ಸರ್ಕಾರ ಬೀಳಿಸೋಕೆ ಕಾಂಗ್ರೆಸ್ ಶಾಸಕರಿಂದಲೇ ನಿರ್ಧಾರ: ಕೆಎಸ್ ಈಶ್ವರಪ್ಪ
ಶಿವಮೊಗ್ಗ, ಸೆಪ್ಟೆಂಬರ್ 12: ರಾಜ್ಯ ಸರ್ಕಾರವನ್ನು ಬೀಳಿಸಲು ಕಾಂಗ್ರೆಸ್ ಶಾಸಕರೇ ನಿರ್ಧಾರ ತೆಗೆದುಕೊಂಡಂತಿದೆ ಎಂದು ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಇನ್ನು ಹೆಚ್ಚು ದಿನ ಉಳಿಯಲ್ಲ ಎಂದು ಬಿಜೆಪಿ ಹೇಳಬೇಕಾಗಿಲ್ಲ, ಸಮ್ಮಿಶ್ರ ಸರ್ಕಾರದ ಶಾಸಕರೇ ಹೇಳುತ್ತಿದ್ದಾರೆ, ತಾನಾಗಿಯೇ ಸರ್ಕಾರ ಉರುಳಿ ಹೋಗಲಿದೆ ಎಂದರು.
ಬಿಜೆಪಿಯು ರಾಜ್ಯ ಸರ್ಕಾರವನ್ನು ಉರುಳಿಸುವ ಪ್ರಯತ್ನವನ್ನು ಮಾಡುತ್ತಿಲ್ಲ, ಆದರೆ ರಾಜ್ಯ ಸರ್ಕಾರ ಯಾರ ಪ್ರಯತ್ನವಿಲ್ಲದೆ ತಾನಾಗಿಯೇ ಉರುಳಿ ಹೋಗಲಿದೆ, ಸರ್ಕಾರಕ್ಕೆ ಜಾರಕಿಹೊಳಿ ಸಹೋದರರು ಗಡುವು ನೀಡಿದ್ದಾರೆ, ರಾಜ್ಯ ಸರ್ಕಾರವನ್ನು ಕೆಳಗಿಳಿಸಲು ಬಿಜೆಪಿ ಯಾವ ಕಸರತ್ತನ್ನೂ ಮಾಡುತ್ತಿಲ್ಲ.

ಲೋಕಸಭಾ ಚುನಾವಣೆಯಲ್ಲಿ ಈಶ್ವರಪ್ಪ ಕೂಡ ಒಬ್ಬ ಸ್ಪರ್ಧಿ ಎನ್ನುವ ವಿಚಾರ ಕೇಳಿಬರುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯಾರೋ ಹೇಳಿದ್ದಾರೆ ಎಂದು ನಾನು ಅಭ್ಯರ್ಥಿಯಾಗಲು ಸಾಧ್ಯವಿಲ್ಲ, ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ಪಕ್ಷದ ಹಿರಿಯರು ಹೇಳಿದರೆ ಆ ಮಾತನ್ನು ಮೀರುವುದಿಲ್ಲ ಎಂದರು.
ಬಿಜೆಪಿಯ ಐದು ಶಾಸಕರನ್ನು ನಾವು ಸೆಳೆಯುತ್ತೇವೆ ಎನ್ನುವ ವಿಚಾರ ಕುರಿತು ಮಾತನಾಡಿದ ಅವರು, ನಾವು ಆಪರೇಷನ್ ಕಮಲ ಮಾಡಿದರೆ ಕಾಂಗ್ರೆಸ್, ಜೆಡಿಎಸ್ ಅದನ್ನು ತಪ್ಪು ಎನ್ನುತ್ತದೆ, ಬಿಜೆಪಿಯ 104 ಶಾಸಕರು ಹುಲಿಗಳಿದ್ದಂತೆ, ಯಾರನ್ನೂ ಮುಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.











Click it and Unblock the Notifications