ಮಷ್ಕರ; ಮತ್ತೆ ಟೊಯೋಟಾದ 5 ಕಾರ್ಮಿಕರು ಅಮಾನತು
ರಾಮನಗರ, ಡಿಸೆಂಬರ್ 23: ಏಷ್ಯಾದ ಅತಿ ದೊಡ್ಡ ಕಾರು ತಯಾರಕ ಕಂಪನಿ ಟೊಯೋಟಾ ಕಿರ್ಲೋಸ್ಕರ್ ಮತ್ತು ಕಾರ್ಮಿಕರ ನಡುವಿನ ತಿಕ್ಕಾಟ ಮುಂದುವರೆದಿದೆ. ಕಾರ್ಮಿಕರು ಕಂಪನಿ ವಿರುದ್ಧ ನಡೆಸುತ್ತಿರುವ ಮುಷ್ಕರ 45ನೇ ದಿನಕ್ಕೆ ಕಾಲಿಟ್ಟಿದೆ.
ಮುಷ್ಕರ ಆರಂಭವಾದ ನಂತರ ಮೂರನೇ ಬಾರಿಗೆ 5 ಮಂದಿ ಕಾರ್ಮಿಕರನ್ನು ಅಮಾನತು ಮಾಡಿ ಟೊಯೋಟಾ ಕಂಪನಿಯ ಆಡಳಿತ ಮಂಡಳಿ ಮಾನವ ಸಂಪನ್ಮೂಲ ವಿಭಾಗದ ಜನರಲ್ ಮ್ಯಾನೇಜರ್ ಶ್ರೀನಿವಾಸ್ ಪಿ. ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದ್ದು, ದುರ್ನಡತೆ ಮತ್ತು ಅಶಿಸ್ತು ಬಗ್ಗೆ ಪ್ರಾಥಮಿಕ ಪುರಾವೆಗಳು ಲಭಿಸಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಪ್ರಕಟಣೆ ತಿಳಿಸಿದೆ. ನವೆಂಬರ್ 6 ರಂದು ಒಬ್ಬರು, ನ.12 ರಂದು 39, ಡಿಸೆಂಬರ್ 7 ರಂದು 20 ಮಂದಿ ಹಾಗೂ ಡಿ.22 ರಂದು 5 ಮಂದಿ ಕಾರ್ಮಿಕರನ್ನು ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತ್ತು ಮಾಡಲಾಗಿತ್ತು.

ಕಳೆದ 45 ದಿನಗಳಿಂದ ಕಾರ್ಖಾನೆಯ ಅಡಳಿತ ಮಂಡಳಿಯ ವಿರುದ್ಧ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದಾರೆ. ಕಾರ್ಮಿಕರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಹಿನ್ನಲೆಯಲ್ಲಿ ಶಿಸ್ತು ಮತ್ತು ಸೇವಾನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಇಲ್ಲಿಯವರೆಗೆ 65 ಮಂದಿ ಕಾರ್ಮಿಕರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಕಾರ್ಮಿಕರು ಅಕ್ರಮ ಮುಷ್ಕರ ಸಮಯದಲ್ಲಿ ಕೆಲಸಕ್ಕೆ ಹಾಜರಾಗಲು ಬಂದ ಇತರೆ ತಂಡದ ಸದಸ್ಯರನ್ನು ತಡೆಯುವುದು, ಕಾರ್ಮಿಕರ ಮನೆಗೆ ತೆರಳಿ ಬೆದರಿಕೆ ಹಾಕುವುದು, ಕಂಪನಿಯ ಪ್ರವೇಶ ದ್ವಾರದಲ್ಲಿ ಕಾರ್ಮಿಕರನ್ನು ತಡೆದು ಬೆದರಿಕೆ ಹಾಕುವ ಮೂಲಕ ಭಯದ ವಾತವಾರಣ ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಕಂಪನಿ ಮತ್ತು ಕಂಪನಿಯ ಅಧಿಕಾರಿಗಳನ್ನು ಸಾರ್ವಜನಿಕವಾಗಿ ನಿಂದಿಸುವುದು ಮತ್ತು ಸುದ್ದಿ ಮಾಧ್ಯಮಗಳು ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಕಂಪನಿಯ ಖ್ಯಾತಿಯನ್ನು ಹಾಳು ಮಾಡತ್ತಿದ್ದಾರೆ ಎಂದು ಕಾರ್ಮಿಕರ ವಿರುದ್ದ ಕಂಪನಿ ಆರೋಪಗಳನ್ನು ಮಾಡಿದೆ.
ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತು ಗೊಳಿಸಿದರುವುದು ಶಿಕ್ಷೆಯಲ್ಲ. ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ ಎಂಬರ್ಥವೂ ಅಲ್ಲ ಮುಕ್ತ ವಿಚಾರಣೆ ನಡೆಯಲಿ ಎಂಬ ಕಾರಣಕ್ಕೆ ಅಮಾನತಿನಲ್ಲಿ ಇಡಲಾಗಿದೆ. ಕಾನೂನು ಪ್ರಕಾರ ಈ ಕಾರ್ಮಿಕರಿಗೆ ಸಲ್ಲಬೇಕಾದ ಸವಲತ್ತು ಸಿಗಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.












Click it and Unblock the Notifications