UPSC Result 2022: ರಾಮನಗರ ಜಿಲ್ಲೆಯಲ್ಲಿ ಬಡಕುಟುಂಬದ ಇಬ್ಬರು ಶ್ರೀಮಂತ ಪ್ರತಿಭೆಗಳ ಅದ್ಭುತ ಸಾಧನೆ
ರಾಮನಗರ, ಮೇ, 24: 2022ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು. ಜಿಲ್ಲೆಯ ಇಬ್ಬರು ರೈತ ಮಕ್ಕಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ದಿನಕ್ಕೆ ಹತ್ತು ಗಂಟೆಗೂ ಹೆಚ್ಚಿನ ಸಮಯ ವ್ಯಾಸಂಗ ಮಾಡಿ ಸತತ ಪರಿಶ್ರಮದಿಂದ ಯುಪಿಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಬಡ ಕುಟುಂಬದ ಈ ಶ್ರೀಮಂತ ಪ್ರತಿಭೆಗಳು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಜಿಲ್ಲೆಯ ನೂತನ ತಾಲೂಕು ಆರೋಹಳ್ಳಿಯ ದೊಡ್ಡಬಾದಿಗೆರೆ ಗ್ರಾಮದ ಚಲುವರಾಜು ಯುಪಿಎಸ್ಸಿ ಪರೀಕ್ಷೇಯಲ್ಲಿ 238ನೇ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇನ್ನು ಬೊಂಬೆನಾಡು ಖ್ಯಾತಿಯ ಚನ್ನಪಟ್ಟಣ ತಾಲೂಕಿನ ಮಳೂರುಪಟ್ಟಣ ಗ್ರಾಮದ ಯುವತಿ ದಾಮಿನಿ ಎಂ.ದಾಸ್ 345ನೇ ಶ್ರೇಣಿಯಲ್ಲಿ ತೇರ್ಗಡೆ ಆಗುವ ಮೂಲಕ ಜಿಲ್ಲೆ ಹಾಗೂ ತಮ್ಮ ಹುಟ್ಟೂರಿಗೆ ಕೀರ್ತಿ ತಂದಿದ್ದಾರೆ.

ಸರ್ಕಾರಿ ಶಾಲೆಯ ವಿದ್ಯಾರ್ಥಿ ಯುಪಿಎಸ್ಸಿ ಪಾಸ್
ಆರೋಹಳ್ಳಿಯ ದೊಡ್ಡಬಾಧಿಗೆರೆ ಗ್ರಾಮದ ರೈತ ಕುಟುಂಬದ ಬಸವರಾಜು ತನ್ನ ಪ್ರಾಥಮಿಕ ವಿದ್ಯಾಭ್ಯಾಸ ಹಾಗೂ ಪಿಯು ವ್ಯಾಸಂಗವನ್ನು ಸರ್ಕಾರಿ ಶಾಲೆ, ಕಾಲೇಜಿನಲ್ಲಿ ಮುಗಿಸಿದ್ದು ವಿಶೇಷವಾಗಿದೆ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಚಲುವರಾಜು ತನ್ನ 3ನೇ ಪ್ರಯತ್ನದಲ್ಲಿ ಯುಪಿಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸಾಧನೆ ಮಾಡಿದ್ದಾರೆ. ಹೀಗೆ ನಿರಂತರ ಪರಿಶ್ರಮದಿಂದ ಸಾಧನೆ ಮಾಡಿದ ಚುಲುವರಾಜು ಮನೆ ಹಾಗೂ ದೊಡ್ಡಬಾದಿಗೆರೆ ಗ್ರಾಮದಲ್ಲಿ ಸಂತಸ ಮನೆ ಮಾಡಿದೆ.
ಇನ್ನು ಯುಪಿಎಸ್ಸಿ ಪರೀಕ್ಷೆಯಲ್ಲಿ 238ನೇ ಶ್ರೇಣಿ ಪಡೆದು ಸಂತಸ ಹಂಚಿಕೊಂಡ ಚಲುವರಾಜು, ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗಿಂತ ಯುಪಿಎಸ್ಸಿ ಪರೀಕ್ಷೆಗೆ ಹೆಚ್ವಿನ ಸಮಯ ಮೀಸಲಿಡಬೇಕು. ನಾನು ದಿನದ 10 ಗಂಟೆಗೂ ಹೆಚ್ಚು ಕಾಲ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದೆ. ಹಾಗೆಯೆ ಹೆಚ್ಚು ಗಂಟೆ ಓದುವುದರ ಜೊತೆಗೆ ಗುಣಾತ್ಮಕ ವ್ಯಾಸಂಗ ಮಾಡಬೇಕು ಎಂದರು.
ಹಾಗೂ ಯುಪಿಎಸ್ಸಿಗೆ ಕೋಚಿಂಗ್ ಕೊಟ್ಟ ಡಾ.ರಾಜ್ಕುಮಾರ್ ಅಕಾಡಮಿಯ ಮಾರ್ಗದರ್ಶಿಗಳಿಗೆ ಧನ್ಯವಾದ ತಿಳಿಸಿದ ಚಲುವರಾಜು, ಮುಂದೆ ಸರ್ಕಾರಿ ಸೇವೆಯಲ್ಲಿ ಉತ್ತಮ ಕರ್ತವ್ಯದ ಮೂಲಕ ದೇಶಕ್ಕೆ ಕೊಡಗೆ ನೀಡುವ ಬಯಕೆಯನ್ನು ವ್ಯಕ್ತಪಡಿಸಿದರು.
ಆನ್ಲೈನ್ ಕೋಚಿಂಗ್ ಪಡೆದು ಗೆದ್ದ ದಾಮಿನಿ
ಬೊಂಬೆನಾಡು ಚನ್ನಪಟ್ಟಣಕ್ಕೆ ಕೀರ್ತಿ ತಂದ ಧಾಮಿನಿ ಎಂ.ದಾಸ್ ಯಾವುದೇ ಕೋಚಿಂಗ್ ಸೆಂಟರ್ಗೆ ತೆರಳದೆ ಕೇವಲ ಆನ್ಲೈನ್ ಕೋಚಿಂಗ್ ಮೂಲಕ ಯುಪಿಎಸ್ಸಿ ಪರೀಕ್ಷೆಯಲ್ಲಿ 345ನೇ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಧಾಮಿನಿ ಎಂ.ದಾಸ್ ಅವರಯ 2ನೇ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯನ್ನು ಪಾಸ್ ಮಾಡಿಕೊಂಡಿದ್ದಾರೆ.
ಧಾಮಿನಿ ಕೂಡ ರೈತ ಕುಟುಂಬ ಹೆಣ್ಣು ಮಗಳಾಗಿದ್ದು, ಅವರ ಮನೆಯಲ್ಲಿ ಇದೀಗ ಸಂಭ್ರಮ ಮನೆ ಮಾಡಿದೆ. ಅಲ್ಲದೆ ತಾಲೂಕು ಹಾಗೂ ತನ್ನ ಗ್ರಾಮ ಮಳೂರುಪಟ್ಟಣ ಗ್ರಾಮಕ್ಕೆ ಧಾಮಿನಿ ಕೀರ್ತಿ ತಂದಿದ್ದಾರೆ. ಸಾಧಿಸುವ ಛಲ ಒಂದಿದ್ದರೆ ಎಂತಹದೇ ಅಡ್ಡಿ ಇದ್ದರೂ ಅವುಗಳನ್ನು ಮೆಟ್ಟಿ ಸಾಧನೆ ಮಾಡಬಹುದು ಎನ್ನುವುದಕ್ಕೆ ಧಾಮಿನಿ ಶ್ರಮವೇ ಕಾರಣವಾಗಿದೆ.
ಹಾಗೆಯೆ ಧಾಮಿನಿ ಇದೇ ವೇಳೆ ತನ್ನ ಸಾಧನೆಗೆ ಬೆನ್ನಲುಬಾಗಿ ನಿಂತ ದೊಡ್ಡಪ್ಪ, ದೊಡ್ಡಮ್ಮ, ಆನ್ಲೈನ್ ಇನ್ಸೈಡ್ಸ್ ಕೊಂಚಿಂಗ್ ಹಾಗೂ ಎಲ್ಲಾ ಶಿಕ್ಷಕರಿಗೆ ಧನ್ಯವಾದ ತಿಳಿಸಿದರು. ಯುಪಿಎಸ್ಸಿ ಪರೀಕ್ಷೆಯನ್ನು ಸಾವಿರಾರು ಮಂದಿ ಬರೆಯುತ್ತಾರೆ. ಅದರೆ ಪಾಸ್ ಆಗುವುದು ಕೆಲವೇ ಮಂದಿ. ಒಂದು ಬಾರಿ ಪೇಲ್ ಆದರೂ ಧೃತಿಗೆಡದೆ ಮತ್ತೆ ಮತ್ತೆ ಪ್ರಯತ್ನ ಪಟ್ಟರೆ ಗೆಲುವು ಸಿಗುತ್ತದೆ ಎನ್ನುತ್ತಾರೆ ಧಾಮಿನಿ.
ದಾಮಿನಿ ಎಂ.ದಾಸ್ ಅವರು ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ಪದವಿ ಪಡೆದಿದ್ದು, ಇವರು ದಿನಕ್ಕೆ 10 ಗಂಟೆಗಳ ಕಠಿಣ ಪರಿಶ್ರಮದ ಮೂಲಕ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಆಗಿದ್ದಾರೆ. 345ನೇ ಶ್ರೇಣಿ ಪಡೆದು ಸಾಧನೆ ಮಾಡಿರುವ ಧಾಮಿನಿ ಎಂ.ದಾಸ್, ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರಿ ಸೇವೆ ಸಲ್ಲಿಸುವ ಆಕಾಂಕ್ಷೆ ವ್ಯಕ್ತಪಡಿಸಿದರು.
ಇನ್ನು ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ ತಂದೆ ಮೋಹನ್ ದಾಸ್, ಇಡೀ ರಾಜ್ಯವೇ ಖುಷಿ ಪಡುವ ಸಾಧನೆಯನ್ನು ನನ್ನ ಮಗಳು ಮಾಡಿದ್ದಾಳೆ. ಇದರಿಂದ ತಂದೆಯಾಗಿರುವ ನನಗೆ ತುಂಬಾ ಖುಷಿ ಆಗುತ್ತಿದೆ. ನನ್ನ ಮಗಳ ಪ್ರಯತ್ನಕ್ಕೆ ಭಗವಂತ ನಿಜವಾಗಿಯೂ ಪ್ರತಿಫಲವನ್ನು ನೀಡಿದ್ದಾನೆ. ಚನ್ನಪಟ್ಟಣ ತಾಲೂಕು ಪ್ರತಿನಿಧಿಸಿ ಈ ಸಾಧನೆಯನ್ನು ಮಗಳು ಮಾಡಿರುವುದು ತುಂಬಾ ಖುಷಿ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.












Click it and Unblock the Notifications