ಶಿವಮೊಗ್ಗದಲ್ಲಿ ಗುಂಡು ತಗುಲಿ ಬಿಜೆಪಿ ಮುಖಂಡ ಕಾಂತರಾಜು ಸಾವು
ಶಿವಮೊಗ್ಗ, ಮಾರ್ಚ್ 26: ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಗುಂಡು ತಗುಲಿ ಬಿಜೆಪಿ ಮುಖಂಡ ಕಾಂತರಾಜು ಸಾವನ್ನಪ್ಪಿರುವ ಘಟನೆ ನಡೆದಿದೆ. ಅರಣ್ಯ ಪ್ರದೇಶದಲ್ಲಿ ಶಿಕಾರಿಗೆ ತೆರಳಿದ ಸಂದರ್ಭದಲ್ಲಿ ಗುಂಡು ತಗುಲಿ ಸಾವನ್ನಪ್ಪಿದರೆ ಎಂಬ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಶಿವಮೊಗ್ಗದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರೂ ಹಾಗೂ ಬಿಜೆಪಿ ಮುಖಂಡರೂ ಆಗಿದ್ದ ಮೇಲಿನಕೊಪ್ಪ ಕಾಂತರಾಜು(44)ರಿಗೆ ಶನಿವಾರ ಮಧ್ಯಾಹ್ನದ ವೇಳೆಗೆ ಗುಂಡು ತಗುಲಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು, ವಿಚಾರ ತಿಳಿಯುತ್ತಿದ್ದ ಹಾಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಆಸ್ಪತ್ರೆಗೆ ದೌಡಾಯಿಸಿದರು. ತೀರ್ಥಹಳ್ಳಿ ಜೆ.ಸಿ.ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ, ಅಂತಿಮ ದರ್ಶನ ಪಡೆದರು. ಅಧಿಕಾರಿಗಳು, ಬಿಜೆಪಿ ಮುಖಂಡರ ಜೊತೆಗೆ ಸಚಿವ ಆರಗ ಜ್ಞಾನೇಂದ್ರ ಅವರು ಚರ್ಚೆ ನಡೆಸಿದರು.

ಹೇಗಾಯ್ತು ಘಟನೆ?
ಬಂದೂಕಿನಿಂದ ಹಾರಿದ ಗುಂಡು ತಗುಲಿ ಕಾಂತರಾಜು ಗಂಭೀರವಾಗಿ ಗಾಯಗೊಂಡಿದ್ದರು. ಅಂಬುತೀರ್ಥ ರಸ್ತೆ ಬದಿಯ ಅರಣ್ಯ ಪ್ರದೇಶದಲ್ಲಿ ನೋವಿನಿಂದ ಕೂಗುತ್ತಿದ್ದರು. ಈ ವೇಳೆ ದಾರಿಯಲ್ಲಿ ಹೋಗುತ್ತಿದ್ದವರು ಕಾಂತರಾಜುರನ್ನು ಗಮನಿಸಿದ್ದಾರೆ. ಕೂಡಲೇ ಅವರನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ಸಾಗಿಸಲು ಮುಂದಾದರು. ಆದರೆ ಮಾರ್ಗ ಮಧ್ಯೆ ಕಾಂತರಾಜು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಕಾಂತರಾಜು:
ಮೇಲಿನಕೊಪ್ಪ ಕಾಂತರಾಜು ಅವರು ನೊಣಬೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿದ್ದರು. 2015 ರಿಂದ 18ರವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಕಾಂತರಾಜು ಅವರು ಅವಿವಾಹಿತರಾಗಿದ್ದು, ತಂದೆ ಮತ್ತು ತಮ್ಮನ ಜೊತೆಗೆ ವಾಸವಾಗಿದ್ದರು.

ಚರ್ಚೆಗೆ ಕಾರಣವಾಯ್ತು ಫೈರಿಂಗ್:
ಬಿಜೆಪಿ ಮುಖಂಡ ಕಾಂತರಾಜು ಅವರು ಗುಂಡೇಟಿಗೆ ಬಲಿಯಾಗಿರುವುದು ತೀರ್ಥಹಳ್ಳಿಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಶಿಕಾರಿಗೆ ಹೋಗಿದ್ದಾಗ ಘಟನೆ ಸಂಭವಿಸಿದೆಯೇ, ಆಕಸ್ಮಿಕವಾಗಿ ಹಾರಿದ ಗುಂಡು ಕಾಂತರಾಜು ಅವರಿಗೆ ತಗುಲಿತೆ, ದುರುದ್ದೇಶಪೂರ್ವಕವಾಗಿ ಯಾರಾದರೂ ಗುಂಡು ಹಾರಿಸಿದರಾ ಎಂಬ ಚರ್ಚೆ ಹುಟ್ಟುಹಾಕಿದೆ.












Click it and Unblock the Notifications