ಶಿವಮೊಗ್ಗ ಉಪ ಚುನಾವಣೆ ಗೆಲ್ಲಲು ಕಾಂಗ್ರೆಸ್ ರಣತಂತ್ರ!
ಶಿವಮೊಗ್ಗ, ಅಕ್ಟೋಬರ್ 19 : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಗೆಲ್ಲಲೇಬೇಕು ಎಂದು ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ತಯಾರಿ ನಡೆಸುತ್ತಿವೆ. ಹಳ್ಳಿಗಳಲ್ಲಿ ಪ್ರತಿ 20 ಮನೆಗೆ ಮೂವರ ತಂಡ ಪ್ರಚಾರ ನಡೆಸುವಂತೆ ತಂತ್ರ ರೂಪಿಸಲಾಗಿದೆ.
ಶಿವಮೊಗ್ಗದ ಶರಾವತಿ ದಂತವೈದ್ಯಕೀಯ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ಸಭೆ ನಡೆಯಿತು. ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಲವಾರು ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಜೆಡಿಎಸ್-ಕಾಂಗ್ರೆಸ್ ಒಟ್ಟಾಗಿ ಹೇಗೆ ಪ್ರಚಾರ ನಡೆಸಬೇಕು, ಯಾವ ನಾಯಕರಿಗೆ ಯಾವ ಜವಾಬ್ದಾರಿ ನೀಡಬೇಕು, ಪ್ರತಿ ಮನೆಯ ಮತದಾರರನ್ನು ಹೇಗೆ ತಲುಪಬೇಕು? ಎಂದು ಸಭೆಯಲ್ಲಿ ಚರ್ಚೆ ನಡೆಸಿ, ಯೋಜನೆ ರೂಪಿಸಲಾಯಿತು.
ನವೆಂಬರ್ 3ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ಬಿಜೆಪಿಯಿಂದ ಬಿ.ವೈ.ರಾಘವೇಂದ್ರ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಅವರು ಕಣದಲ್ಲಿದ್ದಾರೆ. ನವೆಂಬರ್ 6ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

20 ಮನೆಗೆ ಮೂವರ ತಂಡ
ಹಳ್ಳಿಗಳಲ್ಲಿ ಪ್ರತಿ 20 ಮನೆಗೆ ಮೂವರ ತಂಡವನ್ನು ರಚನೆ ಮಾಡಲು ನಿರ್ಧರಿಸಲಾಗಿದೆ. ತಂಡವು ಚುನಾವಣಾ ಪ್ರಚಾರ ನಡೆಸುವ ಜೊತೆಗೆ ಮತದಾನ ಮಾಡಿದ್ದಾರೆ ಎಂದು ಖಾತ್ರಿ ಪಡಿಸಿಕೊಳ್ಳಬೇಕು. ಬೂತ್ ಸಮಿತಿಯನ್ನು ರಚನೆ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾದರಿಯಲ್ಲಿ ಪ್ರಚಾರವನ್ನು ನಡೆಸಲಾಗುತ್ತದೆ.

ಬಹಿರಂಗ ಸಮಾವೇಶ ಆಯೋಜನೆ
ಪ್ರತಿ ತಾಲೂಕಿನ ಎರಡು ಕಡೆ ಬಹಿರಂಗ ಸಮಾವೇಶ ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ. ತೀರ್ಥಹಳ್ಳಿ, ಕೋಣಂದೂರು, ನಗರ, ಹೊಸನಗರ, ಆನಂದಪುರ, ಶಿಕಾರಿಪುರ, ಭದ್ರಾವತಿ, ಶಿರಾಳಕೊಪ್ಪ, ಸೊರಬ, ಆನವಟ್ಟಿ, ಹೊಳೆಹೊನ್ನೂರು, ಆಯನೂರು, ಶಿವಮೊಗ್ಗದಲ್ಲಿ ಬಹಿರಂಗ ಸಮಾವೇಶಗಳನ್ನು ಆಯೋಜಿಸಲಾಗುತ್ತದೆ.

ಸಮಾವೇಶದಲ್ಲಿ ಯಾರು ಭಾಗಿ
ಬಹಿರಂಗ ಸಮಾವೇಶದಲ್ಲಿ ಎಚ್.ಡಿ.ಕುಮಾರಸ್ವಾಮಿ, ಡಿಸಿಎಂ ಡಾ.ಜಿ.ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ. ಯಾವ ಊರಿನಲ್ಲಿ ಯಾವ ನಾಯಕರು ಪ್ರಚಾರ ನಡೆಸಲಿದ್ದಾರೆ? ಎಂಬ ತೀರ್ಮಾನವನ್ನು ಕಾಗೋಡು ತಿಮ್ಮಪ್ಪ ಅವರು ತೆಗೆದುಕೊಳ್ಳಲಿದ್ದಾರೆ.

ತಾಲೂಕು ಮಟ್ಟದ ಸಮಾವೇಶ
ಅಕ್ಟೋಬರ್ 20ರಂದು ತೀರ್ಥಹಳ್ಳಿ, ಹೊಸನಗರ, ಸಾಗರದಲ್ಲಿ, ಅಕ್ಟೋಬರ್ 21ರಂದು ಬೈಂದೂರಿನಲ್ಲಿ ಸಮಾವೇಶ ನಡೆಯಲಿದೆ. ಅಕ್ಟೋಬರ್ 22ರಂದು ನಂತರ ನಡೆಯುವ ಸಮಾವೇಶಗಳ ಸ್ಥಳ ಮತ್ತು ದಿನಾಂಕವನ್ನು ನಿಗದಿ ಮಾಡಲಾಗತ್ತದೆ.

ಇದು ಮೈತ್ರಿಕೂಟದ ಪ್ರತಿಷ್ಠೆ
'ಲೋಕಸಭೆ ಉಪ ಚುನಾವಣೆ ಮೈತ್ರಿಕೂಟದ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ನಿಮ್ಮ ವೈಯಕ್ತಿಕ ಹಿತಾಸಕ್ತಿ, ಪ್ರತಿಷ್ಠೆಗಳನ್ನು ಬದಿಗೊತ್ತಿ ಕೆಲಸ ಮಾಡಬೇಕು. ಮೈತ್ರಿಕೂಟದ ಅಭ್ಯರ್ಥಿ ಗೆಲುವಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು' ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.












Click it and Unblock the Notifications