ದಶಪಥ ಹೆದ್ದಾರಿಯಲ್ಲಿ ಅಕ್ರಮ ಗೋ ಸಾಗಾಣಿಕೆ : ಸರ್ಕಾರೇತರ ಸಂಸ್ಥೆಯಿಂದ 24 ಜಾನುವಾರುಗಳ ರಕ್ಷಣೆ
ರಾಮನಗರ, ಡಿಸೆಂಬರ್ 30: ಹೊರ ರಾಜ್ಯದ ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಕ್ಯಾಂಟರ್ ವಾಹನ ತಡೆದು ಸುಮಾರು 24 ಜಾನುವಾರುಗಳನ್ನು ಗೋ ರಕ್ಷಕರ ತಂಡ ಪೊಲೀಸರ ಸಹಕಾರದಿಂದ ರಕ್ಷಣೆ ಮಾಡಿರುವ ಘಟನೆ ಚನ್ನಪಟ್ಟಣ ಬಳಿ ಬೆಂಗಳೂರು - ಮೈಸೂರು ದಶಪಥ ಹೆದ್ದಾರಿಯಲ್ಲಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ಪೊಲೀಸರ ಸಹಕಾರದಿಂದ ದಾಳಿ ನಡೆಸಿದ ಗೋ ಸಂರಕ್ಷಣಾ ಸ್ವಯಂ ಸೇವಕರು, ಮೈಸೂರು ಕಡೆಯಿಂದ ಕೇರಳದ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ಅನ್ನು ಸಂಕಲಗೆರೆ ಗೇಟ್ನಿಂದ ಹಿಂಬಾಲಿಸಿ ಬೈರಾಪಟ್ಟಣ ಗ್ರಾಮದ ಬಳಿ ತಡೆದು 24 ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ.
ಗೋ ಗ್ಯಾನ್ ಫೌಂಡೇಷನ್ ಹೆಸರಿನ ಸರ್ಕಾರೇತರ ಸಂಸ್ಥೆಯೊಂದಿಗೆ ಗೋರಕ್ಷಣೆಯ ವಿಷಯವಾಗಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿರುವ ಅಜಾದ್ ಬ್ರಿಗೇಡ್ ಸಂಘಟನೆಯ ಸದಸ್ಯರು KA-01, AB-5107 ನೋಂದಣಿ ಸಂಖ್ಯೆಯ ವಾಹನವನ್ನು ತಡೆದು, ಮಿಸುಕಾಡಲು ಅವಕಾಶವಾಗದಂತೆ ಬಿಗಿಯಾಗಿ ಕಟ್ಟಲಾಗಿದ್ದ ಒಟ್ಟು 24 ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ ಅಕ್ರಮ ಗೋ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಸಹಿತ ವಾಹನವನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ಠಾಣೆಗೆ ಹಸ್ತಾಂತರ ಮಾಡಿದ್ದಾರೆ.

ಸರ್ಕಾರೇತರ ಸಂಸ್ಥೆಯಿಂದ 24 ಜಾನುವಾರುಗಳ ರಕ್ಷಣೆ
ಮೈಸೂರು ಮೂಲದ ಶಬಾಜ್ ಪಾಷ, ಮಂಡ್ಯ ಮೂಲದ ಬಲರಾಮ ಹಾಗೂ ಸ್ಥಳದಿಂದ ಪರಾರಿಯಾಗಿರುವ ಸಮೀರ್ ವಿರುದ್ಧ ಗೋ ಸಂರಕ್ಷಣಾ ಕಾಯಿದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ಅಜಾದ್ ಬ್ರಿಗೇಡ್ ಸಂಘಟನೆ ಸುರೇಶ್" ಅಕ್ರಮವಾಗಿ ಜಾನುವಾರುಗಳನ್ನು ತುಂಬಿಕೊಂಡು ಕಟಾವು ಮಾಡಲು ಚನ್ನಪಟ್ಟಣ ಮಾರ್ಗವಾಗಿ ಕಸಾಯಿ ಖಾನೆಗೆ ಸಾಗಾಣಿಕೆ ಮಾಡುತ್ತಿದ್ದಾರೆಂದು ಮಾಹಿತಿಯ ಹಿನ್ನಲೆಯಲ್ಲಿ ಪೊಲೀಸರ ಸಹಕಾರ ಪಡೆದು ಕ್ಯಾಂಟರ್ ಹಿಂಬಾಲಿಸಿ ಅಡ್ಡಗಟಿ ಪರಿಶೀಲನೆ ನಡೆಸಿದ್ದೇವೆ. ಈ ಸಮಯದಲ್ಲಿ ಒರ್ವ ಪರಾರಿಯಾಗಿದ್ದ ಉಳಿದ ಇನ್ನಿಬ್ಬರು ಆರೋಪಿಗಳನ್ನು ವಿಚಾರಿಸಿದಾಗ ಜಾನುವಾರುಗಳನ್ನು ಕಟಾವು ಮಾಡಲ ಕೇರಳದ ಕಸಾಯಿ ಖಾನೆಗೆ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ಬಾಯ್ಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಇಬ್ಬರು ಪೊಲೀಸರು ಜಾನುವಾರು ಸಾಗಣೆಯನ್ನು ತಡೆಯುವುದು ಹೇಗೆ
ಇನ್ನು ಆಜಾದ್ ಬ್ರಿಗೇಡ್ ಸದಸ್ಯ ಗಜೇಂದ್ರ ಸಿಂಗ್ ಘಟನೆಯ ಬಗ್ಗೆ ಮಾತನಾಡಿದ್ದು," ಜಿಲ್ಲೆಯಲ್ಲಿ ಗೋ ಸಂರಕ್ಷಣಾ ಕಾಯಿದೆ ಅನುಷ್ಠಾನ ಮಾಡುವಲ್ಲಿ ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು. ಜಾನುವಾರು ಕಳ್ಳಸಾಗಣೆಯಾಗುತ್ತಿದೆ ಎಂದು ಪೋಲಿಸರಿಗೆ ಮಾಹಿತಿ ನೀಡಿದರೆ 112 ವಾಹನದಲ್ಲಿ ನಿವೃತ್ತಿ ಅಂಚಿನಲ್ಲಿರುವ ಓರ್ವ ಎಎಸ್ಐ ಹಾಗೂ ಓರ್ವ ಹೋಂ ಗಾರ್ಡ್ ನಮ್ಮ ಸಹಾಯಕ್ಕೆ ಕಳಿಸಿದ್ದಾರೆ. ಕೇವಲ ಇಬ್ಬರು ಪೊಲೀಸರು ಅಕ್ರಮ ಜಾನುವಾರು ಸಾಗಣೆಯನ್ನು ತಡೆಯುವುದು ಹೇಗೆ ಎಂದು ಪ್ರಶ್ನಿಸಿದರು.

ಗೋ ರಕ್ಷಕರ ಮೇಲೆ ಹಲ್ಲೆ ನಡೆಸುವ ಸಂಭವ ಹೆಚ್ಚಿದೆ
ಒಂದು ಟ್ರಕ್ನಲ್ಲಿ ಜಾನುವಾರು ಸಾಗಿಸುತ್ತಿದ್ದರೆ ಅದಕ್ಕೆ ಎರಡು ಕಾರುಗಳಲ್ಲಿ ಗೋ ಖದೀಮರ ತಂಡ ಬೆಂಗಾವಲು ನೀಡುತ್ತಾರೆ. ಗೋ ರಕ್ಷಕರು ಅನುಮಾನ ಬಂದು ವಾಹನ ತಡೆಯಲು ಮುಂದಾದರೆ ಅವರ ಮೇಲೆ ಹಲ್ಲೆ ಮಾಡುವ ಸಂಭವ ಹೆಚ್ಚಾಗಿದೆ. ಈಗಾಗಲೇ ಕೆಲ ದಿನಗಳ ಹಿಂದೆ ಚನ್ನಪಟ್ಟಣದಲ್ಲಿ ಕಸಾಯಿಖಾನೆ ಪರಿಶೀಲನೆ ಮುಂದಾಗಿದ್ದ ಗೋ ರಕ್ಷಕರ ಮೇಲೆ ಅನ್ಯಕೋಮಿನ ತಂಡ ಪೊಲೀಸರ ಸಮ್ಮುಖದಲ್ಲೇ ಗಂಭೀರವಾಗಿ ಹಲ್ಲೆ ಮಾಡಿರುವ ಪ್ರಕರಣ ನಡೆದಿದೆ. ಇನ್ನಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಗಜೇಂದ್ರ ಸಿಂಗ್ ಆರೋಪಿಸಿದರು.

ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳುವಂತೆ ಮನವಿ
ದಶಪಥ ಎಕ್ಸ್ಪ್ರೆಸ್ ಹೆದ್ದಾರಿ ಅಕ್ರಮ ಜಾನುವಾರು ಸಾಗಣಿಕೆಯ ರಹದಾರಿಯಾಗಿದೆ. ದಶಪಥ ಹೆದ್ದಾರಿಯಲ್ಲಿ ಯಾವುದೇ ವಾಹನಗಳ ತಪಾಸಣಾ ಕೇಂದ್ರ ಇಲ್ಲದಿರುವುದು ಹಾಗೂ ಯಾವುದೇ ವಾಹನಗಳನ್ನು ತಪಾಸಣೆ ಮಾಡದ ಹಿನ್ನಲೆಯಲ್ಲಿ ಖದೀಮರು ಹೊರ ರಾಜ್ಯದ ಕಸಾಯಿಖಾನೆಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಈ ಬಗ್ಗೆ ಗಮನಹರಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯವಾಗಿದೆ.












Click it and Unblock the Notifications