ಶಿವಮೊಗ್ಗ ಮೂಲದ ವ್ಯಕ್ತಿ ಸೌದಿಯಲ್ಲಿ ಸಾವು
ಶಿವಮೊಗ್ಗ, ಅ.22 : ಸೌದಿ ಅರೇಬಿಯಾದ ರಿಯಾದ್ ದರಯ್ಯಾ ಪ್ರಾಂತ್ಯದ ಸೌದಿ ನಿವಾಸಿಯೊಬ್ಬರ ಮನೆಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಶಿವಮೊಗ್ಗ ಮೂಲದ ವ್ಯಕ್ತಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆಸಿಎಫ್ ನ ನೇತೃತ್ವದಲ್ಲಿ ಸೋಮವಾರ ಅಂತ್ಯ ಸಂಸ್ಕಾರ ನಡೆಸಲಾಗಿದೆ.
ಮೃತರನ್ನು ಶಿವಮೊಗ್ಗದ ಖಾಝಿ ಮೊಹಲ್ಲಾದ ಶೇಕ್ ಮುಹಮ್ಮದ್ ಸಲೀಂ (60) ಎಂದು ಗುರುತಿಸಲಾಗಿದೆ. ಇವರು ಕಳೆದ ಎರಡು ವರ್ಷಗಳಿಂದ ರಿಯಾದ್ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಆಗಸ್ಟ್ 18ರಂದು ಸಲೀಂ ಅವರಿಗೆ ಎದೆ ನೋವು ಕಾಣಿಸಿಕೊಂಡು ವಾಸ್ತವ್ಯ ಹೂಡಿದ್ದ ಸ್ಥಳದಲ್ಲೇ ಮೃತಪಟ್ಟಿದ್ದರು.

ಸಲೀಂ ಕುರಿತು ಮಾಹಿತಿ ಪಡೆದುಕೊಂಡ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಘಟಕದ ಸಾಂತ್ವನ ವಿಭಾಗವು ಕೂಡಲೇ ಮೃತರ ಮರಣೋತ್ತರ ಕ್ರಿಯೆಗೆ ಅಗತ್ಯವಾದ ದಾಖಲೆ ಪತ್ರಗಳನ್ನು, ವಿವಿಧ ಇಲಾಖೆಗಳಿಂದ ಸಂಗ್ರಹಿಸಿ ಹಾಗೂ ಊರಿನ ಕುಟುಂಬಸ್ಥರಿಂದ ಅನುಮತಿ ಪತ್ರ ಪಡೆದು ರಿಯಾದ್ ನಲ್ಲಿ ಅಂತ್ಯ ಕ್ರಿಯೆ ನಡೆಸಿದ್ದಾರೆ.
ಸೌದಿ ಆರೋಗ್ಯ ಇಲಾಖೆ, ವಲಸಿಗರ ಪ್ರಾಧಿಕಾರ, ಸ್ಥಳೀಯ ಪೋಲೀಸ್ ಠಾಣೆ, ಭಾರತೀಯ ರಾಯಭಾರಿ ಕಛೇರಿ, ಊರಿನ ಕುಟುಂಬಿಕರು ಸೇರಿದಂತೆ ಅಂತ್ಯ ಸಂಸ್ಕಾರ ನಡೆಸಲು ಬೇಕಾದ ಅಗತ್ಯ ದಾಖಲೆ ಪತ್ರಗಳನ್ನು ಎರಡೇ ದಿನಗಳಲ್ಲಿ ಕೆಸಿಎಫ್ ರಿಯಾದ್ ಝೋನಲ್ ಮುಖಂಡರಾದ ಹಂಝ ಮೈಂದಾಳ, ಹಸನ್ ಸಾಗರ್, ಖಲಂದರ್ ಪಾಣೆ ಮಂಗಳೂರು ಹಾಗೂ ಮಜೀದ್ ನೇತೃತ್ವದಲ್ಲಿ ಸಂಗ್ರಹಿಸಲಾಯಿತು.
ಪತ್ನಿ ಹಾಗೂ ಇಬ್ಬರು ಸಣ್ಣ ಹೆಣ್ಣುಮಕ್ಕಳನ್ನು ಅಗಲಿದ ಮೃತರ ಕುಟುಂಬವು ಇದೀಗ ಸಂಪೂರ್ಣ ಅನಾಥವಾಗಿದ್ದು ದುಃಖತಪ್ತ ಕುಟುಂಬಕ್ಕೆ ನೆರವಾಗುವಂತೆ ಕೆಸಿಎಫ್ ಕಾರ್ಯಕರ್ತರು ಮಾಡಿಕೊಂಡ ಮನವಿಗೆ 'ಕಫೀಲ್' ಎನ್ನುವವರು ಸ್ಪಂದಿಸಿದ್ದು ಸುಮಾರು ಎಂಟು ಸಾವಿರ ರಿಯಾಲ್ ( 1,35000 ರೂ) ಅವರ ಪತ್ನಿಯ ಖಾತೆಗೆ ಕಳುಹಿಸಿ ಕೊಟ್ಟಿದ್ದಾರೆ.
ರಿಯಾದ್ ಸಮೀಪದ exit 15 ರ ಮಸ್ಜಿದ್ ಅಲ್ ರಾಜಿ ಹ್ ನಲ್ಲಿ ನಡೆದ ಜನಾಝ ನಮಾಝ್ ಹಾಗೂ ನಸೀಂ ಸಾರ್ವಜನಿಕ ದಫನ ಭೂಮಿಯಲ್ಲಿ ನಡೆದ ದಫನ ಕಾರ್ಯದಲ್ಲಿ ಕೆಸಿಎಫ್ ಕಾರ್ಯಕರ್ತರಾದ ನವಾಝ್ ಸಖಾಫಿ, ಹಂಝ ಮೈಂದಾಳ, ಉಸ್ಮಾನ್ ಪರಪ್ಪು ಸೇರಿದಂತೆ ಮೃತರ ಬಂಧುಗಳು, ಸ್ನೇಹಿತರು ಹಾಗೂ ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.












Click it and Unblock the Notifications