ಸ್ಥಳೀಯ ಭಾಷೆ ಕಲಿಕೆಗೆ ರಾಷ್ಟ್ರೀಯ ಶಿಕ್ಷಣ ನೀತಿ ಪೂರಕ: ಉನ್ನತ ಶಿಕ್ಷಣ ಸಚಿವ
ರಾಮನಗರ, ನವೆಂಬರ್ 1: "ರಾಷ್ಟ್ರೀಯ ಶಿಕ್ಷಣ ನೀತಿ ಸ್ಥಳೀಯ ಭಾಷೆಗೆ ಆದ್ಯತೆ ನೀಡಿ ಗುಣಮಟ್ಟದ ಶಿಕ್ಷಣ ನೀಡುತ್ತದೆ," ಎಂದು ಉನ್ನತ ಶಿಕ್ಷಣ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದರು.
ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ನಂತರ ಮಾತನಾಡಿದ ಅವರು, "ಸ್ಥಳೀಯ ಭಾಷೆ ಕಲಿಕೆಯ ಶಕ್ತಿ ಎಂಬ ಪರಿಕಲ್ಪನೆಯಲ್ಲಿ ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಸರ್ಕಾರ ಆದ್ಯತೆ ನೀಡಿದೆ. ವೃತ್ತಿಪರ ಕೋರ್ಸ್ಗಳಾದ 4 ಇಂಜಿನಿಯರಿಂಗ್ ಕಾಲೇಜುಗಳನ್ನು ಕನ್ನಡ ಮಾಧ್ಯಮದಲ್ಲಿ ಪ್ರಾರಂಭಿಸಿದೆ," ಎಂದರು.
'ರಾಷ್ಟ್ರೀಯ ಶಿಕ್ಷಣ ನೀತಿ-2020' ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕಾಗಿ ಕಾರ್ಯಪಡೆ ರಚಿಸಿ ಅನುಷ್ಠಾನಗೊಳಿಸುತ್ತಿರುವ ದೇಶದ ಮೊಟ್ಟ ಮೊದಲ ರಾಜ್ಯ ಕರ್ನಾಟಕ. ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳ ಕಲಿಕೆ ಆನ್ಲೈನ್ ಮೂಲಕ ಮುಂದುವರಿಸಲು ಸರ್ಕಾರ 1.10 ಲಕ್ಷ ಲ್ಯಾಪ್ಟಾಪ್ ಮತ್ತು 1.55 ಲಕ್ಷ ಟ್ಯಾಬ್ಲೆಟ್ಗಳನ್ನು ವಿತರಿಸಿದೆ.

ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಟಾಟಾ ಟೆಕ್ನಾಲಜೀಸ್ ಲಿಮಿಟೆಡ್ ಸಹಭಾಗಿತ್ವದಲ್ಲಿ ರಾಜ್ಯದ 150 ಸರ್ಕಾರಿ "ಐಟಿಐಗಳನ್ನು ಇಂಡಸ್ಟ್ರಿ 4.0 ರಡಿ ಅಂತರರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುತ್ತಿದೆ. ರಾಮನಗರದಲ್ಲಿ ಸ್ಕಿಲ್ ಹಬ್ ಹಾಗೂ ಮಾಗಡಿ ತಾಲ್ಲೂಕಿನ ಚಿಕ್ಕಕಲ್ಯದಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಜಿಟಿಟಿಸಿ ಕಾಲೇಜು ಪ್ರಾರಂಭಿಸಲಾಗಿದೆ," ಎಂದರು.
ಕೈಗಾರಿಕಾ ವಲಯ ಸ್ಥಾಪನೆಗೆ ಒತ್ತು
"ವಿಶ್ವದಲ್ಲೇ ತಂತ್ರಜ್ಞಾನದ ಕೌಶಲ್ಯದಲ್ಲಿ ಕರ್ನಾಟಕ 23ನೇ ಸ್ಥಾನದಲ್ಲಿದೆ. ಎಜುಟೆಕ್, ಮೆಡಿಟೆಕ್, ಅಗ್ರಿಟೆಕ್ ಇವುಗಳ ಲಾಭವನ್ನು ಎಲ್ಲರೂ ಪಡೆಯಬೇಕು ಎಂದರು. ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ 'ಮಹಿಳಾ ಉದ್ದಿಮೆಗಳ ಪಾರ್ಕ್'ನಲ್ಲಿ 100ಕ್ಕೂ ಹೆಚ್ಚು ಉದ್ದಿಮೆದಾರರು ಘಟಕ ಪ್ರಾರಂಭಿಸಲಿದ್ದಾರೆ," ಎಂದು ತಿಳಿಸಿದರು.

"ಕರ್ನಾಟಕ ಮುದ್ರಣಕಾರರ ಸಂಘದ ವತಿಯಿಂದ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗುವ ಪ್ರಿಂಟೆಕ್ ಕ್ಲಸ್ಟರ್ನಲ್ಲಿ 89 ಪ್ರಿಂಟಿಂಗ್ ಉದ್ಯಮಗಳಿಗೆ ಹಂಚಿಕೆ ಮಾಡಿದೆ. ರಾಮನಗರ ಜಿಲ್ಲೆಯಲ್ಲಿ 75 ಭಾರೀ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿದ್ದು, 7399 ಕೋಟಿ ರೂ.ಗಳ ಬಂಡವಾಳ ಹೂಡಿಕೆಯಾಗಿ, 32 ಸಾವಿರ ಜನರಿಗೆ ಉದ್ಯೋಗ ಲಭಿಸಿದೆ," ಎಂದರು.
"ಮಾಗಡಿ ತಾಲ್ಲೂಕಿನ ಮರೂರಿನಲ್ಲಿ ಕೈಗಾರಿಕೆ ವಿಸ್ತರಣೆಗಾಗಿ 2000 ಎಕರೆ ಪ್ರದೇಶವನ್ನು ಹಾಗೂ ಬಿಡದಿಯಲ್ಲಿ ಮಾಡಲ್ ಟೌನ್ಶಿಪ್ ಮಾಡಲು ಚಿಂತಿಸಲಾಗುತ್ತಿದೆ," ಎಂದು ಹೇಳಿದರು.
ಕೆಂಪೇಗೌಡರ ಸಮಾಧಿ ಅಭಿವೃದ್ಧಿ
"ಮಾಗಡಿ ತಾಲ್ಲೂಕಿನ ಕೆಂಪಾಪುರದಲ್ಲಿರುವ ನಾಡಪ್ರಭು ಕೆಂಪೇಗೌಡರ ಸಮಾಧಿಯನ್ನು 15 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟಾರೆಯಾಗಿ 30 ಕೋಟಿ ರೂ.ಗಳ ವೆಚ್ಚದಲ್ಲಿ ಕೆಂಪಾಪುರವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಪಡಿಸುವುದರ ಜೊತೆಗೆ ಇಲ್ಲಿನ ಕೆರೆಗಳನ್ನು ಸಹ ಅಭಿವೃದ್ಧಿ ಪಡಿಸಲಾಗುವುದು."

ವೀರಪುರ ಮತ್ತು ಬಾನಂದೂರು ಅಭಿವೃದ್ಧಿ
"ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ 111 ಅಡಿ ಪುತ್ಥಳಿ ನಿರ್ಮಾಣ ಸಾಂಸ್ಕೃತಿಕ ಹಾಗೂ ಪಾರಂಪರಿಕ ಪಾರ್ಕ್ ಸರ್ಕಾರ 25 ಕೋಟಿ ಅನುದಾನ ನೀಡಿದ್ದು, ಕೆಆರ್ಐಡಿಎಲ್ ಸೇವಾ ಶುಲ್ಕ ಪಡೆಯದೆ ಹಣವನ್ನು ಕಾಮಗಾರಿಗೆ ವಿನಿಯೋಗಿಸಲಿದೆ."
"ಅಂತೆಯೇ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರಾದ ಬಿಡದಿ ಹೋಬಳಿಯ ಬಾನಂದೂರು ಗ್ರಾಮದಲ್ಲಿ ವಿಶ್ವದರ್ಜೆಯ ಸಾಂಸ್ಕೃತಿಕ ಹಾಗೂ ಪಾರಂಪರಿಕ ಕೇಂದ್ರವನ್ನು ಸ್ಥಾಪಿಸಲು 25 ಕೋಟಿ ರೂ. ಮೊದಲನೇ ಕಂತಾಗಿ ತಲಾ 14.50 ಕೋಟಿ ರೂ ಗಳನ್ನು ಬಿಡುಗಡೆ ಮಾಡಲಾಗಿದೆ. ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ," ಎಂದರು.
ರಾಮನಗರ ಜಿಲ್ಲೆಯಲ್ಲಿ 263 ಕೋಟಿ ರೈತರಿಗೆ ಪ್ರೋತ್ಸಾಹ ಧನ ನೀಡಲಾಗಿದೆ
"ಜಿಲ್ಲೆಯಲ್ಲಿ ಶೇ.80ಕ್ಕೂ ಹೆಚ್ಚು ರೈತರು 2 ಎಕರೆಗಿಂತ ಕಡಿಮೆ ಭೂಮಿ ಹೊಂದಿದ್ದಾರೆ. ರೈತರಿಗೆ ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ದೊರಕಿ ಅವರು ಸ್ವಾಭಿಮಾನದ ಬದುಕು ನಡೆಸಬೇಕು ಎಂಬ ಆಶಾಯದೊಂದಿಗೆ ಕೃಷಿ ಕಲ್ಪ ಸೇರಿದಂತೆ ಹಲವಾರು ಎಫ್ಪಿಒಗಳಿಗೆ ಕಾಯಕಲ್ಪ ನೀಡಲಾಗಿದೆ. ರಾಮನಗರ ಜಿಲ್ಲೆಯಲ್ಲಿ 1.21 ಲಕ್ಷ ರೈತರಿಗೆ ಕೇಂದ್ರದ ಪಾಲಾದ 200 ಕೋಟಿ ರೂ. ಮತ್ತು ರಾಜ್ಯದ ಕಂತಿನ ಪಾಲಾದ 63 ಕೋಟಿ ರೂ.ಗಳಂತೆ ಒಟ್ಟು 263 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದೆ," ಎಂದರು.
ಜಿಲ್ಲೆಯಲ್ಲಿ ಶೇ.92 ರಷ್ಟು ಕೋವಿಡ್ ಲಸಿಕೆ ನೀಡಲಾಗಿದೆ
"ರಾಮನಗರ ಜಿಲ್ಲೆಯಲ್ಲಿ ಕೋವಿಡ್-19 ಲಸಿಕಾ ಕಾರ್ಯಕ್ರಮದಡಿಯಲ್ಲಿ 8.23 ಲಕ್ಷ ಜನರ ಗುರಿಯನ್ನು ಹೊಂದಿದೆ. ಈ ಪೈಕಿ 7.50 ಲಕ್ಷ ಮಂದಿಗೆ ಮೊದಲ ಡೋಸ್ ನೀಡಿ ಶೇ.92ರಷ್ಟು ಪ್ರಗತಿ ಸಾಧಿಸಿದೆ. 4.50 ಲಕ್ಷ ಮಂದಿಗೆ 2ನೇ ಡೋಸ್ ನೀಡಲಾಗಿದೆ. ಮೊದಲನೇ ಡೋಸ್ ನೀಡುವ ಕಾರ್ಯದಲ್ಲಿ ರಾಜ್ಯಕ್ಕೆ ಜಿಲ್ಲೆ 5ನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ 178 ಹಳ್ಳಿಗಳು ಶೇಕಡಾ 100ರಷ್ಟು ಲಸಿಕಾ ಪ್ರಗತಿಯನ್ನು ಸಾಧಿಸಿರುತ್ತದೆ," ಎಂದರು.
ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ತ್ರಿಚಕ್ರ ವಾಹನ ವಿತರಣೆ
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ರಾಮನಗರ ಜಿಲ್ಲೆಯನ್ನು ಸ್ವಚ್ಛ ಸುಂದರ ಹಾಗೂ ನೈರ್ಮಲ್ಯ ಮುಕ್ತ ಮಾಡುವ ಭಾಗವಾಗಿ 59 ಗ್ರಾಮ ಪಂಚಾಯತಿಗಳಿಗೆ ಘನ ತ್ಯಾಜ್ಯ ನಿರ್ವಹಣೆಗಾಗಿ ಬಿ.ಎಸ್- 4 ಮಾದರಿಯ 59 ತ್ರಿಚಕ್ರ ವಾಹನಗಳನ್ನು ಹಾಗೂ 2,23,860 ಕಸದ ಬುಟ್ಟಿಗಳನ್ನು ಉನ್ನತ ಶಿಕ್ಷಣ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಇಂದು ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ವಿತರಿಸಿದರು.
ತ್ರಿಚಕ್ರ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಇದರ ವೆಚ್ಚ 2.53 ಕೋಟಿ ಕಸದ ಬುಟ್ಟಿಗಳ ವೆಚ್ಚ 1.78 ಕೋಟಿ ರೂ. ಆಗಿರುತ್ತದೆ. ಮನೆಯ ಹಂತದಲ್ಲೆ ಕಸವನ್ನು ವಿಂಗಡಿಸಲು ಮನೆಗೆ ಎರಡರಂತೆ ಕಸದ ಬುಟ್ಟಿಗಳನ್ನು ಹಾಗೂ ವಿಂಗಡಿಸಿದ ತ್ಯಾಜ್ಯಗಳನ್ನು ಘನ ತ್ಯಾಜ್ಯ ಘಟಕಗಳಿಗೆ ಸಾಗಿಸಲು ತ್ರಿಚಕ್ರ ವಾಹನವನ್ನು ವಿತರಿಸಲಾಗಿರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ರಾಕೇಶ್ ಕುಮಾರ್. ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್, ಅಪರ ಜಿಲ್ಲಾಧಿಕಾರಿ ಜವರೇಗೌಡ. ಟಿ ಉಪಸ್ಥಿತರಿದ್ದರು.












Click it and Unblock the Notifications