"ಅಪ್ಪ ಬೇಕು" ಎನ್ನುತ್ತಲೇ ತಂದೆ ಚಿತೆಗೆ ಅಗ್ನಿಸ್ಪರ್ಶ ಮಾಡಿದ ರಮೇಶ್ ಮಗ
ರಾಮನಗರ, ಅಕ್ಟೋಬರ್ 13: ಮಾಜಿ ಡಿಸಿಎಂ- ಕಾಂಗ್ರೆಸ್ ನಾಯಕ ಡಾ. ಜಿ. ಪರಮೇಶ್ವರ ಅವರ ಆಪ್ತ, ಆದಾಯ ತೆರಿಗೆ ಅಧಿಕಾರಿಗಳ ದಾಳಿಗೆ ಹೆದರಿ ನೇಣಿಗೆ ಶರಣಾದ ರಮೇಶ್ ಅಂತ್ಯಸಂಸ್ಕಾರ ಭಾನುವಾರ ಸ್ವಗ್ರಾಮ ಮೆಳೇಹಳ್ಳಿಯಲ್ಲಿ ಒಕ್ಕಲಿಗ ಸಂಪ್ರದಾಯದಂತೆ ನೇರವೇರಿತು.
ರಮೇಶ್ ಅಂತ್ಯಕ್ರಿಯೆ ವಿದಾಯದ ವೇಳೆ ಅವರ ಮಗ ಮೋಹಿತ್, "ಅಪ್ಪ ಬೇಕು, ಅಪ್ಪ ಬೇಕು" ಎಂದು ಕಣ್ಣೀರಿಟ್ಟ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ರಮೇಶ್ ಕೊನೆ ಮಾತು ನೆನಪಿಸಿಕೊಂಡ ಜಿ. ಪರಮೇಶ್ವರ
ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಡಾ.ಜಿ. ಪರಮೇಶ್ವರ ಅವರನ್ನು ತಬ್ಬಿ, ಅಪ್ಪ ಬೇಕು, ಅಪ್ಪ ಬೇಕು ಎಂದು ಮೋಹಿತ್ ಗೋಳಾಡುತ್ತಿದ್ದ. ಇನ್ನು ಮುಂದೆ ನಮಗೆ ಯಾರು ದಿಕ್ಕು ಸಾಹೇಬರೇ ಎಂದು ಗೋಳಾಡುತ್ತಿದ್ದ ರಮೇಶ್ ಪತ್ನಿ ಸೌಮ್ಯಾ, ಪಿಳಿ ಪಿಳಿ ಕಣ್ಣು ಬಿಡುತ್ತಾ ಏನು ನಡೆಯುತ್ತಿದೆ ಎಂದು ಕುತೂಹಲದಿಂದ ನೋಡುತ್ತಿದ್ದ ಮಗು ಶ್ರೇಯಾ ಸ್ಥಿತಿ ನೋಡಿದರೆ ಎಂಥವರಿಗೂ ಕರುಳು ಹಿಂಡುವಂತೆ ಇತ್ತು.
ಡಾ. ಜಿ. ಪರಮೇಶ್ವರ, ಮಾಜಿ ಶಾಸಕ ಬಾಲಕೃಷ್ಣ, ಮಾಗಡಿ ಶಾಸಕ ಎ. ಮಂಜುನಾಥ್ ಸೇರಿದಂತೆ ಅನೇಕ ಗಣ್ಯರು ಮತ್ತು ಎರಡು ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು. ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ಡಾ. ಜಿ. ಪರಮೇಶ್ವರ ನಿರಾಕರಿಸಿದರು. ಮೆಳೇಹಳ್ಳಿಯ ರಮೇಶ್ ನಿವಾಸದಿಂದ ಅಂತಿಮ ಯಾತ್ರೆ ನಡೆಯಿತು. ಅವರದೇ ಜಮೀನಿನಲ್ಲಿ ರಮೇಶ್ ಅಂತ್ಯಕ್ರಿಯೆ ನಡೆಯಿತು.
ಇದಕ್ಕೂ ಮುನ್ನ ಮಾತನಾಡಿದ ರಮೇಶ್ ಸಹೋದರ ಸತೀಶ್, ಆದಾಯ ತೆರಿಗೆ ಇಲಾಖೆ ವಿರುದ್ಧ ಕಿಡಿಕಾರಿದರು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಮನೆಗೆ ಹೋಗಿ ವಿಚಾರಣೆ ನಡೆಸಿದರೂ ಇಲ್ಲವೆಂದು ಸುಳ್ಳು ಹೇಳಿದ್ದಾರೆ. ಮನೆಗೆ ತೆರಳಿರುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಐ. ಟಿ. ಅಧಿಕಾರಿಗಳ ವಿರುದ್ಧ ದೂರು ದಾಖಲಿಸುತ್ತೇವೆ ಎಂದು ಹೇಳಿದರು.