ಪರಿಸರ ವಿನಾಶದಿಂದ ಕೊರೊನಾದಂತಹ ಕಾಯಿಲೆಗಳು ಬರುತ್ತಿವೆ: KS ಗುರುಮೂರ್ತಿ
ಶಿವಮೊಗ್ಗ, ಜುಲೈ 28: ಜಗತ್ತಿನಲ್ಲಿ ಕೊರೊನಾ ವೈರಸ್ ನಂತಹ ಭೀಕರ ಕಾಯಿಲೆಗಳು ಬರಲು ನಮ್ಮ ಸುತ್ತಮುತ್ತಲಿನ ಪರಿಸರ ವಿನಾಶವೇ ಕಾರಣವಾಗಿದೆ ಎಂದು ಮಲೆನಾಡು ಅಭಿವೃದ್ಧಿ ಮಂಳಿಯ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ ಹೇಳಿದರು.
Recommended Video
ಶಿಕಾರಿಪುರ ತಾಲ್ಲೂಕು ಬಿಜೆಪಿ ಯುವಾ ಮೋರ್ಚಾ ವತಿಯಿಂದ ಅಯೋಜಿಸಲಾಗಿದ್ದ ಪರಿಸರ ವೃಕ್ಷಾರೋಪಣಾ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಿಸರ ಕಾರ್ಯಕ್ರಮಗಳು ಕೇವಲ ಕಾರ್ಯಕ್ರಮಕ್ಕೆ ಸೀಮಿತ ಆಗಬಾರದು, ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು, ಪರಿಸರವನ್ನು ತಾಯಿಯಂತೆ ಕಾಣಬೇಕು ಎಂದರು.
ಪರಿಸರ ಸಂರಕ್ಷಣೆಗೆ ಬಿಜೆಪಿ ಪಕ್ಷ ಹಾಗೂ ಸಂಘ ಪರಿಹಾರವು ಪೂರ್ಣಾವಧಿ ಕಾರ್ಯಕರ್ತರನ್ನು ನೀಡಿದೆ. ಶಿವಮೊಗ್ಗ ಮಲೆನಾಡಿನ ಹೆಬ್ಬಾಗಿಲು, ನೈಸರ್ಗಿಕ ಸಂಪತ್ತು ಹೊಂದಿದ ಮಲೆನಾಡಿನ ಕಾಡಿನಲ್ಲಿ ಅಕೇಶಿಯ ಗಿಡಗಳನ್ನು ನೆಡಬಾರದು ಎಂದು ಹಿರಿಯರು ಒಂದು ಯೋಜನೆಯನ್ನು ಹಾಕಿಕೊಂಡು ವೃಕ್ಷ ರಕ್ಷ ಆಂದೋಲನವು ಸಾಗರದಲ್ಲಿ ಆರಂಭವಾಯಿತು ಎಂದರು.

ಇಡೀ ವಿಶ್ವವೇ ಕೊರೊನಾ ವೈರಸ್ ನಿಂದ ನರಳುತ್ತಿದೆ, ಭಾರತದಲ್ಲಿ ಆಯುರ್ವೇದ ಔಷಧದಿಂದ ಗುಣಮುಖರಾಗಿದ್ದಾರೆ. ಆದರೆ ನಮ್ಮ ಜನರು ಆಯುರ್ವೇದ ಸಂಬಂಧಿಸಿದ ಪರಿಸರವನ್ನು ನಾಶ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಅಭಿವೃದ್ಧಿಯ ಹೆಸರಿನಲ್ಲಿ ಪರಿಸರ ನಾಶವಾಗುತ್ತಿದ್ದು, ದೇವರ ಕಾಡು ಎಂಬ ಕಲ್ಪನೆಯನ್ನು ಇಟ್ಟುಕೊಂಡು ಕೋವಿಡ್ ಸಂದರ್ಭದಲ್ಲಿ ನಿಸರ್ಗ ಸಂರಕ್ಷಣಾ ಮಾಡಬೇಕಾದ ಅನಿವಾರ್ಯತೆ ಇದೆ. ಬಿಜೆಪಿ ಯುವ ಮೋರ್ಚಾದವರು ಈ ಕುರಿತು ಚಿಂತಿಸಬೇಕು, ಕೇವಲ ಫೋಟೋಕ್ಕಾಗಿ ಪರಿಸರ ಕಾರ್ಯಕ್ರಮ ಮಾಡಬಾರದು ಎಂದರು.
ಮಲೆನಾಡಿನಲ್ಲಿ ಇರುವ ಜನ ಪರಿಸರ ನಾಶ ಮಾಡಿಕೊಂಡು ಭೀಕರ ಬರಗಾಲವನ್ನು ಅನುಭವಿಸಿದ್ದೇವೆ, ಆದ್ದರಿಂದ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಬೇಕು. ದೇಶಕ್ಕೆ ಪೂರಕವಾಗಿ, ಸಮಾಜದ ಆರೋಗ್ಯಕ್ಕಾಗಿ ವೃಕ್ಷಾರೋಪಣ ಕಾರ್ಯಕ್ರಮ ಸಂತಸ ತಂದಿದೆ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಒಂದು ರಾಷ್ಟ್ರೀಯ ಪಕ್ಷ ಚುನಾವಣೆಗೆ, ರಾಜಕೀಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರದೆ ಈ ರೀತಿಯ ಸಾಮಾಜಿಕ ಕಾರ್ಯವನ್ನು ಬಿಜೆಪಿ ಪಕ್ಷದ ಕಾರ್ಯಕರ್ತರು ಮಾಡುವ ಮೂಲಕ ಬೇರೆ ಪಕ್ಷಗಳಿಗಿಂತ ಭಿನ್ನವಾಗಿದ್ದಾರೆ ಎಂದು ತಿಳಿಸಿದರು.
ರೈತರಿಗೆ ಪರಿಸರ ಸಂರಕ್ಷಣಾ ಬಗ್ಗೆ ಜಾಗೃತಿ ಮೂಡಿಸಬೇಕು, ಅದಕ್ಕೂ ಮೊದಲು ಶಾಶ್ವತವಾಗಿ ಇರುವಂತೆ ಜಾಗವನ್ನು ಗುರುತಿಸಿ ಗಿಡಗಳನ್ನು ನೆಡಬೇಕು ಎಂದರು. ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಹರಿಕೃಷ್ಣ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮ ಮನೆ ಮನೆಯ ಆಚರಣೆಗಳಲ್ಲಿ ಒಂದಾಗಿತ್ತು. ಅಶ್ವ ಗಿಡ, ತುಳಸಿ, ಬನ್ನಿಮರಗಳು ನಮ್ಮ ಜೀವನ ಶೈಲಿಯಲ್ಲಿ ರೂಢಿಸಿಕೊಂಡಿದ್ದವು ಎಂದು ಹೇಳಿದರು.
ಪ್ಲಾಸ್ಟಿಕ್ ಬಳಕೆ ಮಾಡದೇ ಪ್ರಕೃತಿ ಜೊತೆಗೆ ಬದುಕೋಣ, ನಮ್ಮ ಸಂಸ್ಕೃತಿಗಳ ಜೊತೆಗೆ ಪರಿಸರವನ್ನು ಮುಖ್ಯ ಭಾಗವಾಗಿಸಿಕೊಂಡು ಉಳಿಸೋಣ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಯುವ ಮೋರ್ಚಾ ಹಾಗೂ ತಾಲ್ಲೂಕು ಯುವ ಮೋರ್ಚದ ಸದಸ್ಯರು ಬಿಜೆಪಿ ಪಕ್ಷದ ಮುಖಂಡರು ಇದ್ದರು.












Click it and Unblock the Notifications