ಭದ್ರಾವತಿ ಪೊಲೀಸರ ಭರ್ಜರಿ ಬೇಟೆ: 10 ಲಕ್ಷ ರೂ. ಅಧಿಕ ಮೌಲ್ಯದ ಆಭರಣ ವಶ
ಶಿವಮೊಗ್ಗ, ಅಕ್ಟೋಬರ್ 30: ಮಹತ್ವದ ಬೆಳವಣಿಗೆಯೊಂದರಲ್ಲಿ ಭದ್ರಾವತಿ ಗ್ರಾಮಾಂತರ ಪೊಲೀಸರು ನಡೆಸಿರುವ ಕಾರ್ಯಾಚರಣೆಯಲ್ಲಿ ಇಬ್ಬರು ಕಳ್ಳರನ್ನು ಬಂಧಿಸಲಾಗಿದ್ದು, 10 ಲಕ್ಷ ರೂ. ಅಧಿಕ ಮೊತ್ತದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ ಶಾಂತರಾಜು, ಭದ್ರಾವತಿಯಿಂದ ಹೊಳೆಹೊನ್ನೂರು ರಸ್ತೆಯ ಜಯನಗರ ಗ್ರಾಮಕ್ಕೆ ಹೋಗುವ ಬಸ್ ನಿಲ್ದಾಣದ ಬಳಿ ಮನೆ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ಚಿತ್ರದುರ್ಗ ಜಿಲ್ಲೆ ಹೊಸನಗರದ ಗಂಜಿಗೆರೆ ಗ್ರಾಮದ ಈರಪ್ಪ(61) ಹಾಗೂ ತಿಮ್ಮ(53) ಎನ್ನುವವರನ್ನು ಬಂಧಿಸಲಾಗಿದ್ದು, ಇವರಿಂದ 10,51,200 ರೂ. ಮೌಲ್ಯದ 219 ಗ್ರಾಂ ತೂಕದ ಬಂಗಾರದ ಒಡೆವೆಗಳು, 25,000 ರೂ. ಮೌಲ್ಯದ 425 ಗ್ರಾಂ ತೂಕದ ಬೆಳ್ಳಿ ಒಡವೆಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ವಹಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಎಎಸ್'ಪಿ ಎಚ್.ಟಿ ಶೇಖರ್ ಹಾಗೂ ಭದ್ರಾವತಿ ಡಿವೈಎಸ್'ಪಿ ಕೆ.ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ಭದ್ರಾವತಿ ಗ್ರಾಮಾಂತರ ವೃತ್ತ ನಿರೀಕ್ಷಕ ಮಂಜುನಾಥ್, ಪಿಎಸ್ಐ ದೇವರಾಜ್, ಪೇಪರ್ ಟೌನ್ ಠಾಣೆಯ ಪಿಎಸ್ಐ ಭಾರತಿ, ಎಎಸ್ಐ ದಿವಾಕರ ರಾವ್, ಗ್ರಾಮಾಂತರ ವೃತ್ತ ಸಿಬ್ಬಂದಿಗಳಾದ ಚನ್ನಕೇಶವ, ನಾಗರಾಜ, ಆದರ್ಶ ಶೆಟ್ಟಿ, ಚಿನ್ನನಾಯ್ಕ, ಹನುಮಂತ ಆವಟಿ, ಉದಯ್ ಕುಮಾರ್, ಮೋಹನ್, ನಾಗೇಶ್, ಗಿರೀಶ್ ನಾಯ್ಕ, ಎ.ಎಚ್.ಸಿ ರಾಜಣ್ಣ, ಎ.ಎಚ್.ಸಿ ಪ್ರಭು ಕಾರ್ಯಾಚರಣೆಯಲ್ಲಿ ಇದ್ದರು.












Click it and Unblock the Notifications