ಮೇಕೆದಾಟು ಪಾದಯಾತ್ರೆ ಎಪೆಕ್ಟ್; ರಾಮನಗರ ಎಸ್ಪಿ ವರ್ಗಾವಣೆ
ರಾಮನಗರ, ಜನವರಿ 19: ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ನಡುವಿನ ಮೇಕೆದಾಟು ಪಾದಯಾತ್ರೆ ಸಂಘರ್ಷದಲ್ಲಿ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲರಾದ ರಾಮನಗರ ಎಸ್ಪಿ ಎಸ್. ಗಿರೀಶ್ಗೆ ರಾಜ್ಯ ಸರ್ಕಾರ ವರ್ಗಾವಣೆ ಶಿಕ್ಷೆ ನೀಡಿದೆ.
ಆಡಳಿತದಲ್ಲಿ ಚುರುಕು ಮೂಡಿಸುವ ಕಾರಣ ನೀಡಿ ರಾಮನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯದಲ್ಲಿದ್ದ ಎಸ್. ಗಿರೀಶ್ ಅವರನ್ನು ಬೆಂಗಳೂರಿನ ವೈಟ್ ಫೀಲ್ಡ್ ಡಿಸಿಪಿಯಾಗಿ ನೇಮಕ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇನ್ನು ರಾಮನಗರ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಇಂಟೆಲಿಜೆನ್ಸಿ ವಿಭಾಗದಲ್ಲಿ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ. ಸಂತೋಷ್ ಬಾಬುರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಕೋವಿಡ್ ಭೀತಿ ನಡುವೆ ಜ. 9ರಂದು ರಾಜ್ಯ ಸರ್ಕಾರಕ್ಕೆ ಸವಾಲೆಸೆದು ಮೇಕೆದಾಟು ಬಳಿಯಿಂದ ಬೆಂಗಳೂರಿನ ನ್ಯಾಷನಲ್ ಕಾಲೇಜು ಗ್ರೌಂಡ್ನವರೆಗೆ ಸುಮಾರು 160 ಕಿಮೀ, 11 ದಿನದ ಪಾದಯಾತ್ರೆಯನ್ನು ಕಾಂಗ್ರೆಸ್ ಹಮ್ಮಿಕೊಂಡಿತ್ತು.
ಕಾಂಗ್ರೆಸ್ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಮೇಕೆದಾಟು ಪಾದಯಾತ್ರೆ ಸರ್ಕಾರದ ಎಲ್ಲಾ ಕೋವಿಡ್ ನಿಯಮಗಳನ್ನು ಗಾಳಿ ತೂರಿದಲ್ಲದೇ ಪಾದಯಾತ್ರೆಯಲ್ಲಿ ಪದೇಪದೇ ಕಾಂಗ್ರೆಸ್ ನಾಯಕರು, ಸರ್ಕಾರಕ್ಕೆ ತಾಕತ್ತು ಇದ್ದರೆ ನಮ್ಮನ್ನು ಬಂಧಿಸಿ ಎಂದು ಸವಾಲು ಹಾಕುವ ಮೂಲಕ ಸರ್ಕಾರವನ್ನು ಕೆರಳಿಸಿದ್ದರು.

ನಾಲ್ಕು ದಿನ ಸಾಗಿದ ಮೇಕೆದಾಟು ಪಾದಯಾತ್ರೆ ಹೈಕೋರ್ಟ್ ಮಧ್ಯ ಪ್ರವೇಶದಿಂದ ರಾಮನಗರದಲ್ಲಿ ಅಂತ್ಯಗೊಂಡಿತ್ತು. ಪಾದಯಾತ್ರೆಯಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನರು ಪಾದಯಾತ್ರೆ ಪಾಲ್ಗೊಂಡಿದ್ದರು.
Recommended Video
ಕಾಂಗ್ರೆಸ್ ಮತ್ತು ಸರ್ಕಾರದ ನಡುವೆ ನಡೆದ ಮೇಕೆದಾಟು ಪಾದಯಾತ್ರೆ ಜಟಾಪಟಿಯಲ್ಲಿ ಇಕ್ಕಟಿಗೆ ಸಿಕ್ಕ ಅಧಿಕಾರಿಗಳು ಸರ್ಕಾರದ ರೀತಿಯಲ್ಲೇ ಕಾದು ನೋಡುವ ತಂತ್ರಕ್ಕೆ ಮಾರುಹೋಗಿ, ಪಾದಯಾತ್ರೆ ನಿಯಂತ್ರಣ ಮಾಡುವಲ್ಲಿ ಎಡವಿದರ ಪರಿಣಾಮ ರಾಮನಗರ ಎಸ್ಪಿ ಎಸ್.ಗಿರೀಶ್ರವರಿಗೆ ರಾಜ್ಯ ಸರ್ಕಾರ ವರ್ಗಾವಣೆ ಶಿಕ್ಷೆ ನೀಡಿದೆ ಎನ್ನಲಾಗುತ್ತಿದೆ.












Click it and Unblock the Notifications