ಸಂದರ್ಶನ: ಶಿವಮೊಗ್ಗದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ
ಕರ್ನಾಟಕದ ರಂಗು ರಂಗಿನ ಕ್ಷೇತ್ರಗಳ ಪೈಕಿ ಒಂದೆನಿಸಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಜನ ಸಾಮಾನ್ಯರ ಪಕ್ಷದಿಂದ ಕೆ.ಜಿ. ಶ್ರೀಧರ್ ಕಣಕ್ಕಿಳಿದಿದ್ದಾರೆ. ಶ್ರೀಧರ್ ಅವರು ಚುನಾವಣಾ ರಾಜಕೀಯಕ್ಕೆ ಹೊಸಬರಾದರೂ ತುಂಗಾ ಮೂಲ ಉಳಿಸಿ ಹೋರಾಟ, ತುಂಗಭದ್ರಾ ಉಳಿಸಿ, ಕುದುರೆಮುಖ ಗಣಿಗಾರಿಕೆ ವಿರುದ್ಧ ಹೋರಾಟ ಸೇರಿದಂತೆ ಅನೇಕ ಹೋರಾಟಗಳ ಮೂಲಕ ಚಿರಪರಿಚಿತರು.
ರೈತ ಕುಟುಂಬದಿಂದ ಬಂದಿರುವ ಶ್ರೀಧರ್ ಅವರು ಪರಿಸರ ಸಂಬಂಧಿ ಹೋರಾಟದಲ್ಲಿ ಯಾವತ್ತಿಗೂ ಮುಂದು.ಮ್ಯಾಗ್ಸೆಸ್ಸೆ ಪುರಸ್ಕೃತ ಕೆ.ವಿ. ಸುಬ್ಬಣ್ಣ ಅವರ ಜತೆಗೂಡಿ 1998ರಲ್ಲಿ ಇವರು ಮಲೆನಾಡಿನಾದ್ಯಂತ ಹಬ್ಬುತ್ತಿರುವ ಮಾನೋಕಲ್ಚರ್ ಪ್ಲಾಂಟೇಷನ್ ವಿರುದ್ಧ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದರು.
ಸಮಾಜ ಪರಿವರ್ತನ ಸಮುದಾಯ ಸಂಸ್ಥೆಯ ಎಸ್.ಆರ್. ಹಿರೇಮಠ್ ಅವರ ಜತೆಗೂಡಿ ಮಲೆನಾಡು ಜಾಗೃತಿ ಸಮುದಾಯ ಹುಟ್ಟುಹಾಕಿದ್ದರು. ಮಲೆನಾಡು ಭಾಗದ ರೈತರಿಗೆ ನೆರವಾಗಲು ರೂಪುಗೊಂಡಿರುವ ಮಲೆನಾಡು ಕೃಷಿ ಆಂದೋಲನ ಸಮಿತಿಯ ಸಂಚಾಲಕರಾಗಿದ್ದಾರೆ. ಈಗ ಜನ ಸಾಮಾನ್ಯರ ಪ್ರತಿನಿಧಿಯಾಗಿ ಸಂಸತ್ ಪ್ರವೇಶ ಬಯಸಿದ್ದಾರೆ. ಚುನಾವಣಾ ಪ್ರಚಾರದ ನಡುವೆ ಶ್ರೀಧರ್ ಕಲ್ಲಹಳ್ಳ ಅವರು ಒನ್ ಒಂಡಿಯಾ ಪ್ರತಿನಿಧಿಗೆ ನೀಡಿದ ಸಂದರ್ಶನದ ವಿವರಗಳು ಇಲ್ಲಿದೆ...

ರಾಜಕೀಯಕ್ಕೆ ಬರಲು ಮುಖ್ಯ ಕಾರಣ?
1. ಸಮಾಜ ಸೇವೆ ರೈತ ಹೋರಾಟ ಅನುಭವವಿರುವ ನೀವು ರಾಜಕೀಯಕ್ಕೆ ಬರಲು ಮುಖ್ಯ ಕಾರಣ?
ಉ: ಎಲ್ಲಾ ಹೋರಾಟಕ್ಕೂ ಕೊನೆಗೆ ಒಂದು ಆಡಳಿತ ಆಧಾರ ಬೇಕಾಗುತ್ತದೆ. ಜನರ ಹಕ್ಕು ಕೇಳಲು ಆರ್ ಟಿಐ ಇದೆ. ಆದರೆ, ಎಲ್ಲಕ್ಕೂ ನ್ಯಾಯಾಲಯಕ್ಕೆ ಹೋಗಿ ಹೋರಾಟ ಮಾಡುವ ಸ್ಥಿತಿ ಬಂದರೆ ಎಲ್ಲವೂ ಭ್ರಮೆ ಎನಿಸುತ್ತದೆ. ನನ್ನ ಸಮಾಜಕ್ಕೆ ಹಿತವಾದ ತತ್ತ್ವ ಸಿದ್ಧಾಂತಗಳ ಮೇಲೆ ಜನರೇ ರೂಪಿಸಿರುವ ಪಕ್ಷವಾಗಿರುವುದರಿಂದ ರಾಜಕೀಯಕ್ಕೆ ಬರಬೇಕಿತ್ತು.

ನಿಮ್ಮ ಪ್ರಕಾರ ಪ್ರಚಾರ ಹೇಗೆ ಸಾಗಿದೆ?
2. ನಿಮ್ಮ ಪ್ರಕಾರ ಪ್ರಚಾರ ಹೇಗೆ ಸಾಗಿದೆ? ರೈತ ಹೋರಾಟಗಾರರನ್ನು ಜನ ಹೇಗೆ ಸ್ವಾಗತಿಸುತ್ತಿದ್ದಾರೆ?
ಉ: ಪಾರ್ಟಿ ತುಂಬಾ ಚಿಕ್ಕದಾಗಿರುವುದರಿಂದ, ಒಳ್ಳೆ ಚಿಂತಕರು, ಪ್ರಮಾಣಿಕರು, ಸಂಘಟಕರು, ಎಎಪಿ ಎದುರಿಸುತ್ತಿರುವ ಸಮಸ್ಯೆಗೆ ತಕ್ಕ ಉತ್ತರ ನೀಡುವವರು ಬೇಕಿದೆ. ಆಯೋಜಕರ ಅಗತ್ಯ ಪಕ್ಷಕ್ಕಂತೂ ಇದ್ದೇ ಇದೆ. ಜನರ ಪ್ರತಿಕ್ರಿಯೆ ಉತ್ತಮವಾಗಿದೆ. ನಮಗೆ ಸಮಯ ಕಡಿಮೆ ಇದೆ. ಕ್ಯಾಂಪೇನ್ ತಂತ್ರಗಾರಿಕೆ ರೂಪಿಸುವವರು ಕಡಿಮೆ ಇದ್ದಾರೆ.

ನಿಮ್ಮ ಸ್ಪರ್ಧೆ ಸಾಂಕೇತಿಕನಾ ಎಂದು?
3. ನಿಮ್ಮ ಸ್ಪರ್ಧೆ ಸಾಂಕೇತಿಕನಾ ಎಂದು?
ಉ: ರಾಜ್ಯ ಮಟ್ಟದ, ರಾಷ್ಟ್ರಮಟ್ಟದ ಪಕ್ಷಕ್ಕಿಂತ ಪ್ರತಿ ಊರಿನಲ್ಲೂ, ಪ್ರತಿ ಕೇರಿಯಲ್ಲೂ ಎಎಪಿಗೆ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಈಗ ಯಾವ ರಾಜಕೀಯ ಪಕ್ಷಕ್ಕೂ ನಿಜವಾದ ಅಭಿಮಾನಿಗಳು ಎಂದು ಇರುವುದಿಲ್ಲ.
ಸ್ಟಾರ್ ನ ಪತ್ನಿಯಾಗಿ ಅಪ್ಪನ ಹೆಸರು ಹೇಳಿಕೊಂಡು ಸ್ಪರ್ಧಿಸುವವರು, ಮಾಡದಿರುವ ಸಾಧನೆ ಹೇಳಿಕೊಂಡು ತಿರುಗುವವರು ಬೇಲ್ ಮೇಲೆ ಹೊರಗೆ ಬಂದು ಸ್ಪರ್ಧಿಸುವವರು ಸಾಂಕೇತಿಕ. ಎಎಪಿ ಅವರು ಮಾತ್ರ ನಿಜವಾದ ಅಭ್ಯರ್ಥಿಗಳು. ಜನರ ನಡುವೆ ಹೋರಾಟ ಮಾಡಿಕೊಂಡು ಜನರ ಪ್ರತಿನಿಧಿಯಾಗಲು ಬಯಸುವವನು ಸಾಂಕೇತಿಕ ಹೇಗಾಗುತ್ತಾನೆ.

ನಿಮಗೆ ಯಾರ ಬಲ ಇದೆ? ಸ್ಟಾರ್ ಪ್ರಚಾರಕರು ಬೇಡ್ವಾ?
4. ನಿಮ್ಮ ಎದುರಾಳಿಗಳು ಸ್ಟಾರ್ ಪ್ರಚಾರಕರು, ಹಣ ಬಲ, ಜಾತಿ ಬಲ ಬಳಸುತ್ತಿದ್ದಾರೆ ನಿಮಗೆ ಯಾರ ಬಲ ಇದೆ? ಸ್ಟಾರ್ ಪ್ರಚಾರಕರು ಬೇಡ್ವಾ?
ಉ: ಒಂದು ಒಳ್ಳೆ ವ್ಯವಸ್ಥೆ ಬೇಕು. ಎಲ್ಲರ ನಡುವೆ ಇರುವಂಥ ಅಭ್ಯರ್ಥಿ ಸಿಗಬೇಕು ಎಂಬ ಜನರ ಆಶಯವೇ ನನಗೆ ಬಲ. ಮಾಹಿತಿ, ತಿಳಿದುಕೊಂಡಿರುವರು, ಟಿವಿ ನೋಡಿ ಗೊತ್ತಿರುವವರನ್ನು ತಲುಪಲು ಸುಲಭವಾಗಿದೆ. ಬಡಜನರನ್ನು ರೈತರನ್ನು ತಲುಪಲು ಹೋರಾಟದ ಹಿನ್ನೆಲೆ ಸಹಾಯಕವಾಗಿದೆ. ರೈತ ಸಂಘದ ಶಾಮಣ್ಣ(ಕಡಿದಾಳು ಶಾಮಣ್ಣ) ಅವರೇ ಬೆಂಬಲಿಗರಾಗಿ ನಿಂತಿರುವುದರಿಂದ ಸ್ಲಮ್ ವಾಸಿಗಳು, ಪಟ್ಟಣದ ಬಡವರು, ಕೂಲಿ ಕಾರ್ಮಿಕರನ್ನು ನಾವು ತಲುಪಿದ್ದೇವೆ. ಸ್ಟಾರ್ ಪ್ರಚಾರಕರು ಇಲ್ಲದಿರುವುದು ಕೊರತೆ ಎಂದು ನನಗೆ ಅನ್ನಿಸುತ್ತಿಲ್ಲ.

ಅಸೆಂಬ್ಲಿಗೆ ಯಾಕೆ ಪ್ರಯತ್ನ ಪಡಲಿಲ್ಲ?
4. ಲೋಕಸಭೆಗೆ ಯಾಕೆ ಸ್ಪರ್ಧಿಸುತ್ತಿದ್ದೀರಿ? ಅಸೆಂಬ್ಲಿಗೆ ಯಾಕೆ ಪ್ರಯತ್ನ ಪಡಲಿಲ್ಲ?
ಉ : ನಾವು ಮಾತನಾಡುತ್ತಿರುವುದು ಸ್ಥಳೀಯ ಸಮಸ್ಯೆ ಬಗ್ಗೆ ಮಾತ್ರವಲ್ಲ. ವಿಕೇಂದ್ರಿಕರಣ ವ್ಯವಸ್ಥೆ ಬೇಕು ಎನ್ನುತ್ತಿರುವ ನಾವು ಇಡೀ ದೇಶಕ್ಕೆ ಅನ್ವಯವಾಗುತ್ತಿರುವ ವಿಷಯವನ್ನು ತೆಗೆದುಕೊಂಡು ಮುಂದಿನ ಹೆಜ್ಜೆ ಇಡುತ್ತಿದ್ದೇವೆ. ನಗರೀಕರಣ, ಪರಿಸರ, ನಗರಾಭಿವೃದ್ಧಿ, ನದಿಗಳ ಬಳಕೆ, ಭ್ರಷ್ಟಾಚಾರ ಇರ್ಲಿ ಎಲ್ಲವೂ ದೇಶಕ್ಕೆ ಸಂಬಂಧಪಟ್ಟ ವಿಷಯ. ಬಗರ್ ಹುಕಂ ಇಲ್ಲಿನ ಸಮಸ್ಯೆಯಾದರೂ ಇಡೀ ದೇಶದಲ್ಲೇ ಇದೆ. ಒತ್ತುವರಿಯಲ್ಲಿ ವ್ಯತ್ಯಾಸವಿದೆ. ನಗರದಲ್ಲಿ ರೆವಿನ್ಯೂ ಲ್ಯಾಂಡ್ ಒತ್ತುವರಿಯಾಗಿದೆ. ಕಾಡಿನಲ್ಲಿ ರೈತರು ಕೂಡಾ ಕೆಲ ಭೂಮಿಗಳನ್ನು ಆಕ್ರಮಿಸಿರುತ್ತಾರೆ. ಆದರೆ, ಕೃಷಿಕರನ್ನು ಅಕ್ರಮ ಒತ್ತುವರಿಗಾರರು ಎನ್ನಲಾಗುವುದಿಲ್ಲ.

ಕಸ್ತೂರಿ ರಂಗನ್ ವರದಿ ಬಗ್ಗೆ ನಿಮ್ಮ ಅಭಿಪ್ರಾಯ?
5. ಕಸ್ತೂರಿ ರಂಗನ್ ವರದಿ ಬಗ್ಗೆ ಕೇರಳದಲ್ಲಿ ಭಾರಿ ಚರ್ಚೆಯಾಗಿದೆ. ನಮ್ಮಲ್ಲಿ ಚರ್ಚೆ ನಡೆದಿದ್ಯಾ? ವರದಿ ಬಗ್ಗೆ ನಿಮ್ಮ ಅಭಿಪ್ರಾಯ?
ಉ: ಬಹುಶಃ ಕೇರಳಕ್ಕೆ ಇರುವ ಭೌಗೋಳಿಕ ವ್ಯಾಪ್ತಿ ಹಾಗೂ ಅಲ್ಲಿನ ಜನಸಂಖ್ಯೆ ಬೆಳೆಯುತ್ತಿರುವುದರಿಂದ ಮತ್ತ್ತು ಕಾಡಿನ ಮೇಲೆ ಹೆಚ್ಚಿನ ಅವಲಂಬನೆ ಹೊಂದಿರುವುದರಿಂದ ಅಲ್ಲಿ ಆತಂಕ ಹೆಚ್ಚಿರುವುದು ಸಹಜ. ನಮ್ಮಲ್ಲಿ ಅಷ್ಟು ಭಯಭೀತರಾಗಬೇಕಿಲ್ಲ.
ಈಗ ಒಂದು ಊರಿನ ಆರ್ಥಿಕ ವ್ಯವಸ್ಥೆ ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆ ಹಾಗೂ ಕಾಡಿನ ಮೇಲೆ ಅವಲಂಬನೆ ಇದ್ದರೆ ಅಲ್ಲಿ ಅದನ್ನು ಬ್ಯಾನ್ ಮಾಡುತ್ತಾರೆ ಎಂದರೆ ಹೆದರಬೇಕು. ನಮ್ಮಲ್ಲಿ ಅವಕಾಶಗಳು ಹೆಚ್ಚಿರುವುದರಿಂದ ಕೇರಳದಷ್ಟು ನಾವು ಭಯಭೀತರಾಗಿ ನೋಡಬೇಕಾಗಿಲ್ಲ.
ಕಸ್ತೂರಿ ರಂಗನ್ ವರದಿ ಪವಿತ್ರವಾಗಿದೆ. ಆದರೆ, ಜನರ ಪಾಲ್ಗೊಳ್ಳುವಿಕೆ ಬಗ್ಗೆ ಏನೂ ಇಲ್ಲ. ಮಾಧವ್ ಗಾಡ್ಗೀಳ್ ಸ್ವಾಗತಿಸಬಹುದು.

ಸೋತರೆ ಮುಂದಿನ ಯೋಜನೆ ಏನು?
6. ಚುನಾವಣೆಯಲ್ಲಿ ಗೆದ್ದರೆ ನಿಮ್ಮ ಮೊದಲ ಕೆಲಸ ಏನು? ಸೋತರೆ ಮುಂದಿನ ಯೋಜನೆ ಏನು?
ಉ: ಸೋಲು ಅಥವಾ ಗೆಲುವು ಮುಖ್ಯ ಅಲ್ಲ. ಸಮಾಜದಲ್ಲಿ ಬದಲಾವಣೆಯ ಹಾದಿಯನ್ನು ಎಎಪಿ ಈಗಾಗಲೇ ತೋರಿಸಿದೆ. ಜಿಲ್ಲೆಯ ಜನರ ನಾಡಿಮಿಡಿತ ಅರಿತು, ಅವರ ಶ್ರೇಯೋಭಿವೃದ್ಧಿಗೆ ದುಡಿಯುವವನೇ ನಿಜವಾದ ರಾಜಕಾರಣಿ. ಅಂಥ ಪ್ರಕ್ರಿಯೆಗೆ ನಾನು ಹಪಹಪಿಸುತ್ತಿದ್ದೇನೆ. ನನ್ನ ಕೃಷಿ ಹೋರಾಟ, ಪರಿಸರ, ಭ್ರಷ್ಟಾಚಾರ ವಿರೋಧಿ ಆಂದೋಲನ ನಿರಂತರವಾಗಿ ಮುಂದುವರೆಯಲಿದೆ.












Click it and Unblock the Notifications