ರಾಮನಗರದಲ್ಲಿ ಇಂದು ಚಾಮುಂಡೇಶ್ವರಿ ಕರಗ: ಸಿಎಂ ಆಗೇ ಇಲ್ಲಿಗೆ ಬರುತ್ತಾರಾ ಕುಮಾರಸ್ವಾಮಿ?
ರಾಮನಗರ, ಜುಲೈ 23: ಒಂದು ಕಡೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಗೆ ಇಂದು ಸದನದಲ್ಲಿ ನಿರ್ಣಾಯಕ ದಿನ. ಮತೊಂದು ಕಡೆ ಅವರ ಕರ್ಮ ಭೂಮಿ ರಾಮನಗರದಲ್ಲಿ ಆರಾಧ್ಯ ದೈವ ಚಾಮುಂಡೇಶ್ವರಿ ಕರಗ ಮಹೋತ್ಸವ.
ಪ್ರತಿ ಬಾರಿ ಈ ಉತ್ಸವದಲ್ಲಿ ಚಾಮುಂಡಿ ದೇವಿಗೆ ಕುಮಾರಸ್ವಾಮಿ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ ಇಂದು ಅವರು ಸಿಎಂ ಸ್ಥಾನ ಉಳಿಸಿಕೊಂಡು ಬಂದು ಪೂಜೆ ಸಲ್ಲಿಸುತ್ತಾರಾ ಅಥವಾ ತಮ್ಮ ಸ್ಥಾನ ಕಳೆದುಕೊಂಡು ಮಾಜಿ ಸಿಎಂ ಆಗಿ ಬಂದು ಪೂಜೆ ಸಲ್ಲಿಸುತ್ತಾರಾ ಎನ್ನುವುದು ರಾಮನಗರದ ಜನತೆಯ ಮುಂದಿರುವ ಪ್ರಶ್ನೆಯಾಗಿದೆ.
ಯಾವುದೇ ಕೆಲಸ ಪ್ರಾರಂಭಿಸುವ ಮೊದಲು ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ನಂತರ ಮುಂದುವರಿಸುವುದು ಎಚ್ಡಿಕೆ ರೂಢಿ. ಹಾಗಾಗಿ ದೇವಿ ಕುಮಾರಸ್ವಾಮಿ ಅವರನ್ನು ಕೈ ಹಿಡಿದು, ವಿಶ್ವಾಸ ಮತ ಗೆದ್ದು ಸಿಎಂ ಸ್ಥಾನ ಉಳಿಸಿಕೊಂಡು ಬಂದು ಕರಗದಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುತ್ತಾರೆ ಎಂಬ ವಿಶ್ವಾಸ ಇಲ್ಲಿನ ಅಭಿಮಾನಿಗಳದ್ದು.

ಎಚ್ಡಿಕೆ ತಮ್ಮ ಸ್ಥಾನ ಉಳಿಸಿಕೊಳ್ಳುತ್ತಾರೆ ಅನ್ನುವ ವಿಶ್ವಾಸದಲ್ಲೇ ಹಬ್ಬಕ್ಕೆ ಶುಭಾಶಯ ಕೋರಿ ಹಾಕಲಾಗಿರುವ ಫ್ಲೆಕ್ಸ್ ಗಳಲ್ಲೂ ಮಾನ್ಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಂದೇ ಪ್ರಿಂಟ್ ಹಾಕಿಸಿದ್ದಾರೆ. ಇನ್ನು ಕೆಲ ಮುಖಂಡರು, ಸಿಎಂ ವಿಶ್ವಾಸ ಮತದಲ್ಲಿ ಗೆಲ್ಲುತ್ತಾರೋ ಸೋಲುತ್ತಾರೋ ಎಂಬ ಗೊಂದಲದಿಂದಾಗಿ, ಮುಜುಗರದಿಂದ ತಪ್ಪಿಸಿಕೊಳ್ಳಲು ಸನ್ಮಾನ್ಯ ಶ್ರೀ ಎಂದಷ್ಟೇ ಪ್ರಿಂಟ್ ಹಾಕಿಸಿದ್ದಾರೆ.
ಕುಮಾರಸ್ವಾಮಿ ರಾಮನಗರ ಕ್ಷೇತ್ರಕ್ಕೆ ಕಾಲಿಟ್ಟ ದಿನದಿಂದ ಪ್ರತಿ ಚುನಾವಾಣೆಯಲ್ಲಿ ನಗರದ ಅಧಿ ದೇವತೆ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದ ನಂತರವೇ ನಾಮಪತ್ರ ಸಲ್ಲಿಸುವುದು ವಾಡಿಕೆ. ಅಷ್ಟೇ ಅಲ್ಲದೇ ಪ್ರತಿ ವರ್ಷ ಚಾಮುಂಡೇಶ್ವರಿ ಕರಗಕ್ಕೆ ತಪ್ಪದೆ ಪೂಜೆ ಸಲ್ಲಿಸಿ ನಂತರ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ಜನರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು. ಆದರೆ ಪರಿಸ್ಥಿತಿ ಈ ಬಾರಿ ಬೇರೆಯದ್ದೇ ಇದೆ.
ಸರ್ಕಾರ ಉಳಿಸಿಕೊಳ್ಳಲು ಹರ ಸಾಹಸಪಡುತ್ತಿರುವ ಸಿಎಂ ಕುಮಾರಸ್ವಾಮಿ ಅವರ ಇಂದಿನ ಪರಿಸ್ಥಿತಿ ಕುರಿತೇ ರಾಮನಗರ ಜಿಲ್ಲೆಯ ಜನರೂ ಕಣ್ಣು ನೆಟ್ಟಿದ್ದಾರೆ.












Click it and Unblock the Notifications