ರಾಮನಗರ; ಹಳ್ಳಿಗಳ ಅಭಿವೃದ್ಧಿ ವೀಕ್ಷಿಸಿದ ಸಚಿವ ಗಿರಿರಾಜ್ ಸಿಂಗ್
ರಾಮನಗರ, ಸೆಪ್ಟೆಂಬರ್ 23; "ಮನರೇಗಾ ಯೋಜನೆಯಡಿ ರೈತರು ತಮ್ಮ ಬೆಳೆಗಳನ್ನು ಅಭಿವೃದ್ಧಿ ಪಡಿಸಿಕೊಳ್ಳಬಹುದಾಗಿದೆ" ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಸಚಿವ ಗಿರಿರಾಜ್ ಸಿಂಗ್ ಹೇಳಿದರು.
ಸಚಿವರು ರಾಮನಗರ ಜಿಲ್ಲೆಯ ರಾಮನಗರ, ಮಾಗಡಿ ತಾಲೂಕಿಗೆ ಬುಧವಾರ ಭೇಟಿ ನೀಡಿದ್ದರು. ಮಾಗಡಿಯ ಮೋಟಗೊಂಡನಹಳ್ಳಿಯಲ್ಲಿ ಕಲ್ಯಾಣಿ ಅಭಿವೃದ್ಧಿ ಕೆಲಸ, ಪೆಮ್ಮನಹಳ್ಳಿಯಲ್ಲಿ ಶಾಲಾ ಹಾಗೂ ಅಂಗನವಾಡಿ ಕಟ್ಟಡ ಅಭಿವೃದ್ಧಿ ವೀಕ್ಷಣೆ ಮಾಡಿದರು.
ಸೋಲೂರಿನ ರೈತರ ಜಮೀನಿನಲ್ಲಿ ಶ್ರೀ ಗಂಧದ ಬೆಳೆ, ರಾಮನಗರ ತಾಲೂಕಿನ ಹಾಗಲಹಳ್ಳಿಯಲ್ಲಿ ರೇಷ್ಮೆ ಬೆಳೆ ಹಾಗೂ ರೇಷ್ಮೆ ಚಟುವಟಿಕೆ, ಚನ್ನಪಟ್ಟಣ ತಾಲೂಕಿನ ಮಾಕಳಿಯಲ್ಲಿ ಜಲಾನಯನ ಅಭಿವೃದ್ಧಿ ಕೆಲಸಗಳನ್ನು ಸಚಿವರು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಲೋಕಸಭಾ ಸದಸ್ಯ ಡಿ. ಕೆ. ಸುರೇಶ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಅತೀಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಸೇರಿದಂತೆ ಇತರ ಅಧಿಕಾರಿಗಳಿದ್ದರು.

ರೇಷ್ಮೆ ಬೆಳೆ ಬಗ್ಗೆ ಮಾಹಿತಿ ಸಂಗ್ರಹ
ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಸಚಿವ ಗಿರಿರಾಜ್ ಸಿಂಗ್ ರಾಮನಗರ ತಾಲ್ಲೂಕಿನ ಸುಗ್ಗನಹಳ್ಳಿಯ ಗ್ರಾಮ ಪಂಚಾಯತಿಯ ಹಾಗಲಹಳ್ಳಿಯಲ್ಲಿ ಶಿವರಾಮಯ್ಯ ಅವರ ತೋಟಕ್ಕೆ ಭೇಟಿ ನೀಡಿ ರೇಷ್ಮೆ ಬೆಳೆಯನ್ನು ವೀಕ್ಷಣೆ ಮಾಡಿದರು. ಒಂದು ಎಕರೆ ರೇಷ್ಮೆ ಬೆಳೆಯಲ್ಲಿ ರೈತರು ಎಷ್ಟು ಅದಾಯ ಗಳಿಸಬಹುದು? ಎಂದು ಮಾಹಿತಿಯನ್ನು ಪಡೆದರು.
ಶಿವರಾಮಯ್ಯ ತೋಟದಲ್ಲಿ ಹಿಪ್ಪುನೇರಳೆ ತೋಟದ ನಿರ್ವಹಣೆ, ಚಾಕಿ ಸಾಕಾಣಿಕೆ ಕೇಂದ್ರ, ರೇಷ್ಮೆ ಹುಳು ಸಾಕಾಣಿಕೆಯಿಂದ ರೇಷ್ಮೆ ವಸ್ತ್ರ ತಯಾರಿಕೆ ವರೆಗಿನ ಪ್ರದರ್ಶನವನ್ನು ಗಿರಿರಾಜ್ ಸಿಂಗ್ ವೀಕ್ಷಿಸಿದರು.

ರೇಷ್ಮೆ ಬೆಳೆ, ರೇಷ್ಮೆ ಉತ್ಪಾದನೆ
ರೇಷ್ಮೆ ಇಲಾಖೆಯ ಉಪ ನಿರ್ದೇಶಕ ಪುಟ್ಟಸ್ವಾಮಿ 2021-22 ನೇ ಸಾಲಿನಲ್ಲಿ ಮನರೇಗಾ ಯೋಜನೆಯಡಿ 2070 ಕಾಮಗಾರಿಗಳನ್ನು ಕೈಗೊಂಡು 1721 ಎಕರೆ ಹಿಪ್ಪುನೇರಳೆ ಬೆಳೆಯನ್ನು ವಿಸ್ತರಿಸಲಾಗಿದೆ. 320570 ಮಾನವ ದಿನ ಸೃಷ್ಟಿಸಿ 9 ಕೋಟಿ ಖರ್ಚು ಮಾಡಲಾಗಿದೆ ಎಂದು ವಿವರಣೆ ನೀಡಿದರು. ವಿವಿಧ ರೀತಿಯ ರೇಷ್ಮೆ ಹುಳು, ರೇಷ್ಮೆ ಸಾಕಾಣಿಕೆ, ರೇಷ್ಮೆ ಬೆಳೆ, ರೇಷ್ಮೆ ಉತ್ಪಾದನೆ ಕುರಿತು ಸಚಿವ ಗಿರಿರಾಜ್ ಸಿಂಗ್ಗೆ ವಿವರಣೆ ನೀಡಲಾಯಿತು.

ಶ್ರೀಗಂಧ ಗಿಡಗಳ ವೀಕ್ಷಣೆ
"ಶ್ರೀಗಂಧದ ಗಿಡಗಳ ನಡುವೆ ಇರುವ ಸ್ಥಳಗಳಲ್ಲಿ ರೈತರು ಅರಿಶಿಣ, ಶುಂಠಿ ಮುಂತಾದ ಬೆಳೆಗಳನ್ನು ಬೆಳೆಯುವುದರಿಂದ ಹೆಚ್ಚಿನ ಆದಾಯ ದೊರೆಯುತ್ತದೆ. ನರೇಗಾ ವ್ಯಾಪ್ತಿಗೆ ಶ್ರೀಗಂಧದ ಬೆಳೆಯನ್ನು ತಂದಿರುವುದರಿಂದ ಮುಂದಿನ ದಿನಗಳಲ್ಲಿ ಗಂಧದ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಬಹುದು" ಎಂದು ಸಚಿವ ಗಿರಿರಾಜ್ ಸಿಂಗ್ ಹೇಳಿದರು.
ಮಾಗಡಿ ತಾಲ್ಲೂಕಿನ ಸೋಲೂರು ಗ್ರಾಮ ಪಂಚಾಯತಿಯಲ್ಲಿ ಮಂಜುನಾಥ ಹಾಗೂ ಸತೀಶ್ ತೋಟದಲ್ಲಿ ಮನರೇಗಾ ಯೋಜನೆಯಡಿ ಅಭಿವೃದ್ಧಿ ಪಡಿಸಿರುವ ಶ್ರೀ ಗಂಧದ ಬೆಳೆಯನ್ನು ಸಚಿವ ಗಿರಿರಾಜ್ ಸಿಂಗ್ ವೀಕ್ಷಿಸಿದರು, ರೈತರೊಂದಿಗೆ ಮಾತನಾಡಿದರು.
Recommended Video

ಕೋಳಿ ಸಾಕಾಣಿಕೆಯಿಂದ ಆದಾಯ
ಸಚಿವ ಗಿರಿರಾಜ್ ಸಿಂಗ್ ಸೋಲೂರಿನಲ್ಲಿ ಶ್ರೀಗಂಧದ ಬೆಳೆ ವೀಕ್ಷಿಸಿದರು. ಕೇಂದ್ರ ಸಚಿವರು ರೈತರೊಂದಿಗೆ ಮಾತನಾಡಿ ಒಂದು ಎಕರೆ ಜಮೀನು ಇರುವ ರೈತರು ಸಹ ಹೆಚ್ಚಿನ ಆದಾಯಗಳಿಸಿ ಜೀವನ ನಡೆಸುವಂತಾಗಬೇಕು. 10 ಚದರ ಅಡಿಯಲ್ಲಿ ಒಂದು ಕೋಳಿ ಸಾಕಾಣಿಕೆ ಮಾಡಬಹುದು. ಕೋಳಿ ಮಾರಾಟದಿಂದ ರೈತನಿಗೆ ಆದಾಯವಾದರೆ ಸಾಕಾಣಿಕೆಯಿಂದ ಬೆಳೆಗಳಿಗೆ ಗೊಬ್ಬರ ದೊರೆಯುತ್ತದೆ ಎಂದರು.
ಚನ್ನಪಟ್ಟಣದ ಮಾಕಳಿ ಗ್ರಾಮದಲ್ಲಿ ಮನರೇಗಾ ಯೋಜನೆಯಡಿ ಕೈಗೊಂಡಿರುವ ಜಲಾನಯನ ಅಭಿವೃದ್ಧಿ ಕಾಮಗಾರಿಗಳಿಂದ ರೈತರಿಗೆ ಆಗಿರುವ ಅನುಕೂಲತೆಗಳ ಬಗ್ಗೆ ಸಚಿವರು ಮಾಹಿತಿ ಪಡೆದರು.












Click it and Unblock the Notifications