SC, ST ದೌರ್ಜನ್ಯ ತಡೆ ಸಮಿತಿ ನೇಮಕದಲ್ಲಿ ಅಕ್ರಮ: ಡಿಸಿ ಸಭೆಗೆ ಅಡ್ಡಿಪಡಿಸಿದ ದಲಿತ ಮುಖಂಡರು
ರಾಮನಗರ, ಫೆಬ್ರವರಿ 5: ರಾಮನಗರ ಜಿಲ್ಲಾ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಸಮಿತಿ ಆಯ್ಕೆಯಲ್ಲಿ ಆಕ್ರಮ ನಡೆದಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಗೆ ದಲಿತ ಮುಖಂಡರು ಅಡ್ಡಿಪಡಿಸಿದ ಘಟನೆ ನಡೆದಿದೆ.
ನೂತನವಾಗಿ ರಚನೆ ಮಾಡಿರುವ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಸಮಿತಿ ಆಯ್ಕೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ರವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದ ಸಭೆಯನ್ನು ನಡೆಸದಂತೆ ಜಿಲ್ಲಾ ದಲಿತ ಮುಖಂಡರು ಅಡ್ಡಿ ಪಡಿಸಿದರು.
ನೂತನ ಸಮಿತಿಯನ್ನು ಆಯ್ಕೆ ಮಾಡುವಾಗ ಯಾವ ಮಾನದಂಡ ಬಳಸಿದ್ದೀರಿ, ಅಲ್ಲದೇ ಹಲವಾರು ಮಂದಿ ಅರ್ಜಿ ಸಲ್ಲಿಸಿದ್ದರು, ಅಲ್ಲದೇ ಜನಪ್ರತಿನಿಧಿಗಳು ಹಲವಾರು ಮಂದಿಯನ್ನು ಸಮಿತಿಗೆ ಶಿಫಾರಸ್ಸು ಮಾಡಿದ್ದರು. ಯಾವುದನ್ನು ಗಣನೆಗೆ ತೆಗೆದುಕೊಳ್ಳದೇ ನೂತನವಾಗಿ ಮಾಡಿರುವ ಜಿಲ್ಲಾ ಜಾಗೃತಿ ಸಮಿತಿಯನ್ನು ರದ್ದುಪಡಿಸಿ, ಮರು ಆಯ್ಕೆ ಮಾಡುವಂತೆ ದಲಿತ ಮುಖಂಡರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದರು.

ಸದರಿ ಸಮಿತಿಯು ಉದ್ದೇಶ ಪೂರ್ವಕವಾಗಿ ಅಕ್ರಮದಿಂದ ಆಯ್ಕೆ ಮಾಡಿದ್ದು, ಈ ಅಕ್ರಮಕ್ಕೆ ಸಂಪೂರ್ಣ ಕುಮ್ಮಕ್ಕು ರಾಮನಗರ ಜಿಲ್ಲೆ ಸಮಾಜ ಕಲ್ಯಾಣ ಇಲಾಖೆ ಕಚೇರಿಯ ಸಿಬ್ಬಂದಿ ಕೆಂಚಯ್ಯ ಅವರದ್ದು, ಸದರಿ ಜಿಲ್ಲಾ ಉಪ ನಿರ್ದೇಶಕರು ಆಗಿರುವ ಶ್ರೀಮತಿ ಲಲಿತಬಾಯಿ ರವರು ಇವೆಲ್ಲಾ ಗೊತ್ತಿದ್ದರೂ ಸರಿಪಡಿಸುವ ಬದಲಾಗಿ ಅವ್ಯವಹಾರ, ಅಕ್ರಮ ಬಿಲ್ಲುಗಳನ್ನು ಮಾಡಲು ಮುಂದಾಗಿರುತ್ತಾರೆ. ಇವರ ಮೇಲೆ ಶಿಸ್ತುಕ್ರಮ ಜರುಗಿಸಬೇಕೆಂದು ದಲಿತ ಮುಖಂಡರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.

ದಲಿತ ದೌರ್ಜನ್ಯ ಸಮಿತಿಯ ಅಕ್ರಮ ಆಯ್ಕೆಯನ್ನು ರದ್ದುಪಡಿಸಿ, ನೂತನವಾಗಿ ಅರ್ಜಿ ಆಹ್ವಾನಿಸಿ. ಜಿಲ್ಲಾ ಜಾಗೃತಿ ಸಮಿತಿ ಆಯ್ಕೆಯನ್ನು ಪಾರದರ್ಶಕವಾಗಿ ಮಾಡಬೇಕು ಹಾಗೂ ಅಕ್ರಮಕ್ಕೆ ಕಾರಣರಾದ ಅಧಿಕಾರಿಗಳನ್ನು ವಜಾ ಮಾಡುವಂತೆ ಅಗ್ರಹಿಸಿ ದಲಿತ ಮುಖಂಡತು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.












Click it and Unblock the Notifications