರಾಯ. ನಿನ್ನೆ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಎಲ್ಲಾ ಅರ್ಹರಿಗೆ ಸಚಿವ ಸ್ಥಾನ ನೀಡಿದ್ದರೆ, ಎಲ್ಲೋ ಒಂದು ಕಡೆ ಎಲ್ಲರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳಬಹುದಿತ್ತು. ಆದರೆ ಇಲ್ಲಿ ಸೋಮಣ್ಣ, ಸವದಿಯವರಂತಹರಿಗೆ ಸ್ಥಾನ ನೀಡಿದ್ದಲ್ಲದೇ, ಒಬ್ಬ ಮುಖ್ಯಮಂತ್ರಿಯಾದ ವ್ಯಕ್ತಿಗೆ ಮತ್ತೆ ಸಚಿವ ಸ್ಥಾನ ನೀಡಿ ಜ್ಞಾನೇಂದ್ರಣ್ಣರವರಂತಹ ಎಲ್ಲಾ ರೀತಿಯಲ್ಲೂ ಸಚಿವರಾಗಲು ಅರ್ಹತೆ ಇರುವಂತಹ ವ್ಯಕ್ತಿಗೆ ಮೋಸ ಮಾಡಿದ್ದಾರೆ. ಇದು ಅವರಿಗೆ ಮಾತ್ರ ಮಾಡಿದಂತಹ ಮೋಸವಲ್ಲ ಸಮಸ್ತ ಮಲೆನಾಡಿನ ಸಜ್ಜನ ಜನರಿಗೆ ಮಾಡಿದಂತಹ ಮೋಸ. ಈ ವಿಚಾರದಲ್ಲಿ ಪಕ್ಷದ ತೀರ್ಮಾನವನ್ನು ಖಂಡಿತ ವಿರೋಧಿಸುತ್ತೇನೆ. ಪಕ್ಷದಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲ ಎಂದು ಮತ್ತೆ ಸಾಬೀತಾಗಿದೆ ಎಂದು ಚೇತನ್ ಗಡಿಕಲ್ಲು ಫೇಸ್ಬುಕ್ನಲ್ಲಿ ಬರೆದಿದ್ದಾರೆ.

ಶಾಸಕರು ಮಾಡಿದ 'ತಪ್ಪು'ಗಳ ಪಟ್ಟಿ
ನಮ್ಮ ಶಾಸಕರು ತುಂಬಾ ತಪ್ಪು ಮಾಡಿದ್ದಾರೆ.
1.ಜಾತಿಯತೆ ಮಾಡಿಲ್ಲ
2 .ಕೋಮುವಾದಿ ಆಗಿಲ್ಲ
3. ಸದನದಲ್ಲಿ ನೀಲಿ ಚಿತ್ರ ನೋಡಿಲ್ಲ.
4.ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿಲ್ಲ.
5.ಲಂಚ ತಗೊಂಡಿಲ್ಲ.
6.ಬೇರೆ ಪಕ್ಷದ ಕಡೆ ತಿರುಗಿಯೂ ನೋಡಿಲ್ಲ.
7.ಅಧಿಕಾರಕ್ಕಾಗಿ ಜೆಡಿಎಸ್ ನಾಯಕರ ಮನೆಗೆ ಹೋಗಿಲ್ಲ.
8.ಸಂಘ ಪರಿವಾರಕ್ಕೆ ವಿರುದ್ಧವಾಗಿ ನೆಡೆದುಕೊಂಡಿಲ್ಲ.
9.ಮತ್ತೊಂದು ಸಂಘಟನೆ ಕಟ್ಟಿ ಪಕ್ಷಕ್ಕೆ ಸೆಡ್ಡು ಹೊಡೆದಿಲ್ಲ.
10.ಲಾಬಿ ಮಾಡಿಲ್ಲ.
11.ಮನೇಲಿ ದುಡ್ಡು ಎಣಿಸೋ ಮೆಷಿನ್ ಇಟ್ಟಿಲ್ಲ
12.ಸಾಮ್ರಾಟರಂತೆ ಬೇರೆ ಪಕ್ಷದ ಮುಖಂಡರ ಜೊತೆ ಹೊಂದಾಣಿಕೆ ರಾಜಕೀಯ ಮಾಡಿಲ್ಲ
13.ಮಠ ಮಾನ್ಯ ಅಂತ ಪಾದ ಪೂಜೆ ಮಾಡೋ ಬದಲು ಜನರ ಜೊತೆ ಬೆರೆತಿದ್ದು.
14.ಎಲ್ಲಕ್ಕಿಂತ ಹೆಚ್ಚು ಪಕ್ಷಕ್ಕಾಗಿ ತ್ಯಾಗ ಮಾಡಿದ್ದು.
15.ಜನರ ಸಂಕಷ್ಟಕ್ಕೆ ಧ್ವನಿ ಆಗಿದ್ದು.
16.ಪಕ್ಷೇತರ ಶಾಸಕನಾಗದೆ ಇರುವುದು... ಇನ್ನೂ ತುಂಬಾ ತಪ್ಪುಮಾಡಿದ ಕಾರಣಕ್ಕೆ ಮಂತ್ರಿ ಸ್ಥಾನ ಕೊಡಲಿಲ್ಲ ಅನ್ಸುತ್ತೆ ಎಂದು ರಘು ಮಳುರ್ ಎಂಬುವವರು ಜ್ಞಾನೇಂದ್ರ ಅವರಿಗೆ ಸಚಿವ ಸ್ಥಾನ ನೀಡದೆ ಇರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಘಟನೆಯ ಪ್ರಮುಖರೇ ನಿರ್ಧರಿಸಬೇಕು
ಯಾವುದೇ ಕೌಟುಂಬಿಕ, ಆರ್ಥಿಕ ಅಥವಾ ಸಾಮಾಜಿಕ ಹಿನ್ನೆಲೆಯೇ ಇಲ್ಲದ ನನ್ನನ್ನು ತೀರ್ಥಹಳ್ಳಿ ಕ್ಷೇತ್ರದ ಮಹಾ ಜನತೆ ಮತ್ತು ನನ್ನ ಸಂಘಟನೆ ಸತತವಾಗಿ ಒಂಬತ್ತು ಬಾರಿ ಚುನಾವಣೆಯಲ್ಲಿ ನನ್ನನ್ನು ಸ್ಪರ್ಧಿಸುವಂತೆ ಮಾಡಿದ್ದಾರೆ. ನಾಲ್ಕು ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಪ್ರಜಾಪ್ರಭುತ್ವದ ಶ್ರೇಷ್ಠ ಸ್ಥಾನವಾದ ವಿಧಾನಸಭೆಯಲ್ಲಿ ತೀರ್ಥಹಳ್ಳಿ ಕ್ಷೇತ್ರವನ್ನು ಪ್ರತಿನಿಧಿಸುವ ಅವಕಾಶವನ್ನು ಪಕ್ಷ ನೀಡಿದೆ. ಇದಕ್ಕಿಂತ ಹೆಚ್ಚು ನಿರೀಕ್ಷೆಯನ್ನು ನಾನು ಮಾಡಬೇಕೋ ಬೇಡವೋ, ನಾನು ಅರ್ಹನೋ ಅಲ್ಲವೋ ಎನ್ನುವುದನ್ನು ನನ್ನ ಸಂಘಟನೆಯ ಪ್ರಮುಖರೇ ನಿರ್ಧರಿಸಬೇಕು ಎಂದು ಆರಗ ಜ್ಞಾನೇಂದ್ರ ಅವರು ಫೇಸ್ಬುಕ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

ಪಕ್ಷವೇ ಮುಖ್ಯ ಎಂದ ಜ್ಞಾನೇಂದ್ರ
'ನಾನಳಿವೆ ನೀನಳಿವೆ ನಮ್ಮೆಲುಬುಗಳ ಮೇಲೆ. ಮೂಡುವುದು ಮೂಡುವುದು ನವ ಭಾರತ ಲೀಲೆ' ನಾವು ಮಂತ್ರಿಯಾಗಿರುತ್ತೇವೆಯೋ ಅಥವಾ ಇನ್ಯಾರೋ ಮಂತ್ರಿಯಾಗ್ತಾರೋ ಎನ್ನುವುದು ಮುಖ್ಯವಲ್ಲ. ನಾವು ಗೆಲ್ಲುತ್ತೀವೋ ಸೋಲುತ್ತೀವೋ ಎನ್ನುವುದೂ ಮುಖ್ಯವಲ್ಲ. ನಮ್ಮ ಭಾರತ ಹಾಗೂ ಭಾರತೀಯ ಜನತಾ ಪಕ್ಷ ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು ಎನ್ನುವ ತತ್ವ-ಸಿದ್ಧಾಂತಗಳ ಜೊತೆಯಲ್ಲಿಯೇ ಬೆಳೆದವನು ನಾನು. ಮುಂದೆಯೂ ಹಾಗೇಯೇ ಇರುತ್ತೇನೆ.. ಎಂದು ಜ್ಞಾನೇಂದ್ರ ಅವರು ಅಭಿಮಾನಿಗಳಿಗೆ ಸಮಾಧಾನ ಹೇಳಿದ್ದಾರೆ.












Click it and Unblock the Notifications