ರಾಹುಲ್ ರಾಜ್ಯ ಭೇಟಿ ಹಿನ್ನೆಲೆ ಅಧಿವೇಶನ ಮೊಟಕು: ಈಶ್ವರಪ್ಪ ಕುಟುಕು
ಶಿವಮೊಗ್ಗ, ಫೆಬ್ರವರಿ 21: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯ ಭೇಟಿ ಹಿನ್ನಲೆಯಲ್ಲಿ ವಿಧಾನ ಮಂಡಲ ಅಧಿವೇಶನವನ್ನು ಮೊಟಕುಗೊಳಿಸಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ,.ಎಸ್, ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ಸಾಕಷ್ಟು ಗಂಭೀರ ವಿಷಯ ಚರ್ಚೆ ಆಗಬೇಕಿತ್ತು. ಆದರೆ ರಾಹುಲ್ ಗಾಂಧಿ ರಾಜ್ಯಕ್ಕೆ ಆಮಿಸುತ್ತಿದ್ದಾರೆ ಎಂಬ ನೆಪ ಮುಂದಿಟ್ಟುಕೊಂಡು ಅಧಿವೇಶನವನ್ನು ಮೊಟಕುಗೊಳಿಸತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂರಿದರು.
ಶಿವಮೊಗ್ಗ ಬಿಜೆಪಿಯಲ್ಲಿ ಟಿಕೆಟ್ ರಾಜಕೀಯ, ಕಣ್ಣೀರಿಟ್ಟ ಕೆ.ಎಸ್.ಈಶ್ವರಪ್ಪ
ಸರ್ಕಾರ ಅವರ ಕೈಯಲ್ಲಿದೆ ಎಂದು ಸರ್ವಾಧಿಕಾರಿ ಧೋರಣೆ ಅನುಸರಿಸುವುದು ಒಳ್ಳೆಯ ಬೆಳವಣಿಗೆಯಲ್ಲ, ಇದು ರಾಜ್ಯದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಅಪಮಾನ. ಇಂತಹ ವರು ರಾಜ್ಯ ಮುಖ್ಯಮಂತ್ರಿಯಾಗಿರುವುದು ರಾಜ್ಯದ ದುರಾದೃಷ್ಟವೇ ಸರಿ ಎಂದರು.
ಅಧಿವೇಶನದಲ್ಲಿ ಮೊಹಮ್ಮದ್ ನಲಪಾಡ್ ಹಾಗೂ ನಾರಾಯಣಸ್ವಾಮಿ ಚರ್ಚೆ
ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ ಹಾಗೂ ಸಿದ್ದರಾಮಯ್ಯ ಆಪ್ತ ನಾರಾಯಣ ಸ್ವಾಮಿ ತೋರಿರುವ ಪೌರುಷ ಕುರಿತು ಅಧಿವೇಶನದಲ್ಲಿ ಸಾಕಷ್ಟು ಚರ್ಚೆಯಾಯಿತು. ಹೀಗಾಗಿ ಬಜೆಟ್, ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಸಲು ಹೆಚ್ಚಿನ ಕಲಾವಕಾಶ ಸಿಕ್ಕಿರಲಿಲ್ಲ. ಮುಂದಿನ ಅದಿವೇಶನ ಸಮಯದಲ್ಲಿ ಚರ್ಚೆ ಮಾಡುವ ಅಭಿಲಾಷೆ ಹೊಂದಲಾಗಿತ್ತು. ಆದರೆ, ರಾಹುಲ್ ಭೇಟಿ ಹಿನ್ನಲೆಯಲ್ಲಿ ನಿಗದಿಯಾದ ದಿನಕ್ಕಿಂತ ಮೊದಲೇ ಅಧಿವೇಶನ ಮುಕ್ತಾಯ ಮಾಡುವ ನಿರ್ಧಾರವನ್ನು ಕೈಗೊಂಡಿರುವುದು ದುರಾದೃಷ್ಟಕರ ಎಂದು ಹೇಳಿದರು.
ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್ ಗಿಂತ ನಾಲಾಯಕ್ ಸಚಿವರಿಲ್ಲ
ಆರೋಗ್ಯ, ಗೃಹ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳು ಸತ್ತು ಹೋಗಿವೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ರಾಮಲಿಂಗಾ ರೆಡ್ಡಿ, ಕೆ.ಜೆ. ಜಾರ್ಜ್ ಅವರಿಗಿಂತ ನಾಲಾಯಕ್ ಮಂತ್ರಿಯಾಗಿದ್ದಾರೆ ಎಂದು ಟೀಕಿಸಿದರು.
ವಿದ್ವತ್ ಮೇಲೆ ಹಲ್ಲೆ ನಡೆಸಿದವರೆಲ್ಲರನ್ನೂ ಬಂಧಿಸಬೇಕು
ಹ್ಯಾರಿಸ್ ಪುತ್ರ ಸೇರಿದಂತೆ 19 ಮಂದಿ ಯುವಕನೊಬ್ಬನ ಮೇಲೆ ಮನಸೋ ಇಚ್ಚೆ ಹಲ್ಲೆ ನಡೆಸಿದ್ದಾರೆ. ಹೊಡೆತ ತಿಂದವನ ಮೇಲೆ ಕೇಸು ಹಾಕಲಾಗಿತ್ತು. ಕಾಂಗ್ರೆಸ್ ಲೀಡರ್ ಮಕ್ಕಳಾಗಿದ್ದರೆ, ಪ್ರಕರಣ ದಾಖಲಾಗುವುದಿಲ್ಲ. ಇದು ರಾಜ್ಯದ ಪರಿಸ್ಥಿತಿ. ಗೃಹ ಸಚಿವ ರಾಮಲಿಂಗಾರೆಡ್ಡಿಗೆ ಪ್ರಾಮಾಣಿಕತೆ ಇದ್ದರೆ, ಯುವಕನ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಿದ್ದರಾಮಯ್ಯ ಮತ್ತೆ ಅಧಿಕಾರ ಹಿಡಿಯುವ ಭ್ರಮೆಯಿಂದ ಹೊರಬರಲಿ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಮಾಜದಲ್ಲಿ ಶಾಂತಿ, ನೆಮ್ಮದಿ ಇಲ್ಲವಾಗಿದೆ. ಅಣ್ಣ, ತಮ್ಮಂದಿರಂತೆ ಬಾಳ್ವೆ ನಡೆಸುತ್ತಿದ್ದ ಹಿಂದು -ಮುಸ್ಲಿಮರ ನಡುವೆ ಗೊಂದಲ ಮೂಡಿಸಿದರು. ರಾಷ್ಟ್ರ ದ್ರೋಹಿಗಳಿಗೆ ಬೆಂಬಲ ನೀಡುವ ಮೂಲಕ ಮತ್ತೆ ಅಧಿಕಾರ ಹಿಡಿಯುತ್ತೇವೆ ಎಂಬ ಭ್ರಮೆಯಲ್ಲಿ ಮುಖ್ಯಮಂತ್ರಿ ಇದ್ದರೆ ಅದರಿಂದ ಹೊರಬರಬೇಕೆಂದರು.
ಶಿಕಾರಿಪುರ ಕ್ಷೇತ್ರಕ್ಕೆ ಯಡಿಯೂರಪ್ಪ ಹೆಸರು ಅಂತಿಮ
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಕ್ಷೇತ್ರದಿಂದ ಬಿ.ಎಸ್. ಯಡಿಯೂರಪ್ಪ ಸ್ಪರ್ಧಿಸಲಿದ್ದಾರೆ. ವರಿಷ್ಠರು ಯಡಿಯೂರಪ್ಪ ಅವರ ಹೆಸರನ್ನು ಶಿಕಾರಿಪುರ ಕ್ಷೇತ್ರಕ್ಕೆ ಅಚಿತಿಮಗೊಳಿಸಿದ್ದಾರೆ. ಚುನಾವಣೆಯಲ್ಲಿ ಯಡಿಯೂರಪ್ಪ ಗೆಲುವು ಸಾಧಿಸಲಿದ್ದಾರೆ. ಪುನಃ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದರು.