ಎಸ್ಎಸ್ಎಲ್ಸಿಯಲ್ಲಿ 619 ಅಂಕ: ಅಂಧ ವಿದ್ಯಾರ್ಥಿಯ ಸಾಧನೆ
ಶಿವಮೊಗ್ಗ, ಮೇ 11: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 625ಕ್ಕೆ 619 ಅಂಕಗಳನ್ನು ಗಳಿಸಿರುವ ಶಿವಮೊಗ್ಗದ ಅಂಧ ವಿದ್ಯಾರ್ಥಿ ಅಭಿರಾಮ್ ಭಾಗವತ್ ಇತಿಹಾಸ ನಿರ್ಮಿಸಿದ್ದಾರೆ.
ರಾಜ್ಯದ ಎಸ್ಎಸ್ಎಲ್ಸಿ ಇತಿಹಾಸದಲ್ಲಿ ಸಂಪೂರ್ಣ ಅಂಧ ವಿದ್ಯಾರ್ಥಿಯೊಬ್ಬ ಇಷ್ಟು ಅಂಕ ಗಳಿಸಿರುವುದು ಇದೇ ಮೊದಲು.
ಶಿವಮೊಗ್ಗದ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ವಿದ್ಯಾರ್ಥಿಯಾಗಿರುವ ಅಭಿರಾಮ್, ಕೆ. ಗೋಪಾಲ ಭಾಗವತ್ ಮತ್ತು ಉಮಾ ಭಾಗವತ್ ಅವರ ಮಗ. ಹುಟ್ಟಿನಿಂದಲೇ ಅಂಧತ್ವದ ಸಮಸ್ಯೆಗೆ ಅಭಿರಾಮ್ ತುತ್ತಾಗಿದ್ದರು. ಮಗನಿಗೆ ದೃಷ್ಟಿ ಮರಳಿಸಬೇಕು ಎಂದು ಶತಪ್ರಯತ್ನ ನಡೆಸಿದ ಪೋಷಕರು ಅನೇಕ ಪ್ರತಿಷ್ಠಿತ ಆಸ್ಪತ್ರೆಗಳ ಮೆಟ್ಟಿಲೇರಿದರೂ ಪ್ರಯೋಜನವಾಗಿರಲಿಲ್ಲ.

ಶಿವಮೊಗ್ಗ ನಗರದ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ವಿದ್ಯಾರ್ಥಿಯಾದ ಅಭಿರಾಮ್ಗೆ ಅಂಧ್ವತ್ವ ಸವಾಲಾಗಲಿಲ್ಲ. ಹೊರಜಗತ್ತನ್ನು ಕಾಣುವ ಭಾಗ್ಯ ತನಗಿಲ್ಲ ಎಂಬ ನೋವನ್ನು ಮರೆತು ತಮ್ಮ ಒಳಗಣ್ಣಿನಿಂದಲೇ ದೃಷ್ಟಿಹಾಯಿಸುತ್ತಿರುವ ಅವರಿಗೆ ಮುಂದಿನ ತಮ್ಮೆದುರಿನ ಹಾದಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಓದಿನ ಜತೆಗೆ ಅಭಿರಾಮ್ಗೆ ಸಂಗೀತದಲ್ಲಿಯೂ ಆಸಕ್ತಿ. ಮೃದಂಗ, ಕೊಳಲು ಮತ್ತು ತಬಲ ನುಡಿಸುವುದರಲ್ಲಿ ಅಭಿರಾಮ್ ತಮ್ಮ ಚುರುಕುತನ ಪ್ರದರ್ಶಿಸಿದ್ದಾರೆ. ಕೊಳಲು ಜೂನಿಯರ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದು, ಈಗ ಸೀನಿಯರ್ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ.
ಸ್ವಾಮಿ ವಿವೇಕಾನಂದ ಅವರನ್ನು ತಮ್ಮ ಆದರ್ಶ ಎನ್ನುವ ಅಭಿರಾಮ್, ಐಎಎಸ್ ಮಾಡುವ ಕನಸು ಹೊತ್ತಿದ್ದಾರೆ.












Click it and Unblock the Notifications