ರಾಮನಗರದ ಮತದಾರರಿಗೆ ಗಿಫ್ಟ್ ಕಾರ್ಡ್ ಆಮಿಷ: ಪರೋಕ್ಷವಾಗಿ ಒಪ್ಪಿಕೊಂಡ ಕಾಂಗ್ರೆಸ್ ಶಾಸಕ
ರಾಮನಗರ, ಮೇ 23: 2023ರ ಸಾರ್ವತ್ರಿಕ ಚುನಾವಣೆಗೆ ತೆರೆ ಬಿದ್ದಿದ್ದು, ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು ನೂತನ ಶಾಸಕರು ಈಗಾಗಲೇ ವಿಧಾನಸಭೆಯ ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಈ ನಡುವೆ ರಾಮನಗರ ಜಿಲ್ಲೆಯಲ್ಲಿ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಆಮಿಷವೊಡ್ಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಚುನಾವಣೆ ಸಮಯದಲ್ಲಿ ಜನರಿಗೆ ಗಿಫ್ಟ್ ಕಾರ್ಡ್ ನೀಡಿದ್ದು, ಇನ್ನೂ ಒಂದು ತಿಂಗಳ ಒಳಗೆ ಗಿಫ್ಟ್ ತಲುಪಿಸುವುದಾಗಿ ಘೋಷಣೆ ಮಾಡುವ ಮೂಲಕ ತಾವು ಮತಕ್ಕಾಗಿ ಜನರಿಗೆ ಆಮಿಷ ಒಡ್ಡಿದ್ದನ್ನು ಒಪ್ಪಿಕೊಂಡಿದ್ದಾರೆ.

ರಾಮನಗರದ ನೂತನ ಶಾಸಕ ಇಕ್ಬಾಲ್ ಹುಸೇನ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ನಾನು ಶಾಸಕನಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಕ್ಷೇತ್ರದ ಜನರು ನನಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ನಾನು ಚುನಾವಣೆಯಲ್ಲಿ ನೀಡಿದ್ದ ಗಿಫ್ಟ್ ಕೂಪನ್ಗಳಿಗೆ ಗಿಫ್ಟ್ ತಲುಪಿಸುವ ಭರವಸೆ ನೀಡುವ ಮೂಲಕ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಅಣಕಿಸಿದರು.
ಕ್ಷೇತ್ರದ ಜನರಿಗೆ ಗಿಫ್ಟ್ ಕಾರ್ಡ್ ಕೊಟ್ಟಿದ್ದೇವೆ. ಇನ್ನು ಒಂದು ತಿಂಗಳ ಒಳಗೆ ತಿಂಗಳ ಒಳಗಾಗಿ ಅದರ ಸವಲತ್ತುಗಳನ್ನು ತಲುಪಿಸುತ್ತೇವೆ. ಯಾರಿಗೆ ಗಿಫ್ಟ್ ಕಾರ್ಡ್ ತಲುಪಿಲ್ಲ ಅವರಿಗೂ ತಲುಪಿಸುವ ಕೆಲಸ ಮಾಡುತ್ತೇವೆ. ಒಂದು ಗಿಫ್ಟ್ ಕಾರ್ಡ್ ಕೊಟ್ಟು ಆಮಿಷ ಒಡ್ಡಿಲ್ಲ. ಗಿಫ್ಟ್ ಕಾರ್ಡ್ ಕೊಟ್ಟಿರುವುದು ಆಮಿಷವಲ್ಲ, ಚುನಾವಣಾ ತಂತ್ರಗಾರಿಕೆ ಎಂದು ಇಕ್ಬಾಲ್ ಸಮರ್ಥಿಸಿಕೊಂಡಿದ್ದಾರೆ.
ಮಾತು ಮುಂದುವರಿಸಿದ ಅವರು, ಕ್ಷೇತ್ರದ ಜನರ ಆಶೋತ್ತರಗಳನ್ನು ಈಡೇರಿಸುವ ಕೆಲಸ ನಮ್ಮದು. ತಾಲೂಕಿಗೆ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಎಲ್ಲದಕ್ಕೂ ಆದ್ಯತೆ ನೀಡಿ ಕೆಲಸ ಮಾಡುತ್ತೇನೆ. ಎಲ್ಲಾ ಇಲಾಖೆಯ ಪ್ರತ್ಯೇಕ ಸಭೆ ಮಾಡಿ ಸಮಸ್ಯೆ ಬಗೆ ಹರಿಸುತ್ತೇವೆ. ಬಿಜೆಪಿ ಹಾಗೂ ಜೆಡಿಎಸ್ ಕಾಲದಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತು. ಆದರೆ ನಾವು ಲಂಚಮುಕ್ತ ಸ್ವಚ್ಛ ಆಡಳಿತವನ್ನು ಕೊಡುತ್ತೇವೆ. ಮೊದಲು ಮೂಲಭೂತ ಸೌಕರ್ಯಗಳ ಕೊರತೆ ನೀಗಿಸುತ್ತೇನೆ ಎಂದು ನೂತನ ಶಾಸಕರು ಭರವಸೆ ನೀಡಿದ್ದಾರೆ.

ರಾಮದೇವರ ಬೆಟ್ಟದಲ್ಲಿ ಆಯೋಧ್ಯೆ ಮಾದರಿಯಲ್ಲಿ ರಾಮಮಂದಿರ ಅಭಿವೃದ್ಧಿ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಇಕ್ಬಾಲ್ ಹುಸೇನ್, ನಾನು ರಾಮನ ಭಕ್ತ, ನಾನು ರಾಮನ ಪೂಜೆ ಮಾಡುತ್ತೇವೆ. ರಾಮಮಂದಿರ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡುತ್ತೇವೆ. ಆದರೆ ಮೊದಲ ಆದ್ಯತೆ ಮೂಲಭೂತ ಸೌಕರ್ಯಗಳಿಗೆ ಕೊಡುತ್ತೇನೆ. ಜನರ ಸೇವಕನಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.











Click it and Unblock the Notifications