ತೀರ್ಥಹಳ್ಳಿ; ಅಡಕೆ ನುಂಗಿದ ಮಗು, ಉಸಿರುಗಟ್ಟಿ ಸಾವು
ಶಿವಮೊಗ್ಗ, ಫೆಬ್ರವರಿ 7: ಎಲೆ ಅಡಕೆ ತಟ್ಟೆಯಲ್ಲಿದ್ದ ಅಡಕೆ ನುಂಗಿದ ಮಗು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೀರ್ಥಹಳ್ಳಿ ತಾಲೂಕು ಹೆದ್ದೂರು ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. 1 ವರ್ಷ ಒಂದು ತಿಂಗಳ ಮಗು ನಿಶಾನ್ ಮೃತಪಟ್ಟಿದೆ. ಸಂದೇಶ ಮತ್ತು ಅರ್ಚನಾ ದಂಪತಿಗಳ ಮಗು ನಿಶಾನ್ ಆರೋಗ್ಯವಾಗಿತ್ತು. ಆಟವಾಡುವಾಗ ಅಡಕೆ ನುಂಗಿದ್ದರಿಂದ, ಉಸಿರುರಾಡಲು ಕಷ್ಟವಾಗಿದೆ.
ತಕ್ಷಣವೇ ಮಗುವನ್ನು ಕಟ್ಟೆಹಕ್ಕಲುವಿನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿದೆ. ಅಲ್ಲಿಂದ ತೀರ್ಥಹಳ್ಳಿಯ ಜೆ. ಸಿ. ಆಸ್ಪತ್ರೆಗೆ ಕರೆತಂದು ದಾಖಲು ಮಾಡಲಾಗಿದೆ. ಆದರೆ, ಉಸಿರಾಡಲು ಕಷ್ಟವಾಗಿ ಮಗು ಮೃತಪಟ್ಟಿದೆ.

ಸಂದೇಶ ಮತ್ತು ಅರ್ಚನಾ ದಂಪತಿಗಳು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಲಾಕ್ ಡೌನ್ ಸಂದರ್ಭದಲ್ಲಿ ಊರಿಗೆ ಬಂದಿದ್ದರು. ಬೆಂಗಳೂರಿಗೆ ವಾಪಸ್ ತೆರಳಲು ಸಿದ್ಧತೆ ನಡೆಸುತ್ತಿದ್ದರು. ಇಂತಹ ಸಮಯದಲ್ಲಿಯೇ ಈ ದುರ್ಘಟನೆ ಸಂಭವಿಸಿದೆ.
ಅಡಕೆ ನುಂಗಿ ಮಗು ಮೃತಪಟ್ಟಿದ್ದರಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಆರೋಗ್ಯ ಇಲಾಖೆ ಇತ್ತೀಚೆಗೆ ಆಯೋಜಿಸಿದ್ದ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ ಉತ್ತಮ ಆರೋಗ್ಯವಂತ ಮಗು ಎಂದು ನಿಶಾನ್ ಪ್ರಥಮ ಬಹುಮಾನವನ್ನು ಗಳಿಸಿತ್ತು.
ತೀರ್ಥಹಳ್ಳಿ ಭಾಗದಲ್ಲಿ ಪ್ರತಿ ಮನೆಯಲ್ಲಿಯೂ ಸಾಮಾನ್ಯವಾಗಿ ಎಲೆ ಅಡಕೆ ಹಾಕುವವರು ಇರುತ್ತಾರೆ. ಮನೆಯಲ್ಲಿ ಎಲೆ-ಅಡಕೆ ತಟ್ಟೆ ಇಟ್ಟಿರುತ್ತಾರೆ. ಆಟವಾಡುವಾಗ ಮಗು ಅಡಕೆ ನುಂಗಿದೆ.












Click it and Unblock the Notifications